ಭಾಲ್ಕಿ: ಪೊಲೀಸ್ರು ಜನಸ್ನೇಹಿಯಾಗಬೇಕು ಪೊಲೀಸ್ ವ್ಯವಸ್ಥೆ ಜನಸಮುದಾಯದತ್ತ ಚಲಿಸಬೇಕು ಎಂಬ ಹಿನ್ನೆಲೆಯಲ್ಲಿ ಸರಕಾರ ಸುಧಾರಿತ ಗಸ್ತು ವ್ಯವಸ್ಥೆ (ಬೀಟ್) ಜಾರಿಗೊಳಿಸಿ ಆದೇಶ ನೀಡಿದ್ದು ಸಾರ್ವಜನಿಕರು ಪೊಲೀಸ್ರೊಂದಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಹೇಳಿದರು.
ತಾಲೂಕಿನ ಖಟಕ್ ಚಿಂಚೋಳಿ ಗ್ರಾಮದ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ಹಾಗೂ ಭಾಲ್ಕಿ ಗ್ರಾಮೀಣ ಪೊಲೀಸ್ ವೃತ್ತದಿಂದ ಶುಕ್ರವಾರ ಆಯೋಜಿಸಿದ್ದ ಬೀಟ್ ಜಾರಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅಂದಾಜು 8 ಲಕ್ಷ ಜನಸಂಖ್ಯೆ ಇದ್ದು 35 ಪೊಲೀಸ್ ಠಾಣೆಯಲ್ಲಿ 1300 ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ 3-4 ಹಳ್ಳಿಗಳಿಗೆ ಬೀಟ್ ವ್ಯವಸ್ಥೆ ಇತ್ತು. ಇದೀಗ ಹೊಸ ಬೀಟ್ ವ್ಯವಸ್ಥೆ ಜಾರಿಯಿರುವುದರಿಂದ ಗ್ರಾಮದ ಒಂದು ಪ್ರದೇಶಕ್ಕೆ ಒಂದು ಪೊಲೀಸ್ ಇರುತ್ತಾರೆ. ಆಯಾ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು, ಅಪರಾಧ ಕೃತ್ಯಗಳು ನಡೆದರೆ ಇವೆಲ್ಲದಕ್ಕೂ ಆಯಾ ಪ್ರದೇಶಕ್ಕೆ ನೇಮಕವಾಗಿ ಪೊಲೀಸ್ ಪೇದೆ ಅಥವಾ ಹೆಡ್ ಕಾನ್ಸಟೇಬಲ್ ಜವಾಬ್ದಾರರಾಗಿರುತ್ತಾರೆ. ಇದಕ್ಕೆ ಸಾರ್ವಜನಿಕರು ಸಹಕಾರವೂ ಅಷ್ಟೇ ಮುಖ್ಯವಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಠಾಣೆಯ ಸಿಪಿಐ ಎಂ.ಎಸ್.ಮುಲ್ಲಾ ಮಾತನಾಡಿದರು. ಜಿಪಂ ಸದಸ್ಯ ರವೀಂದ್ರ ರೆಡ್ಡಿ ಅಧ್ಯಕ್ಷ ತೆ ವಹಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಚಂದ್ರಕಾಂತ ಪಾಟೀಲ್, ಗ್ರಾಪಂ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಸದಸ್ಯ ರೇವಣಪ್ಪ ಪಾಟೀಲ್, ಪ್ರಭುರಾವ ಕಡಗಂಚಿ, ದೇವೀಂದ್ರ ಸಿಂಧೆ, ರಾಜೇಂದ್ರ, ಸಂಜೀವ ಸಿರ್ಸೆ, ರವಿ, ಶರಣಪ್ಪ, ಶ್ರೀಮಂತ, ಚಂದ್ರಕಲಾ, ಮರಿಯಮ್ಮ, ಗುರುನಾಥ ಶಿವಕುಮಾರ ವಾರದ್, ಪ್ರಭಾಕರ ಭಾಸ್ಕರ್, ಸಿದ್ಧಲಿಂಗ ಸ್ವಾಮಿ ಇದ್ದರು.
ಸಂಜೀವಕುಮಾರ ನಿರೂಪಿಸಿದರು. ಹಣಮಂತ ರೆಡ್ಡಿ ವಂದಿಸಿದರು.