ಬೀದರ್:ದೈಹಿಕ ಕಾಯಿಲೆಗಿಂತ ಮಾನಸಿಕ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಮಾನಸಿಕ ಸಮಸ್ಯೆ ಕಾಣಿಸಿಕೊಂಡಲ್ಲಿ ತಕ್ಷಣ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಸೆಲ್ವಮಣಿ.ಆರ್. ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶ್ರುವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಾತಾವರಣ, ಆಹಾರ ಪದ್ದತಿ ಹಾಗೂ ಕೆಲಸದ ಒತ್ತಡದಿಂದಾಗಿ ಮನುಷ್ಯನ ಆರೋಗ್ಯದಲ್ಲಿ ಏರುಪೇರುಗಳು ಕಂಡು ಬರುತ್ತವೆ. ಜನರು ಮೂಢನಂಬಿಕೆಯಿಂದ ದೂರವಿದ್ದಲ್ಲಿ ಮಾನಸಿಕ ನೆಮ್ಮದಿ ಸಿಗಲು ಸಾಧ್ಯ. ಯಾವುದೇ ರೀತಿಯ ಮಾನಸಿಕ ಸಮಸ್ಯೆಗಳು ಇದ್ದಲ್ಲಿ ತಕ್ಷಣ ಮಾನಸಿಕ ತಜ್ಞರ ಬಳಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್ ಮಾತನಾಡಿ, ಮಾನಸಿಕ ಕಾಯಿಲೆಗಳ ತಡೆಗೆ ಸರಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಆರೋಗ್ಯ ಇಲಾಖೆಯಿಂದಲೂ ಅಗತ್ಯ ಪ್ರಯತ್ನಗಳು ನಡೆದಿವೆ. ಈ ಬಗ್ಗೆ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಆರೋಗ್ಯ ಕೇಂದ್ರಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಬೀದರ್ ವೈದ್ಯಕೀಯ ಮಹಾವಿದ್ಯಾಲಯದ ಪಿ.ಎಸ್.ಎಂ. ವಿಭಾಗದ ಮುಖ್ಯಸ್ಥರಾದ ಡಾ.ಪಲ್ಲವಿ ಕೇಸರಿ ಮಾತನಾಡಿ, ಜನಸಾಮಾನ್ಯರು ದೈಹಿಕ ಹಾಗೂ ಮಾನಸಿಕ ಸಮತೋಲನಗಳನ್ನು ಕಾಯ್ದುಕೊಂಡಲ್ಲಿ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಇಲ್ಲವಾದಲ್ಲಿ ಆರ್ಥಿಕ ಮತ್ತು ದೈಹಿಕವಾಗಿ ಬಲಹೀನರಾಗುವ ಸಾಧ್ಯತೆಗಳಿರುತ್ತವೆ ಎಂದರು.
ಬ್ರಿಮ್ಸ್ನ ಮಾನಸಿಕ ರೋಗ ತಜ್ಞ ಡಾ.ರಾಘವೇಂದ್ರ ವಾಗ್ಲೆ ಮಾತನಾಡಿ, ಪ್ರತಿ ಐದು ಜನರಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ ಹಲವರು ಆತ್ಮಹತ್ಯೆ ಅಥವಾ ಇತರೆ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ತಮ್ಮನ್ನು ಕಾಡುತ್ತಿರುವ ವಿಷಯಗಳನ್ನು ಆತ್ಮೀಯರಲ್ಲಿ ಹಂಚಿಕೊಳ್ಳುವ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಆತ್ಮ ಸಮಾಲೋಚನೆ ಅಥವಾ ಮಾನಸಿಕ ತಜ್ಞರ ಹತ್ತಿರ ಚಿಕಿತ್ಸೆ ಪಡೆಯುವ ಮೂಲಕ ಖಿನ್ನತೆಯಿಂದ ಹೊರಬರಬಹುದು ಎಂದು ಹೇಳಿದರು.
ಬ್ರಿಮ್ಸ್ನ ಮಾನಸಿಕ ರೋಗ ತಜ್ಞ ಡಾ.ಅಭಿಜೀತ್ ಪಾಟೀಲ್ ಮಾತನಾಡಿ, ಮಾನಸಿಕ ಒತ್ತಡಕ್ಕೆ ಆಹಾರ ಪದ್ಧತಿ, ದೈನಂದಿನ ಜೀವನ ಪದ್ಧತಿಗಳು ಹಾಗೂ ನಮ್ಮ ಯೋಚನೆಗಳೇ ಮುಖ್ಯ ಕಾರಣವಾಗಿವೆ. ಸಮತೋಲನ ಆಹಾರ, ಸರಿಯಾದ ಸಮಯದಲ್ಲಿ ನಿದ್ರೆ ಹಾಗೂ ಅವಶ್ಯವಿದ್ದಷ್ಟು ಯೋಗ ಹಾಗೂ ವ್ಯಾಯಾಮಗಳನ್ನು ಮಾಡುವುದರಿಂದ ಖಿನ್ನತೆ ದೂರ ಮಾಡಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳು, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮುಖಂಡರು ಇದ್ದರು. ಎಂ.ಬಿ.ಬಿ.ಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳಾದ ವರುಣ ಬಿ.ಆರ್ ಹಾಗೂ ತಂಡದಿಂದ ಖಿನ್ನತೆಯ ಕುರಿತಾದ ಕಿರುನಾಟಕ ಪ್ರದರ್ಶನ ನಡೆಯಿತು.