ನಾಗರಾಜು.ಎ ದೊಡ್ಡಬಳ್ಳಾಪುರ
ನೇಕಾರಿಕೆಯ ತವರು ದೊಡ್ಡಬಳ್ಳಾಪುರದ ವಿದ್ಯಾನಗರದವರಾದ ಡಿ.ಎನ್.ಸತ್ಯನಾರಾಯಣ ಹಾಗೂ ಶಶಿಕಲಾರ ಮಗ ಮನೋಜ್ಕುಮಾರ್.ಡಿ.ಎಸ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 590 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಮತ್ತು ರಾಜ್ಯಕ್ಕೆ 6ನೇ ಸ್ಥಾನ ಗಳಿಸಿದ್ದಾನೆ.
ಬಾಲ್ಯದಿಂದಲೂ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಮನೋಜ್, ನಗರದ ದೇವರಾಜನಗರದ ಸರಸ್ವತಿ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 619 ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಮೂರನೇ ಸ್ಥಾನ ಪಡೆದಿದ್ದ. ಈ ಬಾರಿ ಸೋಮೇಶ್ವರ ಬಡಾವಣೆಯ ವಿದ್ಯಾನಿಧಿ ಸ್ವತಂತ್ರ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾನೆ.
ಟ್ಯೂಶನ್ ಇಲ್ಲ: ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಟ್ಯೂಶನ್ಗಳ ಮೊರೆ ಹೋಗುವುದು ಸಾಮಾನ್ಯ. ಆದರೆ, ಮನೋಜ್, ಕೇವಲ ಕಾಲೇಜಿನ ಪಾಠದಲ್ಲಿ ಮಾತ್ರ ವಿಶ್ವಾಸವಿಟ್ಟು ಕಠಿಣ ಅಭ್ಯಾಸ ಮಾಡುವ ಮೂಲಕ ಉತ್ತಮ ಅಂಕ ಗಳಿಸಿದ್ದಾನೆ. ಆ ಮೂಲಕ ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡರೆ ಟ್ಯೂಶನ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎನ್ನುವ ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಿಲ್ಲುತ್ತಾನೆ.
ಅಭ್ಯಾಸದ ಅವಧಿ: ಬೆಳಗ್ಗೆ 8:30ಕ್ಕೆ ಕಾಲೇಜಿಗೆ ಹೊರಡುವ ಮನೋಜ್ ಪಠ್ಯದ ಅಭ್ಯಾಸಕ್ಕೆಂದು ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದ. ನಗರದ ವಿದ್ಯಾನಿಧಿ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿರುವ ಮನೋಜ್ ಕುಮಾರ್ ಡಿ.ಎಸ್, ಪ್ರತಿನಿತ್ಯ ಸಂಜೆ ಕಾಲೇಜಿನಿಂದ ಬಳಿಕ 6ರಿಂದ 10ಗಂಟೆ ಅಥವಾ 11ಗಂಟೆಯವರೆಗೆ ಅಭ್ಯಾಸ ಮಾಡುತ್ತಿದ್ದೆ. ವಿಷಯಾವಾರು ವೇಳಾಪಟ್ಟಿ ತಯಾರಿಸಿಕೊಂಡು, ಆಯಾ ಸನ್ನಿವೇಶಕ್ಕೆ ಹಾಗೂ ಪರೀಕ್ಷೆಗಳಿಗೆ ತಕ್ಕಂತೆ ತನ್ನ ಓದನ್ನು ನಿರ್ಧರಿಸುತ್ತಿದ್ದ. ಪ್ರಮುಖವಾಗಿ ಅಂದಿನ ಪಾಠಗಳನ್ನು ಅಂದೇ ಓದಿ ಮುಗಿಸಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ.
ದಿನದ 24 ಗಂಟೆಗಳಲ್ಲಿ ಮನೆಯಲ್ಲಿ ಕನಿಷ್ಠ 5 ತಾಸು, ಕಾಲೇಜಿನಲ್ಲಿ ಬಿಡುವಿನ ಸಮಯದಲ್ಲಿ ಅಂದಿನ ವಿಷಯಗಳನ್ನು ತಪ್ಪದೇ ಓದುತ್ತಿದ್ದೆ. ಕಾಲೇಜಿನ ಉಪನ್ಯಾಸಕರ ಸಹಕಾರದಿಂದ ಯಾವುದೇ ಸಂದೇಹಗಳು ಮೂಡಿದರೂ ಪರಿಹರಿಸಿಕೊಳ್ಳುತ್ತಿದ್ದೆ. ಕಾಲೇಜಿನಿಂದ ಬಂದ ಕೂಡಲೇ ಅಂದಿನ ವಿಷಯಗಳನ್ನು ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದೆ. ದ್ವಿತೀಯ ಪಿಯುಸಿಯಲ್ಲಿ 595 ಟಾರ್ಗೆಟ್ ಇತ್ತು. ಆದರೆ ಅದು 590 ಅಂಕಗಳಾಗಿದೆ. ಆದರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಸಂತೋಷ ಮೂಡಿಸಿದೆ ಎಂದು ಡಿ.ಎಸ್.ಮನೋಜ್ ಕುಮಾರ್ ಸಂತೋಷ ವ್ಯಕ್ತಪಡಿಸುತ್ತಾನೆ.
