ಬೀದರ್:ಪ್ರತಿಯೊಬ್ಬ ವಿದ್ಯಾರ್ಥಿ ತಾನು ಏನು ಆಗಬೇಕು ಎಂಬುದನ್ನು ಮೊದಲು ನಿರ್ಧರಿಸಬೇಕು. ಸರಿಯಾದ ಗುರಿ ಆಯ್ಕೆ ಮಾಡಿಕೊಂಡು, ನಂತರ ಅದಕ್ಕೆ ಸಂಬಂಧಪಟ್ಟ ವಿಷಯ ಸಂಗ್ರಹಿಸಿ ಅಧ್ಯಯನ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಚ್.ಆರ್. ಮಹದೇವ್ ಹೇಳಿದರು.
ನಗರದ ಗುಂಪಾದ ಸಿದ್ಧಾರೂಢ ಮಠದಲ್ಲಿ ನಡೆದ 2016-17ನೇ ಸಾಲಿನ ಜಿಲ್ಲಾ ಯುವ ಕಾರಾರಯಗಾರ ಮತ್ತು ಸಮ್ಮೇಳನದಲ್ಲಿ ಮಾತನಾಡಿ, ಪ್ರತಿ ವರ್ಷ ದೇಶದಲ್ಲಿ ಸುಮಾರು 6 ಲಕ್ಷ ವಿದ್ಯಾರ್ಥಿಗಳು ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ಆದರೆ, ಕೇವಲ 650 ಜನರು ಮಾತ್ರ ಪಾಸಾಗುತ್ತಾರೆ. ಆದರೂ, ಛಲವನ್ನು ಬಿಡಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಸೆಲ್ವಮಣಿ ಆರ್. ಮಾತನಾಡಿ, ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆ ಬರೆಯುವವರು ಪರೀಕ್ಷೆ ಸಂದರ್ಭದಲ್ಲಿ ಮಾತ್ರ ಅಧ್ಯಯನ ಮಾಡದೇ ಸದಾಕಾಲ ಕಠಿಣ ಪರಿಶ್ರಮ ಪಡಬೇಕು. ಎಲ್ಲಾ ಕ್ಷೇತ್ರಗಳ ಸಾಮಾನ್ಯ ಜ್ಞಾನ ಹೊಂದಿರಬೇಕು ಮತ್ತು ಸತತ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ನಗರಸಭೆಯ ಆಯುಕ್ತ ಭೂ ಬಾಲನ್ ಮಾತನಾಡಿ, ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗೆ ಯಾವ ರೀತಿಯ ತಯಾರಿ ಮಾಡಬೇಕು ಎಂಬ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ ಪ್ರಾಸ್ತಾವಿಕವಾಗಿ ಮಾತನಡಿದರು.
ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಜಿ. ನಾಡಗೀರ್ ಸ್ವಾಗತಿಸಿದರು. ಶಿಲ್ಪಾ ಸ್ವಾಮಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು. ಮಹೇಶ ಗೋರನಾಳಕರ್ ನಿರೂಪಿಸಿದರು. ನಾಗರಾಜ ಗೀರ ವಂದಿಸಿದರು. ಚಿದಂಬರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಚೆನ್ನಬಸಪ್ಪಾ ಹಾಲಹಳ್ಳಿ, ಜಂಟಿ ಕಾರ್ಯದರ್ಶಿ ಬಿ.ಜಿ. ಶೆಟಕಾರ್, ಉದಯ್ ಹಲವಾಯಿ, ವಿಜಯಕುಮಾರ ಸೋನಾರೆ, ಪ್ರಭುಲಿಂಗ ಬಿರಾದಾರ್, ವಿದ್ಯಾರ್ಥಿಗಳು ಮತ್ತಿತರರು ಇದ್ದರು.