Please enable javascript.ರಸ್ತೆಯಲ್ಲಿಯೇ ರಾಶಿ, ಪ್ರಯಾಣಿಕರಿಗೆ ಕಿರಿಕಿರಿ !! - ಜಿಲ್ಲಾದ್ಯಂತ ರಸ್ತೆಯಲ್ಲಿಯೇ ರಾಶಿ - Vijay Karnataka

ರಸ್ತೆಯಲ್ಲಿಯೇ ರಾಶಿ, ಪ್ರಯಾಣಿಕರಿಗೆ ಕಿರಿಕಿರಿ !!

ವಿಕ ಸುದ್ದಿಲೋಕ 22 Aug 2016, 3:51 pm
Subscribe

ಜಿಲ್ಲೆಯಾದ್ಯಂತ ಸದ್ಯಕ್ಕೆ ಹೆಸರು ಬೆಳೆಯ ರಾಶಿ ಎಲ್ಲೆಡೆ ನಡೆಯುತ್ತಿದೆ. ರಾಶಿಯ ಕಣ ಇಲ್ಲದೇ ಇರುವುದರಿಂದ ಹಾಗೂ ಕೂಲಿಯ ಆಳುಗಳ ಕೊರತೆಯಿಂದಾಗಿ ಜಿಲ್ಲೆಯ ಎಲ್ಲ ರೈತರು ಆಯಾ ಗ್ರಾಮಗಳ ವ್ಯಾಪ್ತಿಯ ಡಾಂಬರು ರಸ್ತೆ ಮೇಲೆ ರಾಶಿ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ರಸ್ತೆಯಲ್ಲಿಯೇ ರಾಶಿ, ಪ್ರಯಾಣಿಕರಿಗೆ ಕಿರಿಕಿರಿ !!

ಭೀಮರಾವ್‌ ಬುರಾನಪುರ

ಬೀದರ್‌:ಜಿಲ್ಲೆಯಾದ್ಯಂತ ಸದ್ಯಕ್ಕೆ ಹೆಸರು ಬೆಳೆಯ ರಾಶಿ ಎಲ್ಲೆಡೆ ನಡೆಯುತ್ತಿದೆ. ರಾಶಿಯ ಕಣ ಇಲ್ಲದೇ ಇರುವುದರಿಂದ ಹಾಗೂ ಕೂಲಿಯ ಆಳುಗಳ ಕೊರತೆಯಿಂದಾಗಿ ಜಿಲ್ಲೆಯ ಎಲ್ಲ ರೈತರು ಆಯಾ ಗ್ರಾಮಗಳ ವ್ಯಾಪ್ತಿಯ ಡಾಂಬರು ರಸ್ತೆ ಮೇಲೆ ರಾಶಿ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಭಾಗದ ರೈತರಿಗೆ ತಮ್ಮ ಜಮೀನುಗಳಲ್ಲಿ 'ರೈತ ರಾಶಿ ಕಣ' ಯೋಜನೆಯಡಿ ರಾಶಿಯ ಕಣ ನಿರ್ಮಿಸಿಕೊಳ್ಳಲು ಅವಕಾಶವಿದ್ದರೂ, ಪ್ರಚಾರದ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಈ ಯೋಜನೆ ಸೂಕ್ತ ಅನುಷ್ಠಾನಗೊಂಡಿಲ್ಲ.

ರೈತರು ಮುಂದೆ ಬಂದು ತಮ್ಮ ಜಮೀನುಗಳಲ್ಲಿ ವೈಯಕ್ತಿಕ ರಾಶಿಯ ಕಣ ನಿರ್ಮಿಸಿಕೊಂಡಿದ್ದರೆ ರಸ್ತೆಗಳೆಲ್ಲ ರಾಶಿಕಣವಾಗಿ ಮಾರ್ಪಾಡಾಗುತ್ತಿರಲಿಲ್ಲ. ಇಲ್ಲವೇ, ಗುಂಪು (ಕಮ್ಯೂನಿಟಿ) ರಾಶಿಯ ಕಣವನ್ನು ಕೂಡ ನಿರ್ಮಿಸಿಕೊಳ್ಳದಿರುವುದು, ಯೋಜನೆ ಸದುಪಯೋಗ ಪಡೆಯುವಲ್ಲಿ ರೈತರು ಹಿಂದೆ ಬಿದ್ದಿರುವುದಕ್ಕೆ ನಿದರ್ಶನ.

