ಆ್ಯಪ್ನಗರ

ಹಿಡಿ ತರಕಾರಿ ಕೊಟ್ಟರೂ ಶಿವಕೊಟ್ಟಷ್ಟೆಂದು ದಾಸೋಹಕ್ಕೆ ಕೊಂಡೊಯ್ಯುತ್ತಿದ್ದ ಸಿದ್ಧಗಂಗಾ ಶ್ರೀ!

ಅದು 1950, 60, 70ರ ದಶಕ. ಆಧುನಿಕ ವಾಹನ ವ್ಯವಸ್ಥೆ ಇಲ್ಲದ ಅಷ್ಟಾಗಿ ಇರದ ಕಾಲ. ಇಂತಹ ಕಾಲ ಘಟ್ಟದಲ್ಲಿ ಸಿದ್ಧಗಂಗೆಯ ಡಾ. ಶ್ರೀ.ಶಿವಕುಮಾರ ಸ್ವಾಮೀಜಿ ಅವರು ಎತ್ತಿನಗಾಡಿ, ಕುದುರೆ ಏರಿ ಡಾಬಸ್‌ಪೇಟೆ ಸುತ್ತಮುತ್ತಲ ಗ್ರಾಮಗಳಿಗೆ ಭಕ್ತರ ಮನೆಗೆ ಪೂಜೆಗೆ ಬರುತ್ತಿದ್ದರು.

Vijaya Karnataka 22 Jan 2019, 5:00 am
ಹೊನ್ನೇನಹಳ್ಳಿ ಹೊನ್ನಶಾಮಯ್ಯ ದಾಬಸ್‌ಪೇಟೆ
Vijaya Karnataka Web siddaganga shri who took hold of dasoha gave shiva a handful of vegetables
ಹಿಡಿ ತರಕಾರಿ ಕೊಟ್ಟರೂ ಶಿವಕೊಟ್ಟಷ್ಟೆಂದು ದಾಸೋಹಕ್ಕೆ ಕೊಂಡೊಯ್ಯುತ್ತಿದ್ದ ಸಿದ್ಧಗಂಗಾ ಶ್ರೀ!


ಅದು 1950, 60, 70ರ ದಶಕ. ಆಧುನಿಕ ವಾಹನ ವ್ಯವಸ್ಥೆ ಇಲ್ಲದ ಅಷ್ಟಾಗಿ ಇರದ ಕಾಲ. ಇಂತಹ ಕಾಲ ಘಟ್ಟದಲ್ಲಿ ಸಿದ್ಧಗಂಗೆಯ ಡಾ. ಶ್ರೀ.ಶಿವಕುಮಾರ ಸ್ವಾಮೀಜಿ ಅವರು ಎತ್ತಿನಗಾಡಿ, ಕುದುರೆ ಏರಿ ಡಾಬಸ್‌ಪೇಟೆ ಸುತ್ತಮುತ್ತಲ ಗ್ರಾಮಗಳಿಗೆ ಭಕ್ತರ ಮನೆಗೆ ಪೂಜೆಗೆ ಬರುತ್ತಿದ್ದರು.

ತಾಲೂಕಿನ ದಾಸೇನಹಳ್ಳಿ, ಕಂಬಾಳು, ದೊಡ್ಡಬಳ್ಳಾಪುರ ತಾಲೂಕಿನ ಹಾಲೇನಹಳ್ಳಿ ಗ್ರಾಮಗಳಿಗೆ ತೀರಾ ಇಳಿ ವಯ್ಸಸಿನವರೆಗೆ ವರ್ಷಕ್ಕೊಮ್ಮೆ ಶ್ರೀಗಳು ಭಕ್ತರ ಮನೆಗೆ ತಪ್ಪದೇ ಭೇಟಿ ನೀಡುತ್ತಿದ್ದರು. ಈ ವೇಳೆ ಪಾದಪೂಜೆ, ಶಿವಪೂಜೆಗಳಲ್ಲಿ ಭಕ್ತರು ನೀಡುವ ಅಲ್ಪ ಕಾಣಿಕೆ, ಹಿಡಿ ತರಕಾರಿ, ದವಸ ಧಾನ್ಯವನ್ನೇ ಶಿವಕೊಟ್ಟಷ್ಟೆಂದು ಮಠದ ವಿದ್ಯಾರ್ಥಿಗಳ ದಾಸೋಹಕ್ಕೆ ಕೊಂಡೊಯ್ಯುತ್ತಿದ್ದರು.

