ಆ್ಯಪ್ನಗರ

ಕಾರಹಳ್ಳಿ, ಅಮಾನಿಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

ತಾಲೂಕಿನಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವು ಮಾಡಿಸಲಾಗುವುದು. ಮೊದಲಿಗೆ ತಾಲೂಕಿನಲ್ಲಿರುವ ಕೆರೆಗಳನ್ನು ಗುರುತಿಸಿ ಕೆರೆಯಲ್ಲಿ ಸುಮಾರು 3 ರಿಂದ 4 ಅಡಿಗಳಷ್ಟು ಹೂಳೆತ್ತುವ ಕಾರ್ಯ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು.

Vijaya Karnataka 21 Nov 2018, 3:57 pm
ಕುಂದಾಣ: ತಾಲೂಕಿನಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವು ಮಾಡಿಸಲಾಗುವುದು. ಮೊದಲಿಗೆ ತಾಲೂಕಿನಲ್ಲಿರುವ ಕೆರೆಗಳನ್ನು ಗುರುತಿಸಿ ಕೆರೆಯಲ್ಲಿ ಸುಮಾರು 3 ರಿಂದ 4 ಅಡಿಗಳಷ್ಟು ಹೂಳೆತ್ತುವ ಕಾರ್ಯ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು.
Vijaya Karnataka Web silt cleaning work stared at karahalli amanikere
ಕಾರಹಳ್ಳಿ, ಅಮಾನಿಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ


ಕುಂದಾಣ ಹೋಬಳಿಯ ಕಾರಹಳ್ಳಿ ಗ್ರಾಮದಲ್ಲಿರುವ 49 ಎಕರೆ ವಿಸ್ತೀರ್ಣದ ಕಾರಹಳ್ಳಿ ಅಮಾನಿಕೆರೆಯ ಹೂಳೆತ್ತುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕೆರೆಯಲ್ಲಿ ಬೆಳೆದಿರುವ ಜಾಲಿಗೆ ಮರಗಳನ್ನು ತೆರವುಗೊಳಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಕೆರೆಗಳ ಅಭಿವೃದ್ಧಿಗೊಳಿಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರೇ ಮುಂದಾಗಿರುವುದು ವಿಶೇಷ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಲಾರಿ, ಜೆಸಿಬಿ ತರೆಸಿ ಸರಕಾರದ ಒಂದೇ ಒಂದು ಪೈಸೆ ಇಲ್ಲದೆ ಖುದ್ದಾಗಿ ಜನರೇ ಸ್ವಂತ ಖರ್ಚಿನಲ್ಲಿ ಕೆರೆಗಳ ಹೂಳೆತ್ತುವ ಕಾರ್ಯಗಳಿಗೆ ಮುಂದಾಗಿದ್ದಾರೆ. ನಾನು ಕೇವಲ ನೆಪ ಮಾತ್ರವಷ್ಟೆ ಎಂದು ಹೇಳಿದರು.

ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಮಾತನಾಡಿ, ಇದು ನಿಮ್ಮ ಜಿಲ್ಲಾಧಿಕಾರಿ ಜನರಿಗಾಗಿ ಜನರಿಗೊಸ್ಕರ ಆಯೋಜಿಸಿರುವ ಕಾರ್ಯಕ್ರಮ, ಇದು ಭೂಮಿಪೂಜೆಗೆ ಸೀಮಿತವಾಗಬಾರದು, ಮೂರು ತಿಂಗಳಿನ ಒಳಗೆ ಕಾಮಗಾರಿಯನ್ನು ಸುಸ್ಥಿರವಾಗಿ ಪೂರ್ಣಗೊಳಿಸಿ, ಸಂಪರ್ಕ ರಾಜಕಾಲುವೆಗಳನ್ನು ತೆರವುಗೊಳಿಸಿ ಕೆರೆಗಳಿಗೆ ನೀರು ಹರಿಯುವಂತೆ ಆಗಬೇಕು. ಅಂತರ್ಜಲ ಮಟ್ಟ ಹೆಚ್ಚಿಸಲು ಇದೊಂದು ಒಳ್ಳೆಯ ಕಾರ್ಯಕ್ರಮವಾಗಿದೆ ಎಂದರು.