ಭೌತಶಾಸ್ತ್ರದಲ್ಲಿ ಆಸಕ್ತಿ: ಎಸ್ಸೆಸ್ಸೆಲ್ಸಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಬಳಿಕ ಭೌತಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಮೂಡಿ, ಪಿಯುಸಿಯಲ್ಲಿ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡೆ. ಪಿಯುಸಿಯಲ್ಲಿ ಹೆಚ್ಚಿನ ಆಸಕ್ತಿಯಿಂದ ವ್ಯಾಸಂಗ ಮಾಡಿದ ಕಾರಣ 100ಕ್ಕೆ 100 ಅಂಕಗಳನ್ನು ಗಳಿಸಿದ್ದೇನೆ ಎಂದು ಸಂತೋಷದಿಂದ ಮನೋಜ್ ಹೇಳುತ್ತಾರೆ. ಭವಿಷ್ಯದಲ್ಲಿ ಉನ್ನತ ವೈದ್ಯನಾಗಬೇಕೆನ್ನುವ ಕನಸನ್ನು ಕಾಣುತ್ತಿದ್ದಾನೆ. ಇದಕ್ಕಾಗಿ ನೀಟ್ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದು, ಮನೆಯಲ್ಲಿ ಹಾಗೂ ಕಾಲೇಜಿನ ಉಪನ್ಯಾಸಕರ ಸಹಕಾರದಿಂದ ಕಠಿಣವಾಗಿ ಪ್ರಯತ್ನ ಮುಂದುವರಿಸಿದ್ದಾನೆ.
ನೇಕಾರಿಕೆಯೇ ಆಧಾರ: ಮನೋಜ್ ಕುಮಾರ್ ತಂದೆ ಡಿ.ಎನ್.ಸತ್ಯನಾರಾಯಣ ಹಿಂದಿನಿಂದಲೂ ನೇಕಾರಿಕೆಯನ್ನು ನಂಬಿಕೊಂಡಿದ್ದಾರೆ. ಮನೋಜ್ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದ, ಅದೇ ರೀತಿ ಪ್ರಥನ ಪಿಯುಸಿಯಲ್ಲೂ ಅಂಕಗಳನ್ನು ಪಡೆದಿದ್ದ. ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುತ್ತಾನೆ ಎನ್ನುವ ನಿರೀಕ್ಷೆ ಇತ್ತು. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಸಾಕಷ್ಟು ಸಂತೋಷ ಮೂಡಿಸಿದೆ ಎಂದು ಮನೋಜ್ ತಂದೆ ಡಿ.ಎನ್.ಸತ್ಯನಾರಾಯಣ ಹರ್ಷ ವ್ಯಕ್ತಪಡಿಸಿದರು.
ಕಠಿಣ ಪರಿಶ್ರಮ: ಕಾಲೇಜಿನಿಂದ ಬಂದ ಕೂಡಲೇ ಪರೀಕ್ಷೆಗೆ ತಯಾರಿ ಆರಂಭಿಸುತ್ತಿದ್ದ, ಟ್ಯೂಶನ್ಗೆ ಹೋಗದ ಕಾರಣ ಮನೆಯಲ್ಲಿಯೇ ಹೆಚ್ಚಿನ ಅಭ್ಯಾಸ ಮಾಡುತ್ತಿದ್ದ. ರಾತ್ರಿ 11ರವರೆಗೂ ಕಠಿಣ ಪರಿಶ್ರಮದಿಂದ ಅಭ್ಯಾಸ ನಡೆಸುತ್ತಿದ್ದ. ಮುಂದಿನ ಅವನ ಕನಸಿಗೆ ಸದಾ ನಾವು ಜತೆಯಲ್ಲಿರುತ್ತೇವೆ. ಅವನ ವಿಚಾರದಲ್ಲಿ ನಮಗೆ ಸಾಕಷ್ಟು ಹೆಮ್ಮೆ ಇದೆ ಎಂದು ಮನೋಜ್ ತಾಯಿ ಶಶಿಕಲಾ ಸಂತೋಷ ಹಂಚಿಕೊಂಡರು.
