ನೆಲಮಂಗಲ: ಮನುಷ್ಯ ಬದುಕಲು ಉದ್ಯೋಗವಿರಬೇಕು ನಿಜ. ಆದರೆ ಎಲ್ಲರಿಗೂ ಸರಕಾರಿ ಉದ್ಯೋಗ ಸಿಗುವುದಿಲ್ಲ ಅಥವಾ ಹೆಚ್ಚು ಸಂಬಳ ನೀಡುವ ಖಾಸಗಿ ಕಂಪನಿಗಳಲ್ಲೂ ಕೆಲಸ ಸಿಗುವುದು ಕಷ್ಟ..! ಹಾಗಂತ ಕೆಲಸಕ್ಕಾಗಿ ಕಾದು ಕುಳಿತರೆ ಸಮಯ ವ್ಯರ್ಥ.
ಕುಲಕಸುಬು, ಕೈಕಸುಬು ಇದ್ದಲ್ಲಿ ಸಂಕೋಚ ಬಿಟ್ಟು ಸ್ವಯಂ ಉದ್ಯೋಗ ಕೈಗೊಂಡು ಜೀವನ ನಿರ್ವಹಣೆಗೆ ಅಗತ್ಯವಾದ ಹಣ ಸಂಪಾದನೆ ಮಾಡಲು ಸಾಧ್ಯ ಎಂಬುದಕ್ಕೆ ತಾಲೂಕಿನ ಮೈಲನಹಳ್ಳಿಯ ವಿಗ್ರಹ ಶಿಲ್ಪಿ ಮಂಜುನಾಥಾಚಾರ್(40) ಸಾಕ್ಷಿಯಾಗಿದ್ದಾರೆ.
ವಿಗ್ರಹ ತಯಾರಿಕೆಯಲ್ಲಿ ನೈಪುಣ್ಯತೆ
ಇವರು ಓದಿದ್ದು ಹತ್ತನೇ ತರಗತಿ. ತಾತ, ಮುತ್ತಾತನ ಕಾಲದಿಂದಲೂ ಚಿನ್ನ, ಬೆಳ್ಳಿಯ ವಡವೆ ಕೆಲಸದ ಜತೆಗೆ ಕುಲುಮೆ ಕೆಲಸದಲ್ಲಿ ನಿಪುಣರಾಗಿದ್ದರು. ಮಾವ ಚಂದ್ರಾಚಾರ್ ಪಂಚಲೋಹದ ವಿಗ್ರಹ ತಯಾರಿಕೆಯಲ್ಲಿ ಹೆಸರು ಗಳಿಸಿದ್ದು, ಇವರ ಬಳಿ ಚಿಕ್ಕ ವಯಸ್ಸಿನಿಂದಲೇ ಕೆಲಸ ಕಲಿತು ಕಳೆದ 22 ವರ್ಷದಿಂದ ಪಂಚಲೋಹದ ವಿಗ್ರಹ ತಯಾರಿಕೆಯಲ್ಲಿ ನಿರತರಾಗಿರುವ ಕಲೆಗಾರ ಮಂಜುನಾಥಾಚಾರ್ ಮೂರು ಮಂದಿ ಆಸಕ್ತ ಯುವಕರಿಗೆ ಕೆಲಸ ಕಲಿಸಿ ಜತೆಯಲ್ಲಿಟ್ಟುಕೊಂಡು ರಾಜ್ಯದ ವಿವಿದೆಡೆಯಿಂದ ಆರ್ಡರ್ ಪಡೆದು ಪಂಚಲೋಹದ ವಿಗ್ರಹಗಳನ್ನು ಸಿದ್ಧಪಡಿಸಿ ನೀಡುವ ಮೂಲಕ ಜೀವನ ನಿರ್ವಹಣೆಯ ದಾರಿ ಕಂಡುಕೊಂಡಿದ್ದಾರೆ.