ಸರಕಾರದಿಂದ ಹಣ:

ಎಂಜಿನರೇಗಾ ಯೋಜನೆಯಡಿ ಹೀಗೆ ನಿರ್ಮಿಸಿಕೊಳ್ಳಲಾಗುವ ಕಣಕ್ಕೆ ಕಣದ ಉದ್ದ, ಅಳತೆಯ ಮೇಲೆ ಹಣವನ್ನು ಸರಕಾರವೇ ನೀಡುತ್ತದೆ. ಈ ಕುರಿತು ಜನರಿಗೆ ಅರಿವಿಲ್ಲದೇ ಇರುವುದು ಹಾಗೂ ಆಸಕ್ತಿಯ ಕೊರತೆಯೇ ಕಣಗಳ ನಿರ್ಮಾಣವಾಗದಿರುವುದು ಮುಖ್ಯ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.

''ಬೀದರ್‌ ತಾಲೂಕಿನ ಚಿಲ್ಲರ್ಗಿ ಗ್ರಾಪಂ ವ್ಯಾಪ್ತಿಯ ಫತ್ತೇಪುರ, ಚಿಮಕೋಡ್‌ ಈ ಎರಡು ಗ್ರಾಮಗಳಲ್ಲಿ ಎರಡು ಗುಂಪು ರೈತ ರಾಶಿ ಕಣಗಳನ್ನು ನಿರ್ಮಿಸಲಾಗಿದೆ. ಆದರೆ, ಅವು ದೂರವಿರುವ ಕಾರಣದಿಂದ ಅಲ್ಲಿಗೆ ಬೆಳೆ ಒಯ್ದು ರಾಶಿ ಮಾಡಲಾಗುತ್ತಿಲ್ಲ. ಹೀಗಾಗಿ ರಸ್ತೆಯ ಮೇಲೆಯೇ ರಾಶಿ ಮಾಡಿಕೊಳ್ಳುತ್ತಿದ್ದೇವೆ''ಎಂದು ಖಾಜಾಪುರ ಗ್ರಾಮದ ಲಕ್ಷ್ಮಿ ನಾಸೇನೋರ್‌ ವಿಕಕ್ಕೆ ತಿಳಿಸಿದರು.

ಸಂಚಾರಕ್ಕೆ ಅಡ್ಡಿ:

ಇದರಿಂದ ಪ್ರಯಾಣಿಕರ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಬೀದರ್‌ ತಾಲೂಕಿನ ಅಷ್ಟೂರು, ಮಾಳೆಗಾಂವ್‌, ಚಿಮಕೋಡ್‌, ಚಿಲ್ಲರ್ಗಿ, ಖಾಜಾಪುರ, ಶ್ರೀಮಂಡಲ್‌, ಜನವಾಡಾ, ಗಾದಗಿ, ಬಸಂತಪುರ ಹೀಗೆ ಎಲ್ಲ ಗ್ರಾಮಗಳ ರಸ್ತೆಗಳ ಮೇಲೆ ನಿತ್ಯ ರಾಶಿ ನಡೆಯುತ್ತಿದೆ.

ಹಿಂದೆ ರೈತರು ಜಮೀನಿನಲ್ಲಿ ಕಣ ನಿರ್ಮಿಸಿ ಕೊಯ್ದ ಬೆಳೆಯನ್ನು ಸುರುವಿ ಕೋಲಿನಿಂದ ಅಥವಾ ಎತ್ತಿನ ನೆರವಿನಿಂದ ರಾಶಿಯನ್ನು ಮಾಡುತ್ತಿದ್ದರು. ಕಣದಲ್ಲಿ ಜಾನಪದ ಹಾಡುಗಳು, ಎತ್ತುಗಳ ಗೆಜ್ಜೆಯ ಸದ್ದು ಮಾಯವಾಗಿವೆ. ಈಗ ರಸ್ತೆಯ ಮೇಲೆ ಬೆಳೆ ಸುರುವಿ ವಾಹನಗಳನ್ನು ಓಡಿಸುವ ಮೂಲಕ ರಾಶಿ ಮಾಡಲಾಗುತ್ತಿದೆ.