ಕನ್ನಡದಲ್ಲಿ ಹೆಚ್ಚು ಅಂಕ: ಸಾಮಾನ್ಯವಾಗಿ ವಿಜ್ಞಾನ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳು ಭಾಷಾ ವಿಷಯಗಳನ್ನು ನಿರ್ಲಕ್ಷ ್ಯ ಮಾಡುತ್ತಾರೆ. ಅದರಲ್ಲು ಕನ್ನಡ ಭಾಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆಯುತ್ತಾರೆ. ಆದರೆ, ಒಟ್ಟಾರೆ ಫಲಿತಾಂಶಕ್ಕೆ ಭಾಷಾ ವಿಷಯಗಳು ಅತ್ಯಗತ್ಯವಾಗುತ್ತವೆ. ಮನೋಜ್ ಕುಮಾರ್ ಕನ್ನಡದಲ್ಲಿ 98 ಹಾಗೂ ಇಂಗ್ಲಿಷ್ ಭಾಷೆಯಲ್ಲಿ 94 ಅಂಕಗಳನ್ನು ಪಡೆದಿದ್ದಾನೆ. ಉಳಿದಂತೆ ಭೌತಶಾಸ್ತ್ರ 100, ರಸಾಯನಶಾಸ್ತ್ರ 100, ಗಣಿತ 99, ಜೀವಶಾಸ್ತ್ರ 99 ಅಂಕಗಳನ್ನು ಪಡೆದು ಒಟ್ಟು 590 ಅಂಕಗಳು ಹಾಗೂ ಶೇ.98.33 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಮಟ್ಟದಲ್ಲಿ 6ನೇ ಸ್ಥಾನ ಪಡೆದಿದ್ದಾನೆ.
ಅಪ್ಪನ ಕನಸು: ಮನೋಜ್ಕುಮಾರ್ಗೆ ಭವಿಷ್ಯದಲ್ಲಿ ವೈದ್ಯನಾಗುವ ಮಹದಾಸೆ. ಅಪ್ಪ ಚಿಕ್ಕಂದಿನಿಂದಲೂ ಮನೋಜ್ನಿಗೆ ವೈದ್ಯನಾಗುವ ಕನಸನ್ನು ಸೃಷ್ಟಿಸಿದರು. ದ್ವಿತೀಯ ಪಿಯುಸಿಯೊಂದಿಗೆ ನೀಟ್ ಪರೀಕ್ಷೆಗೂ ವಿಶೇಷ ತಾಲೀಮು ನಡೆಸಿರುವ ಮನೋಜ್, ಮುಂದಿನ ದಿನಗಳಲ್ಲಿ ನೀಟ್ ಪರೀಕ್ಷೆಯಲ್ಲೂ ಸಾಧನೆ ಮಾಡಲಿ ಎಂದು ವಿದ್ಯಾನಿಧಿ ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಮಗ್ಗದ ಸದ್ದು ಬಾಧಿಸಲಿಲ್ಲ: ಪ್ರತಿಭಾವಂತ ವಿದ್ಯಾರ್ಥಿ ಮನೋಜ್ ವ್ಯಾಸಂಗಕ್ಕೆ ನೇಕಾರಿಕೆ ಎಂದಿಗೂ ಅಡ್ಡಿಯುಂಟುಮಾಡಿಲ್ಲ. ಮನೆಯಲ್ಲಿ ಎರಡು ಮಗ್ಗಗಳು ಸದಾಕಾಲ ಕಾರ್ಯನಿರ್ವಹಿಸುತ್ತಿದ್ದರು, ಅದರ ಶಬ್ದ ಎಂದಿಗೂ ಮನೋಜ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿಲ್ಲ. ಮನೆಯ ಆರ್ಥಿಕ ಪರಿಸ್ಥಿತಿಗೆ ಬೆಂಬಲವಾಗಿರುವ ಮಗ್ಗದೆಡೆಗೆ ವಿಶೇಷ ಪ್ರೀತಿಯಿಟ್ಟುಕೊಂಡಿರುವ ಮನೋಜ್, ಅಪ್ಪನಿಗೆ ಬಿಡುವಿನ ವೇಳೆಯಲ್ಲಿ ಸಹಾಯ ಮಾಡುತ್ತಿದ್ದ. ಭಾನುವಾರದ ವೇಳೆ ನೇಕಾರಿಕೆಗೆ ಅಗತ್ಯ ಬೀಳುವ ವಸ್ತುಗಳನ್ನು ತರುವುದು ಸೇರಿದಂತೆ ಮನೆಯ ಕೆಲಸಗಳಿಗು ಸಹಕರಿಸಿಕೊಂಡು ವಿದ್ಯಾಭ್ಯಾಸ ಮಾಡಿದ್ದಾನೆ.
ಕಾಲೇಜಿನಲ್ಲಿ ತನ್ನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದ, ಯಾವುದೇ ವಿಷಯದಲ್ಲಿ ಸಂದೇಹಗಳು ಮೂಡಿದರೆ, ಅಂದೇ ಪರಿಹರಿಸಿಕೊಳ್ಳುತ್ತಿದ್ದ. ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವುದು ಸಂತಸ ಮೂಡಿಸಿದೆ. ಇತರ ವಿದ್ಯಾರ್ಥಿಗಳಿಗೆ ಮನೋಜ್ ಸಾಧನೆ ಸ್ಫೂರ್ತಿ ನೀಡಲಿ.
-ಬಾಲಕೃಷ್ಣ, ಪ್ರಾಂಶುಪಾಲ, ವಿದ್ಯಾನಿಧಿ ಸ್ವತಂತ್ರ ಪಿಯು ಕಾಲೇಜು