ಆ್ಯಪ್ನಗರ

ದೊಡ್ಡಬಳ್ಳಾಪುರದ 2 ಗ್ರಾಮಗಳ ಸೀಲ್‌ಡೌನ್: ಅನ್ನ ಇಲ್ಲ, ನೀರಿಲ್ಲ, ಅಧಿಕಾರಿಗಳು ತಲೆಯನ್ನೇ ಹಾಕಿಲ್ಲ!

ಗ್ರಾಮಗಳಲ್ಲಿ ಸೀಲ್‌ಡೌನ್‌ನಿಂದಾಗಿ ಅಗತ್ಯ ವಸ್ತುಗಳನ್ನು ಕೊಳ್ಳಲು ಮನೆಯಿಂದ ಈಚೆಗೆ ಬರಲು ಆಗುತ್ತಿಲ್ಲ. ಬೇಕಾದ ವಸ್ತುಗಳನ್ನು ಅಧಿಕಾರಿಗಳು ಅವರಿಗೆ ನೀಡುತ್ತಿಲ್ಲ. ಏನೂ ಮಾಡಲೂ ಆಗದಂತ ಪರಿಸ್ಥಿತಿಯಲ್ಲಿ ಜನರಿದ್ದಾರೆ.

Vijaya Karnataka Web 30 May 2020, 1:09 pm
ದೊಡ್ಡಬೆಳವಂಗಲ: ಹಾಸನ ಮೂಲದಿಂದ ಪೊಲೀಸ್‌ ಕಾನ್ಸ್‌ಟೇಬಲ್‌ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿತ್ತು. ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಸಮೀಪದ ಹನುಮಂತನ ಪಾಳ್ಯ ಮತ್ತು ಬೆಣಚೆಟ್ಟಿಹಳ್ಳಿಯನ್ನು ಸೀಲ್‌ ಡೌನ್‌ ಮಾಡಲಾಗಿದೆ.
Vijaya Karnataka Web Seal Down In Doddaballapur


ಎರಡು ಗ್ರಾಮಗಳಿಗೆ ಅಧಿಕಾರಿಗಳು ಸೀಲ್‌ಡೌನ್‌ ಮಾಡಲು ಮಾತ್ರ ಬಂದಿದ್ದರು. ಸೀಲ್‌ಡೌನ್‌ ಮಾಡಿದ ನಂತರ ಯಾವದೇ ಅಧಿಕಾರಿಗಳು ಗ್ರಾಮದ ಜನರ ಕಷ್ಟಗಳನ್ನು ಆಲಿಸಲು ಅಲ್ಲಿಗೆ ಭೇಟಿಯೇ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹಾಲನ್ನು ಹುತ್ತಕ್ಕೆ ಹಾಕುತ್ತಿದ್ದಾರೆ: ಗ್ರಾಮದ ಬಹುತೇಕ ಜನರು ಹೈನುಗಾರಿಕೆಯನ್ನೇ ನಂಬಿ ಜೀವನ ಮಾಡುತ್ತಿದ್ದವರು. ಪ್ರತಿ ದಿನ ಸುಮಾರು 80 ರಿಂದ 100 ಲೀ. ನಷ್ಟು ಹಾಲು ಉತ್ಪತ್ತಿಯಾಗುತ್ತಿದ್ದು, ಅವಶ್ಯಕತೆ ಇರುವಷ್ಟು ಹಾಲನ್ನು ಬಳಸಿಕೊಳ್ಳುತ್ತಿದ್ದು, ಉಳಿದ ಹಾಲನ್ನು ಹುತ್ತಕ್ಕೆ ಹಾಕುತ್ತಿದ್ದಾರೆ. ಗ್ರಾಮದ ಹಾಲನ್ನು ಯಾವುದೇ ಡೇರಿಗೆ ಹಾಕಿಸಿಕೊಳ್ಳುತ್ತಿಲ್ಲ.