ಪ್ರಸಿದ್ಧ ಉತ್ಸವ ಮೂರ್ತಿಗಳೆಲ್ಲವೂ ಇವರದ್ದೇ
ಬೆಂಗಳೂರು, ಮಂಗಳೂರು, ಮೈಸೂರು, ಕೊಲ್ಲೂರು, ಉಡುಪಿ, ಕಾರ್ಕಳ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳ ದೇವರ ಉತ್ಸವ ಮೂರ್ತಿಗಳನ್ನು ತಯಾರಿಸಿದ್ದು ಇವರೇ ಎನ್ನುವುದು ವಿಶೇಷ. ನಾನಾ ದೇಗುಲಗಳಿಗೆ ಪ್ರಭಾವಳಿ ಮತ್ತು ಮೂರ್ತಿಗಳನ್ನು ಸಿದ್ಧಪಡಿಸಿ ಹೇಳಿದ ಸಮಯಕ್ಕೆ ವಿತರಿಸಿದ್ದಾರೆ., ಈಗಾಗಲೇ ಆನೇಕಲ್ ಸನಿಹದ ಮಾಸ್ತೇನಹಳ್ಳಿ ದೇಗುಲಕ್ಕೆ 40 ಕೆಜಿ ತೂಕದ ಬೆಳ್ಳಿಯ ವೀರಭದ್ರಸ್ವಾಮಿ ವಿಗ್ರಹ, ಶ್ರೀರಾಂಪುರಕ್ಕೆ ಶಂಕರಾಚಾರ್ಯರ ವಿಗ್ರಹ, ಮೈಸೂರಿನ ಇಳುವಾಲಕ್ಕೆ ನಮ್ಮಾಳ್ವಾರ್ ವಿಗ್ರಹ, ಕಾರ್ಕಳ ವೆಂಕಟರಮಣಸ್ವಾಮಿ ದೇಗುಲಕ್ಕೆ ಸುಮಾರು 120 ಕೆಜಿ ತೂಕದ ಗರುಡ, ಆಂಜನೇಯ ಹಾಗೂ ಪರಶುರಾಮ ದೇವರ ವಿಗ್ರಹಗಳನ್ನು ತಯಾರಿಸಿ ಕೊಟ್ಟಿದ್ದಾರೆ. ರಾಜ್ಯದ ನೂರಾರು ದೇಗುಲಗಳಿಗೆ ನೂರಾರು ಪ್ರಭಾವಳಿ ಮತ್ತು ಹಲವಾರು ಪಂಚಲೋಹದ ದೇವತೆಗಳ ವಿಗ್ರಹಗಳನ್ನು ತಯಾರಿಸಿದ್ದಾರೆ.
ಒಟ್ಟಾರೆ ಕೆಲಸ ಯಾವುದಾದರೇನು? ಮನಸ್ಸಿದ್ದರೆ ಮಾರ್ಗ ಎಂಬಂತೆ ತಾವು ಮಾಡುವ ಕೆಲಸದ ಬಗ್ಗೆ ಶ್ರದ್ಧೆ, ಭಕ್ತಿ, ನಿಷ್ಟೆ ಇದ್ದಲ್ಲಿ ಮಾತ್ರ ಯಶಸ್ಸು ನಿಶ್ಚಿತ ಎಂಬುದಕ್ಕೆ ಶಿಲ್ಪಿ ಮಂಜುನಾಥಾಚಾರ್ ಸಾಕ್ಷಿಯಾಗಿದ್ದಾರೆ.
ನಮ್ಮ ಕೆಲಸ ಮೆಚ್ಚಿ ಕಾರ್ಕಳದ ವೆಂಕಟರಮಣಸ್ವಾಮಿ ದೇಗುಲದವರು, ದೇವರಿಗೆ ಶಂಕಚಕ್ರ ತಯಾರಿಸಿಕೊಡುವ ಕೆಲಸ ಒಪ್ಪಿಸಿದ್ದಾರೆ. 70 ಕೆಜಿ ತೂಕದ ಶಂಖಚಕ್ರ ಸಿದ್ಧಪಡಿಸಿದ್ದೇವೆ. ಒಳ್ಳೆಯ ಆರ್ಡರ್ ಸಿಕ್ಕರೆ ತಿಂಗಳಿಗೆ ಕನಿಷ್ಠ 20ರಿಂದ 25 ಸಾವಿರ ರೂ. ಸಂಪಾದನೆ ಸಿಗವುದು ನಿಶ್ಚಿತ.
-ಮಂಜುನಾಥಾಚಾರ್, ಶಿಲ್ಪಿ