ಬೆಳೆಯೂ ಸೂಕ್ತ ಸಿಗದು

ರಸ್ತೆ ಮೇಲೆ ರಾಶಿ ಮಾಡುವಾಗ ಬೆಳೆಯನ್ನು ತಿರುವು, ಮುರುವು ಹಾಕಬೇಕಾಗುತ್ತದೆ. ರೈತರ ನಿಗಾ ಬೆಳೆಯ ಮೇಲಿರುತ್ತದೆಯೇ ಹೊರತು ರಸ್ತೆ ಮೇಲೆ ಬರುವ ವಾಹನದ ಮೇಲಲ್ಲ. ಹೀಗಾಗಿ, ರಸ್ತೆ ಮೇಲೆ ರಾಶಿ ಮಾಡುವುದು ಅಪಾಯಕ್ಕೆ ಆಹ್ವಾನವೂ ನೀಡಿದಂತಾಗುತ್ತಿದೆ. ಹೆಸರು ಬೆಳೆಯ ದಂಟನ್ನು ರಸ್ತೆ ಮೇಲೆ ಹಾಕಿರುವುದರಿಂದ ಕಾರು, ಬೈಕ್‌ಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ. ಅಲ್ಲದೆ, ಲಾರಿ, ಬಸ್‌ನಂತ ದೊಡ್ಡ ವಾಹನಗಳು ಹಾದು ಹೋದರೆ, ಬೆಳೆಯ ದಂಟು ಹಾಗೂ ಧಾನ್ಯ ರಸ್ತೆಯ ಬದಿಯ ಮಣ್ಣಲ್ಲಿ ಬೆರೆತು ಹಾಳಾಗುತ್ತದೆ. ರಸ್ತೆಯ ಮೇಲೆ ರಾಶಿ ಮಾಡುವ ಬದಲು ಕಣ ನಿರ್ಮಿಸಿದರೆ ಬೆಳೆಯೂ ಸೂಕ್ತವಾಗಿ ಕೈಗೆ ಸಿಗುತ್ತದೆ, ಅಪಾಯವೂ ತಪ್ಪುತ್ತದೆ. ಈಗಲಾದರೂ ಜಿಲ್ಲೆಯ ರೈತರು ಎಚ್ಚೆತ್ತು ಸರಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂಬುದು ಪ್ರಜ್ಞಾವಂತರ ಅಂಬೋಣ.

ಕೋಟ್‌ಗಳು

ಜಮೀನಿನಲ್ಲಿ ಜಾಗವಿಲ್ಲ ಎಂದು ಕೆಲ ರೈತರು ಹಿಂದೇಟು ಹಾಕಿದರೆ, ಇನ್ನು ಕೆಲವರು ಕಣ ನಿರ್ಮಿಸಿಕೊಳ್ಳಲು ಆಸಕ್ತಿಯೇ ತೋರುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ಚಿಲ್ಲರ್ಗಿ ಗ್ರಾಪಂನಡಿ ಒಂದೂ ರೈತ ರಾಶಿ ಕಣ ನಿರ್ಮಾಣವಾಗಿಲ್ಲ. ರೈತರ ನಿರಾಸಕ್ತಿಯೇ ಇದಕ್ಕೆ ಕಾರಣ.

- ಕಂಟೆಪ್ಪ, ಚಿಲ್ಲರ್ಗಿ ಪಿಡಿಒ

ರೈತ ರಾಶಿ ಕಣ ಕುರಿತು ನಮಗೆ ಮಾಹಿತಿ ಇಲ್ಲ. ರಸ್ತೆಯ ಪಕ್ಕವೇ ನಮ್ಮ ಹೊಲ ಇರುವುದರಿಂದ ಇಲ್ಲಿಯೇ ರಾಶಿ ಮಾಡಿಕೊಳ್ಳುತ್ತಿದ್ದೇವೆ. ಕಣ ನಿರ್ಮಿಸಿ ಮಾಡಲು ಕೂಲಿಯ ಆಳುಗಳು ಸಿಗುತ್ತಿಲ್ಲ. ಎಲ್ಲರ ಜಮೀನುಗಳಲ್ಲಿ ರಾಶಿ ನಡೆಯುತ್ತಿರುವುದರಿಂದ ಕೂಲಿ ಜನರಿಗೆ ಸದ್ಯಕ್ಕೆ ಬೇಡಿಕೆಯಿದೆ.

- ಭೀಮಣ್ಣ ಶಾಮರಾವ್‌ ಕರಮಣಿ, ಗಾದಗಿ

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