ದೇವಾಲಯದಲ್ಲಿ ತಂಗಿದ್ದರು: 1955ರ ಸಮಯದಲ್ಲಿ ಒಮ್ಮೆ ದಾಸೇನಹಳ್ಳಿಯಲ್ಲಿ ಶ್ರೀಗಳು ತಂಗುವ ಅನಿವಾರ್ಯತೆ ಬರುತ್ತದೆ. ಆಗ ಭಕ್ತರ ಮನೆಯಲ್ಲಿ ಪೂಜೆ ಸಲ್ಲಿಸಿ ನಂತರ ಗ್ರಾಮಸ್ಥರೊಂದಿಗೆ ಮಾತುಕತೆ ಮಾಡಿಕೊಂಡು ದೇವಾಲಯದಲ್ಲಿ ಚಾಪೆ ಮೇಲೆ ನಿದ್ರಿಸಿದ್ದರು. ಮುಂಜಾನೆ ಮೂರು ಗಂಟೆಗೆ ಎದ್ದು ಭಕ್ತರ ಮನೆಯಲ್ಲಿ ಪೂಜೆ ಸಲ್ಲಿಸಿ,ಅಕ್ಕಪಕ್ಕದ ಗ್ರಾಮಗಳಿಗೆ ಭೇಟಿ ನೀಡಿ ರೈತರು ನೀಡಿದ ಎಲೆ ಅಡಿಕೆ 2 ರಿಂದ 5 ರೂಗಳವರೆಗೆ ಕಾಣಿಕೆ, ದವಸ ಧಾನ್ಯವನ್ನು ಪಡೆದು ತೆರಳಿದ್ದರು.

ಕಡ್ಲೆಪುರಿ ಹಂಚಿದ್ದರು: ಮಠಕ್ಕೆ ವಾಪಸ್‌ ಹೋಗುವಾಗಲೆಲ್ಲ ಗ್ರಾಮದ ಮಕ್ಕಳಿಗೆ ಕಡ್ಲೆಪುರಿ ಹಂಚುತ್ತಿದ್ದರು. ಇದನ್ನು ನಾವು ಕಣ್ಣಾರೆ ಕಂಡಿದ್ದೇವೆ ಎಂದು ಗ್ರಾಮದ ರೇಣುಕಾರಾಧ್ಯ ಸ್ಮರಿಸಿಕೊಳ್ಳುತ್ತಾರೆ .

ರೈಲು,ಎತ್ತಿನಗಾಡಿ, ಕುದುರೆ ಸವಾರಿ: ಬೆಂಗಳೂರಿಗೆ ಹೋಗುವಾಗ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಶ್ರೀಗಳು 25 ಕಿ.ಮೀ ವ್ಯಾಪ್ತಿಗೆ ಕುದುರೆ ಸವಾರಿ ಅಥವಾ ಎತ್ತಿನ ಗಾಡಿಯ ಮೇಲೆ ಪ್ರಯಾಣ ಬೆಳೆಸುತ್ತಿದ್ದರು. ಅನಿವಾರ್ಯತೆ ಇದ್ದಾಗ ಮಾತ್ರ ಕಾರು ಬಳಸುತ್ತಿದ್ದ ಶ್ರೀಗಳು ಆಗಲೂ ಒಂದು ಕೇಂದ್ರ ಸ್ಥಾನದಲ್ಲಿ ಕಾರು ನಿಲ್ಲಿಸಿ ಅಲ್ಲಿಂದ ಗಾಡಿಯಲ್ಲಿ ಇಲ್ಲವೆ ಪಾದಯಾತ್ರೆಯಲ್ಲಿ ಅಕ್ಕಪಕ್ಕದ ಗ್ರಾಮಗಳ ಭಕ್ತರ ಮನೆಗೆ ಭೇಟಿ ನೀಡುತ್ತಿದ್ದರು.

