ಆ್ಯಪ್ನಗರ

ಟ್ರಾಯ್‌ ಹೊಸ ನಿಯಮ ವಿರೋಧಿಸಿ ಕೇಬಲ್‌ ಆಪರೇಟರ್ಸ್‌ ಪ್ರತಿಭಟನೆ

ಟೆಲಿಕಾಂ ರೆಗ್ಯುಲಾರಿಟಿ ಅಥಾರಿಟಿ ಆಫ್‌ ಇಂಡಿಯಾದ (ಟ್ರಾಯ್‌) ಹೊಸ ಕೇಬಲ್‌ ಟಿವಿ ಟ್ಯಾರಿಫ್‌ ನಿಯಮ ವಿರೋದಿಸಿ ಜಿಲ್ಲಾ ಕೇಬಲ್‌ ಟಿವಿ ಆಪರೇಟರ್‌ಗಳ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Vijaya Karnataka 25 Jan 2019, 5:00 am
ನಿಯಮ ಸಡಿಲಿಸುವಂತೆ ಕೇಂದ್ರ ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಕೆ
Vijaya Karnataka Web trai new policy cable operateres protest
ಟ್ರಾಯ್‌ ಹೊಸ ನಿಯಮ ವಿರೋಧಿಸಿ ಕೇಬಲ್‌ ಆಪರೇಟರ್ಸ್‌ ಪ್ರತಿಭಟನೆ


ವಿಕ ಸುದ್ದಿಲೋಕ
ಕುಂದಾಣ

ಟೆಲಿಕಾಂ ರೆಗ್ಯುಲಾರಿಟಿ ಅಥಾರಿಟಿ ಆಫ್‌ ಇಂಡಿಯಾದ (ಟ್ರಾಯ್‌) ಹೊಸ ಕೇಬಲ್‌ ಟಿವಿ ಟ್ಯಾರಿಫ್‌ ನಿಯಮ ವಿರೋದಿಸಿ ಜಿಲ್ಲಾ ಕೇಬಲ್‌ ಟಿವಿ ಆಪರೇಟರ್‌ಗಳ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಆರ್‌.ರಮೇಶ್‌ ಕೇಬಲ್‌ ಟಿವಿ ಉದ್ಯಮವು ಕಳೆದ 30 ವರ್ಷಗಳಿಂದಲೂ ಚಾಲ್ತಿಯಲ್ಲಿದ್ದು, ಕೇಬಲ್‌ ಆಪರೇಟರ್‌ಗಳೇ ಸ್ವಂತ ಬಂಡವಾಳ ಹೂಡಿ, ಅನೇಕ ಸವಾಲುಗಳ ಮಧ್ಯೆ ಉದ್ಯಮ ನಡೆಸುತ್ತಾ ಬಂದಿದ್ದಾರೆ. ಆದರೆ ಈ ಸಂಸ್ಥೆಗಳಿಗೆ ಸರಕಾರ ಯಾವುದೇ ಪ್ರೋತ್ಸಾಹ ನೀಡಿಲ್ಲ. ಆದರೆ ಹೊಸ ನಿಯಮಗಳ ಹೇರಿಕೆ ಮೂಲಕ ಉದ್ಯಮವನ್ನು ನಷ್ಟಕ್ಕೀಡುಮಾಡುತ್ತಿದೆ ಎಂದು ಆರೋಪಿಸಿದರು.

