ಆನೇಕಲ್: ತಾಲೂಕಿನ ಜಿಗಣಿ ಸಮೀಪದ ಬಂಡೆನಲ್ಲಸಂದ್ರ ಕೆರೆ ನೀರಿಗೆ ಕೈಗಾರಿಕೆಗಳ ತ್ಯಾಜ್ಯ ಮತ್ತು ರಾಸಾಯನಿಕ ಮಿಶ್ರಣ ಸೇರಿದ್ದರಿಂದ ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಮೃತಪಟ್ಟಿವೆ.
ಇತ್ತೀಚೆಗೆ ಸುರಿದ ಮಳೆಯ ನೀರಿನ ಜತೆ ಈ ಭಾಗದಲ್ಲಿರುವ ನಾನಾ ಕಾರ್ಖಾನೆಗಳಿಂದ ಹೊರಬರುವ ಕಲುಷಿತ ನೀರು ಹರಿದುಬಂದಿದೆ. ಇದರಿಂದ ಕೆರೆಯಲ್ಲಿದ್ದ ಸಹಸ್ರಾರು ಮೀನುಗಳು ಮೃತಪಟ್ಟಿದ್ದು, ನೀರಿನಲ್ಲಿ ತೇಲಾಡುತ್ತಿವೆ. 5 ಕೆಜಿಗೂ ಹೆಚ್ಚು ತೂಕದ ಮೀನುಗಳು ಸತ್ತಿದ್ದು, ಬಂಡೆನಲ್ಲಸಂದ್ರ, ಕ್ಯಾಲಸನಹಳ್ಳಿ, ಮಾರುತಿನಗರ ಗ್ರಾಮಗಳ ರೈತರು ದನಕರುಗಳನ್ನು ಮೇಯಿಸಲು ಕೆರೆಗೆ ಬರುತ್ತಾರೆ. ದನಕರುಗಳು ಇದೇ ನೀರನ್ನು ಕುಡಿಯುತ್ತಿವೆ. ಕಳೆದ ವಾರ ಕೃಷ್ಣಪ್ಪ ಎಂಬುವರ ಹಸುವೊಂದು ಮೃತಪಟ್ಟಿತ್ತು. ಮೀನುಗಳು ಮೃತಪಟ್ಟಿರುವುದರಿಂದ ದನಕರುಗಳ ಬಗ್ಗೆ ಚಿಂತೆ ಉಂಟಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಬಂಡೆನಲ್ಲಸಂದ್ರ ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಶಿವಪ್ಪ ನಾಯಕ್ ಹಾಗೂ ಪುರಸಭಾ ಮುಖ್ಯಾಧಿಕಾರಿ ಚೇತನ್ ಕೊಳವಿ ಭೇಟಿ ನೀಡಿ ಪರಿಶೀಲಿಸಿದರು. ನೀರಿನ ಮಾದರಿ ಸಂಗ್ರಹಿಸಿ ಪರಿಶೀಲನೆಗಾಗಿ ಕೊಂಡೊಯ್ಯಲಾಗಿದೆ. ಸುತ್ತ್ತಲಿನ ಕಾರ್ಖಾನೆಗಳ ಮಾಲೀಕರಿಗೆ ನೋಟಿಸ್ ನೀಡಲಾಗುವುದು. ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಕ್ಯಾಲಸನಹಳ್ಳಿ ಕೆರೆ ಅಭಿವೃದ್ಧಿಪಡಿಸಿದ್ದು ಬಂಡೆನಲ್ಲಸಂದ್ರ ಕೆರೆ ಅಭಿವೃದ್ಧಿ ಪಡಿಸುವುದಾಗಿ ಪುರಸಭೆ ಮುಖ್ಯಾಧಿಕಾರಿ ಚೇತನ್ ಕೊಳವಿ ತಿಳಿಸಿದ್ದಾರೆ.
ಈ ವೇಳೆ ಪುರಸಭಾಧ್ಯಕ್ಷೆ ಮುನಿರತ್ನಮ್ಮ ಶಿವಶಂಕರ್, ಸದಸ್ಯರಾದ ಶಾಂತಕುಮಾರ್, ಹರೀಶ್ರೆಡ್ಡಿ, ಕೆ.ಸಿ.ಕುಮಾರ್, ಕೃಷ್ಣಪ್ಪ, ಅಪ್ಪಣ್ಣ ಹಾಜರಿದ್ದರು.