ಮಠದ ಬೆಳೆ ಕಟಾವಿಗೆ ಗ್ರಾಮಸ್ಥರ ನೆರವು: ಸೋಂಪುರ ಹೋಬಳಿ ಭಾಗದ ತಿಮ್ಮನಾಯ್ಕನಹಳ್ಳಿ, ಕರೀಮಣ್ಣೆ, ಮಾದೇನಹಳ್ಳಿ, ನಿಡವಂದ, ತಟ್ಟೇಕೆರೆ, ನರಸೀಪುರ,ಬೆಣಚನಹಳ್ಳಿ, ಕಂಬಾಳು, ದೊಡ್ಡೇರಿ, ಹಳೇನಿಜಗಲ್‌, ಹೊನ್ನೇನಹಳ್ಳಿ, ಶಿವಗಂಗೆ, ಚಿಕ್ಕಹಳ್ಳಿ, ಪಾಲನಹಳ್ಳಿ ,ವೀರಾಪುರ,ಗೂಳ್ಯ,ಪುರುಷನಹಳ್ಳಿ, ಹಾಲೇನಹಳ್ಳಿ, ಅಂಬಲಗೆರೆ ಮುಂತಾದ ಗ್ರಾಮಗಳ ರೈತರು ವರ್ಷಕೊಮ್ಮೆ ಮಠದ ಜಮೀನಿನಲ್ಲಿ ಬೆಳೆ ಕಟಾವು ಮಾಡಲು ಬರುತ್ತಿದ್ದರು. ಜಾತ್ರೆ ಸಮಯದಲ್ಲಿ ಕೊಪ್ಪಲು ಹಾಕಿಕೊಂಡು ಊಟದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ್ತ ಹೋಬಳಿಯ ಸುತ್ತಮುತ್ತಲ ಭಕ್ತರ ಶ್ರೀಗಳ ಒಡನಾಟ ಹೀಗೆ ಆರಂಭವಾಗಿ ಇಂದಿಗೂ ಈ ವ್ಯವಸ್ಥೆ ಮುಂದುವರೆದಿದೆ. ಮಠದ ಅಭಿವೃದ್ಧಿಯಲ್ಲಿ ಈ ಭಾಗದ ಗ್ರಾಮಸ್ಥರ ಸಹಕಾರವನ್ನು ಶ್ರೀಗಳು ಅನೇಕ ಸಭೆ ಸಮಾರಂಭಗಳಲ್ಲಿ ನೆನೆದಿದ್ದಾರೆ. ತಾಲೂಕಿನಲ್ಲಿ ಸಾಕಷ್ಟು ಮಠಗಳು ಇದ್ದು, ಈ ಎಲ್ಲಾ ಮಠಗಳ ಸ್ವಾಮೀಜಿಯವರಿಗೂ ಮಾರ್ಗದರ್ಶನ ನೀಡಿ ಎಲ್ಲರನ್ನು ತಮ್ಮ ಜೊತೆ ಕರೆದೊಯ್ಯುತ್ತಿದ್ದರು ಎಂದು ಹೊನ್ನಮ್ಮ ಗವಿಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮತ್ತು ಕಂಬಾಳು ಮಠದ ಚನ್ನವೀರ ಸ್ವಾಮೀಜಿ ಸ್ಮರಿಸುತ್ತಾರೆ.

ಜಾತ್ಯಾತೀತ ಶಿವಪೂಜೆಗೆ ಪ್ರೇರಣೆ : ಶ್ರೀಗಳು ಜಾತಿ ಮತ ಧರ್ಮವನ್ನು ಮೀರಿ ಬೆಳೆದವರು ಎಂಬುದಕ್ಕೆ ತಾಲೂಕಿನಲ್ಲಿ ಮುಸ್ಲಿಂ, ಪರಿಶಿಷ್ಟಜಾತಿ ಮತ್ತು ವರ್ಗದ ಸಮುದಾಯದವರ ಮನೆಯಲ್ಲಿಯೂ ಶಿವಪೂಜೆಯನ್ನು ನಡೆಸುತ್ತಿರುವುದೇ ಸಾಕ್ಷಿಯಾಗಿದೆ. ಇಂತಹ ಸಾಧಕ ಶ್ರೀಗಳ ಅಗಲಿಗೆ ಹೋಬಳಿಯ ಜನರಲ್ಲಿ ಅಪಾರ ನೋವನ್ನುಂಟು ಮಾಡಿದ್ದು, ಶ್ರೀಗಳಿಗೆ ಬದುಕಿದ್ದಾಗಲೇ ಭಾರತರತ್ನ ನೀಡಬೇಕಿತ್ತು ಎಂಬ ಗದ್ಗದಿತರಾಗಿ ನುಡಿಯುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