ಇತ್ತೀಚೆಗೆ ಟ್ರಾಯ್‌ ಜಾರಿಗೊಳಿಸಿರುವ ಹೊಸ ಟ್ಯಾರೀಫ್‌ ಆರ್ಡರ್‌ ಅನುಸಾರ ಗ್ರಾಹಕರು ತಮ್ಮ ಇಚ್ಚೆಯ ಚಾನೆಲ್‌ಗಳನ್ನು ನೋಡಿ ಅದಕ್ಕಷ್ಟೇ ಹಣ ಪಾವತಿಸಬೇಕಿದೆ. ಇದು ಗ್ರಾಹಕರಿಗೆ ಅನುಕೂಲ ಹಾಗೂ ಕಡಿಮೆ ದರದಲ್ಲಿ ವಾಹಿನಿಗಳನ್ನು ನೀಡಬಹುದು ಎಂದು ಪ್ರಚಾರಮಾಡಿದೆ. ಆದರೆ ವಾಸ್ತವವಾಗಿ ಇದು ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಹ ಆದೇಶವಾಗಿದೆ. ಈ ಹೊಸ ಟ್ಯಾರಿಫ್‌ ಆರ್ಡರ್‌ನಿಂದ ಗ್ರಾಹಕರಿಗೆ ಕೇವಲ ಕನ್ನಡದ ಎಲ್ಲಾ ಚಾನಲ್‌ಗಳು ಲಭ್ಯವಿದ್ದು, ಮಾಸಿಕ 280 ರಿಂದ 300ರೂಗಳ ವರೆಗೆ ಪಾವತಿಸಬೇಕಾಗಿದೆ. ಇತರೆ ಭಾಷೆಯ ವಾಹಿನಿಗಳನ್ನು ನೋಡಬೇಕೆಂದರೆ ಮಾಸಿಕವಾಗಿ ಇನ್ನೂ ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ . ಕೂಡಲೇ ಆದೇಶ ಹಿಂಪಡೆಯಬೇಕಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಂ.ದಯಾನಂದ್‌ ಮಾತನಾಡಿ, ಪ್ರಸ್ತುತ ಕೇಬಲ್‌ ಗ್ರಾಹಕರಿಗೆ 230 ರೂಗಳಿಗೆ 450ಕ್ಕೂ ಹೆಚ್ಚು ಎಲ್ಲಾ ಭಾಷೆಗಳ ವಾಹಿನಿಗಳನ್ನು ನೀಡುತ್ತಿದ್ದೇವೆ. ಆದರೆ ಟ್ರಾಯ್‌ನ ಈ ಹೊಸ ನಿಯಮದಿಂದ ಕೇಬಲ್‌ ಗ್ರಾಹಕರಿಗೆ ಯಾವುದೇ ರೀತಿಯ ಉಪಯೋಗವಾಗುವುದಿಲ್ಲ, ಗ್ರಾಹಕರಿಗೂ ಇದು ಹೆಚ್ಚು ಹೊರೆಯಾಗಲಿದೆ. ಸಂಘದ ದಕ್ಷಿಣ ಭಾರತ ಘಟಕದ ಕರೆ ಮೇರೆಗೆ ಇಂದು ಕೇಬಲ್‌ ಟಿವಿ ಬಂದ್‌ ಮಾಡಿ ಕೇಂದ್ರ ಸರಕಾರ ಹಾಗೂ ಟ್ರಾಯ್‌ ವಿರುದ್ಧ ಪ್ರತಿಭಟನೆ ಮಾಡಲಾಗಿದೆ. ಟ್ರಾಯ್‌ನ ಈ ಜನವಿರೋಧಿ ನೀತಿಯನ್ನು ಕೂಡಲೇ ಹಿಂಪಡೆಯಬೇಕು. ಒಂದು ವೇಳೆ ಹಿಂಪಡೆಯದಿದ್ದರೆ ಕೇಬಲ್‌ ಆಪರೇಟರ್‌ಗಳು ಮತ್ತು ಗ್ರಾಹಕರ ಉಳಿವಿಗಾಗಿ ರಾಜ್ಯಾದ್ಯಂತ ಬೃಹತ್‌ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಬಲ್‌ ಟಿವಿ ಆಪರೇಟರ್‌ಗಳ ಸಂಘದ ಉಪಾಧ್ಯಕ್ಷ ಎನ್‌.ಜಿ.ಕುಮಾರ್‌, ಖಜಾಂಚಿ ಕೆ.ಎಸ್‌.ಮಂಜುನಾಥ್‌, ಸಂಘಟನಾ ಕಾರ್ಯದರ್ಶಿ ರವಿಕುಮಾರ್‌, ನಿರ್ದೇಶಕ ಎನ್‌.ಜಿ.ಶಂಕರ್‌, ಸದಸ್ಯರಾದ ವಿಠಲ್‌ರಾವ್‌, ಶಿವಾಜಿರಾವ್‌, ಮುತ್ತೇಗೌಡ, ಉಮೇಶ್‌.ಎಂ., ತಿಮ್ಮೇಗೌಡ, ಹರೀಶ್‌, ಪ್ರಸನ್ನಕುಮಾರ್‌, ಬಿ.ಎನ್‌.ರವಿಕುಮಾರ್‌, ಆರ್‌.ಮಂಜುನಾಥ್‌, ದೇವರಾಜ್‌ ಹಾಗೂ ಪದಾಧಿಕಾರಿಗಳು ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