ಕಡಿಮೆ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕರೀಗೌಡ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಜನರಿಗೆ ಆಗುವ ಒಳ್ಳೆಯ ಕೆಲಸಕಾರ್ಯಗಳಿಗೆ ನಾವು ಸ್ಪಂದಿಸಬೇಕು. ಕೆಲಸ ಆದಷ್ಟು ಬೇಗ ಮುಗಿಸಿ, ಉದ್ಘಾಟನಾ ಭಾಗ್ಯ ಕಾಣಬೇಕು ಎಂದರು.

ಶಾಸಕ ನಿಸರ್ಗ ಎಲ್‌.ಎನ್‌.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲಾಧಿಕಾರಿಗಳು ಹೆಚ್ಚು ಶ್ರಮಜೀವಿಯಾಗಿದ್ದು ಜಿಲ್ಲೆಯ ಅಭಿವೃದ್ಧಿಗೆ ದಿನವಿಡೀ ಶ್ರಮಿಸುತ್ತಿದ್ದಾರೆ. ಇವರಿಗೆ ನಮ್ಮ ಸಹಕಾರ ಇದ್ದೇ ಇರುತ್ತದೆ. ಆದರೂ ಸಂಪನ್ಮೂಲ ಕೊರತೆ ಇರುವುದರಿಂದ ಗ್ರಾಮಸ್ಥರು ಹೇಗೆ ಕೆಲಸ ಮಾಡಿಸಿಕೊಳ್ಳುತ್ತಾರೆ ಎಂಬುವುದು ಅವರ ಮೇಲೆ ಇದೆ. ಶಾಸಕರ ಜತೆ ಸಂಪರ್ಕ ಇಟ್ಟುಕೊಳ್ಳುವಂತೆ ಆಗಬೇಕು. ಪರಿಸರ ಮಾಲಿನ್ಯ ತಡೆಹಿಡಿಯಬೇಕು. ಕೆರೆಗಳು ಅಭಿವೃದ್ಧಿ ಹೊಂದಿದರೆ ಅಂತರ್ಜಲಮಟ್ಟ ಹೆಚ್ಚಾಗಿ ರೈತರು ಬೆಳೆಗಳನ್ನು ಬೆಳೆಯಲು ಹಾಗೂ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಕಾರ್ಯ ಆದಷ್ಟು ಬೇಗ ಮುಗಿಯುವಂತೆ ಆಗಬೇಕು. ಜಿಲ್ಲಾಧಿಕಾರಿಗಳು ಅಭಿವೃದ್ಧಿ ವಿಚಾರದಲ್ಲಿ ಹೆಚ್ಚು ಪ್ರಾಮಾಣಿಕತೆಯಿಂದ ನಮ್ಮ ಜತೆ ಇದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಸುಮಾರು 50 ಲಕ್ಷ ಕ್ಕೂ ಹೆಚ್ಚು ಖರ್ಚು ತಗಲುವ ಸಾಧ್ಯತೆ ಇದೆ. ಇದನ್ನು ಸಾರ್ವಜನಿಕರೇ ಭರಿಸುತ್ತಿರುವುದು ಶ್ಲಾಘನೀಯ. ಇಲ್ಲಿಗೆ 2 ಟ್ರ್ಯಾಕ್ಟರ್‌, 4 ಲಾರಿಗಳು, 2 ಜೆಸಿಬಿ ಹಾಗೂ ದಾನಿಗಳ, ಜನಪ್ರತಿನಿಧಿಗಳ ಪಾತ್ರ ಇರುವುದು ಕಂಡುಬಂತು.

ಈ ವೇಳೆ ತಹಸೀಲ್ದಾರ್‌ ಎಂ.ರಾಜಣ್ಣ, ತಾಪಂ ಸದಸ್ಯರಾದ ಶ್ರೀನಿವಾಸ್‌, ಎಸ್‌.ಮಹೇಶ್‌, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್‌.ಮುನೇಗೌಡ, ಗ್ರಾಪಂ ಅಧ್ಯಕ್ಷ ಎ.ದೇವರಾಜ್‌, ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ, ಎ.ಸಿ.ಮಂಜುನಾಥ್‌, ಪಿಡಿಒ ಬೀರೇಶ್‌, ಗ್ರಾಮದ ಮುಖಂಡರು, ಜನಪ್ರತಿನಿಧಿಗಳು ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