ಆ್ಯಪ್ನಗರ

ನಂದಗುಡಿ ರಾಜ್ಯ ಹೆದ್ದಾರಿ ಬದಿಯಲ್ಲೆ ತ್ಯಾಜ್ಯ ವಿಲೇವಾರಿ

ರಾತ್ರಿ ಸಮಯದಲ್ಲಿ ಅಕ್ರಮವಾಗಿ ರಸ್ತೆ ಬದಿಯಲ್ಲಿ ಕಸ ಹಾಗೂ ರಾಸಾಯನಿಕ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವ ಘಟನೆ ಹೊಸಕೋಟೆ ತಾಲೂಕಿನ ನಂದಗುಡಿಯ ರಾಜ್ಯ ಹೆದ್ದಾರಿಯಲ್ಲಿ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ.

Vijaya Karnataka 31 Dec 2018, 5:00 am
ನಂದಗುಡಿ: ರಾತ್ರಿ ಸಮಯದಲ್ಲಿ ಅಕ್ರಮವಾಗಿ ರಸ್ತೆ ಬದಿಯಲ್ಲಿ ಕಸ ಹಾಗೂ ರಾಸಾಯನಿಕ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವ ಘಟನೆ ಹೊಸಕೋಟೆ ತಾಲೂಕಿನ ನಂದಗುಡಿಯ ರಾಜ್ಯ ಹೆದ್ದಾರಿಯಲ್ಲಿ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ.
Vijaya Karnataka Web nandagudi waste disposal at state highway
ನಂದಗುಡಿ ರಾಜ್ಯ ಹೆದ್ದಾರಿ ಬದಿಯಲ್ಲೆ ತ್ಯಾಜ್ಯ ವಿಲೇವಾರಿ


ಬೆಂಗಳೂರು-ಚಿಂತಾಮಣಿ ರಾಜ್ಯ ಹೆದ್ದಾರಿಯ ರಸ್ತೆ ಬದಿಯಲ್ಲಿ ಅರಣ್ಯ ಪ್ರದೇಶವಿದ್ದು ರಾತ್ರಿಯ ಸಮಯದಲ್ಲಿ ಬಿಬಿಎಂಪಿಯ ಕಸ ಹಾಗೂ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ಹಾಗೂ ಅನುಪಯುಕ್ತ ವಸ್ತುಗಳ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಸುರಿದು ಬೆಂಕಿ ಇಟ್ಟು ಇಲ್ಲಿನ ಪರಿಸರ ಹಾಳು ಮಾಡುತ್ತಿದ್ದಾರೆ.

ಮಾಂಸದ ತ್ಯಾಜ್ಯವನ್ನು ರಸ್ತೆಗಳ ಬದಿಯಲ್ಲಿ ತಂದು ಸುರಿಯುತ್ತಿದ್ದು, ನಾಯಿಗಳು ಮಾಂಸದ ತ್ಯಾಜ್ಯವನ್ನು ತಿನ್ನಲು ನಾಯಿಗಳು, ಕಾಗೆಗಳು, ಹದ್ದುಗಳ ಹಿಂಡು ಗುಂಪುಗೂಡಿ ರಸ್ತೆಯೆಲ್ಲಾ ಓಡಾಡಿ ದ್ವಿಚಕ್ರ ವಾಹನ ಸವಾರರಿಗೆ ಅಡ್ಡಿಯುಂಟು ಮಾಡಿ ಹಲವು ನಾಯಿಗಳು ರಸ್ತೆಯಲ್ಲೆ ತಮ್ಮ ಪ್ರಾಣ ಕಳೆದುಕೊಳ್ಳುತ್ತಿವೆ.

ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯವನ್ನು ವಿವಿಧ ಬಗೆಯ ಕಸದ ತ್ಯಾಜ್ಯ ಸುರಿದು ಬೆಂಕಿ ಇಡುವುದರಿಂದ ಕೆಟ್ಟ ವಾಸನೆ, ದಟ್ಟ ಹೊಗೆಯಿಂದ ವಾಯುಮಾಲಿನ್ಯ ಉಂಟಾಗಿ ಕರಪನಹಳ್ಳಿ, ಕೆ.ಸತ್ಯವಾರ, ನಂದಗುಡಿ, ಡಿ.ಶೆಟ್ಟಹಳ್ಳಿ ಇನ್ನೂ ಹಲವು ಗ್ರಾಮಗಳ ಗ್ರಾಮಸ್ಥರು ನಾನಾ ರೀತಿಯ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಪ್ರತಿನಿತ್ಯ ಆಸ್ಪತ್ರೆಗೆ ಅಲೆಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿಯ ಬದಿಯಲ್ಲಿ ಎಲ್ಲಿ ನೋಡಿದರೂ ನಿತ್ಯ ಟನ್‌ ಗಟ್ಟಲೆ ಕಸದ ರಾಶಿ ಶೇಖರಣೆಯಾಗುತ್ತಿರುವದು ಒಂದೆಡೆಯಾದರೆ, ಬೆಂಕಿ ಇಟ್ಟು ರಾಸಾಯನಿಕ ವಸ್ತುಗಳ ಹೊಗೆ ಈ ಭಾಗದ ಜನರ ಬದುಕನ್ನು ಹಾಳು ಮಾಡುತ್ತಿದೆ. ರಸ್ತೆಯಲ್ಲಿ ಓಡಾಡುವ ದ್ವಿಚಕ್ರ ಸವಾರರ ಮೇಲೆ ನಾಯಿಗಳು ಬಂದೆರಗಿ ಹಲವು ಬಾರಿ ಅಪಘಾತ ಸಂಭವಿಸಿ ಜೀವಕ್ಕೆ ಹಾನಿಯಾಗಿರುವ ಘಟನೆಗಳು ನಡೆಯುತ್ತಿದೆ.

ಕಸ ಹಾಗೂ ತ್ಯಾಜ್ಯದಿಂದ ಕೆಟ್ಟ ವಾಸನೆ ಹೊರಹೊಮ್ಮುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಸೊಳ್ಳೆ ಹಾಗೂ ನೊಣಗಳ ಹಾವಳಿ ವಿಪರೀತವಾಗಿ ಜನರು, ವಾಹನ ಸವಾರರಿಗೆ ನಾನಾ ರೀತಿಯ ಸಂಕಷ್ಟ ಎದುರಾಗಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಸ ಮತ್ತು ತ್ಯಾಜ್ಯ ಸುರಿಯುವವರ ಮೇಲೆ ಕಾನೂನು ಕ್ರಮ ಕೈಗೊಂಡು ಇಲ್ಲಿನ ಪರಿಸರ ರಕ್ಷಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಟೆಂಪೋ, ಲಾರಿಗಳಲ್ಲಿ ರಾತ್ರಿ ವೇಳೆ ರಸ್ತೆಬದಿ ಹಾಗೂ ಕಾಲುವೆಗಳಲ್ಲಿ ಕಸದ ತ್ಯಾಜ್ಯ ತಂದು ಸುರಿಯುತ್ತಾರೆ. ಕೆಟ್ಟ ವಾಸನೆ ಬರುತ್ತೆ, ಓಡಾಡಲು ಆಗುತ್ತಿಲ್ಲ, ಯಾರೂ ಕೇಳುವವರೇ ಇಲ್ಲ,

-ಮುನಿರಾಜ್‌, ಗ್ರಾಮಸ್ಥ, ಕರಪನಹಳ್ಳಿ

ಕೆಲವು ಸಲ ತ್ಯಾಜ್ಯ ಸುರಿಯುವ ಲಾರಿಗಳನ್ನು ಹಿಡಿದು ಎಚ್ಚರಿಕೆಯನ್ನು ನೀಡಿದ್ದೇವೆ, ಯಾರ ಗಮನಕ್ಕೂ ಬಾರದಂತೆ ಕಸವನ್ನು ಸುರಿಯುತ್ತಿದ್ದು ಇದರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು.

-ಮುನಿಯಪ್ಪ, ಮಾಜಿ ಗ್ರಾಪಂ ಸದಸ್ಯ, ಚೊಕ್ಕಸಂದ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