ಕುಡಿಯಲು ನೀರಿಲ್ಲ: ಗ್ರಾಮದಲ್ಲಿಕುಡಿಯುವ ನೀರಿನ ಘಟಕವಿಲ್ಲದ ಕಾರಣ ಪಕ್ಕದ ಊರಿಗೆ ಹೋಗಿ ನೀರನ್ನು ತೆಗೆದುಕೊಂಡು ಬರಬೇಕಿತ್ತು. ಈಗ ಈ ಗ್ರಾಮದ ಜನರನ್ನು ಬೇರೆ ಯಾವುದೇ ಗ್ರಾಮಗಳು ಊರಿಗೆ ಬಿಟ್ಟುಕೊಳ್ಳುತ್ತಿಲ್ಲ.

ತಾಜಾ ತರಕಾರಿ ಸಂಗ್ರಹಕ್ಕೆ ಬರಲಿದೆ ವೆಂಡಿಂಗ್‌ ವ್ಯಾನ್‌, ತೋಟಗಾರಿಕಾ ಸಂಸ್ಥೆಯಿಂದ ವ್ಯವಸ್ಥೆ

ದಿನಸಿ ತರಕಾರಿ ಸಮಸ್ಯೆ: ಪಂಚಾಯಿತಿ ಅಧಿಕಾರಿಗಳು ಈ ಗ್ರಾಮಕ್ಕೆ ಬೇಕಾದ ದಿನಸಿ, ಮತ್ತು ತರಕಾರಿಗಳನ್ನು ಒದಗಿಸಲು ಮನಸ್ಸು ಮಾಡುತ್ತಿಲ್ಲ. ಹಣ ನೀಡಿದರೆ ತಂದು ಕೊಡುತ್ತೇವೆ ಎಂದು ಬರಿ ಕರೆ ಮಾಡಿದಾಗ ಹೇಳುತ್ತಾರೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಗಳ ಬಳಿ ಹಣ ಇಲ್ಲದೆ ಪರದಾಡುವಂತೆ ಆಗಿದೆ. ಅಧಿಕಾರಿಗಳು ಇವರಿಗೆ ಉಚಿತವಾಗಿ ದಿನಸಿ ಮತ್ತು ತರಕಾರಿಗಳನ್ನು ನೀಡುತ್ತಿಲ್ಲ. ಗ್ರಾಮದ ಜನರು ಸೀಲ್‌ಡೌನ್‌ನಿಂದ ಉಸವಾಸದಲ್ಲಿ ಕಾಲ ಕಳೆಯುವಂತೆ ಆಗಿದೆ.

ನಮ್ಮ ಗ್ರಾಮವನ್ನು ಸೀಲ್‌ಡೌನ್‌ ಮಾಡಿರುವುದರಿಂದ ನಮಗೆ ದಿಕ್ಕು ದೋಚದಂತೆ ಆಗಿದೆ. ನಮ್ಮನ್ನು ಬೇರೆ ಗ್ರಾಮಗಳಿಗೆ ಬಿಡುತ್ತಿಲ್ಲ. ನಮಗೆ ಕುಡಿಯಲು ನೀರೂ ಸಹ ಇಲ್ಲದೆ ಪರದಾಡುವಂತೆ ಆಗಿದೆ. ಅಧಿಕಾರಿಗಳು ನಿಮ್ಮಿಂದ ನಮಗೆ ನೆಮ್ಮದಿ ಇಲ್ಲದಂತೆ ಆಗಿದೆ ಎಂದು ದೂರುತ್ತಿದ್ದಾರೆ. ನಮ್ಮನ್ನು ಎಲ್ಲರೂ ತಪ್ಪಿತಸ್ಥರ ರೀತಿಯಲ್ಲಿ ನೋಡುತ್ತಿದ್ದಾರೆ. ಅಧಿಕಾರಿಗಳು ನಮ್ಮನ್ನು ಈ ರೀತಿ ನೋಡುತ್ತಾರೆ ಎಂದು ಅಂದುಕೊಂಡಿರಲ್ಲಿಲ್ಲ.
- ನಾಗೇಶ್‌, ಗ್ರಾಮಸ್ಥ, ಹನುಮಂತನ ಪಾಳ್ಯ

ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿ ಸೂಕ್ತ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸುತ್ತೇನೆ.
- ಶಿವರಾಜ್, ತಹಸೀಲ್ದಾರ್‌

ಮಾವು ಮಾಗಿಸಲು ಬಂದಿದೆ ಪರಿಣಾಮಕಾರಿ ಸಾವಯವ ವಿಧಾನ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