ಬೀದರ್;ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿರುವ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮಾಡಿಸಿರುವ ರೈತರಿಗೆ ತಕ್ಷಣ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖರು ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಒತ್ತಾಯಿಸಿದರು.
ಜಿಪಂನಲ್ಲಿ ಸಚಿವರಿಗೆ ಮನವಿ ಸಲ್ಲಿಸಿದ ರೈತರು, ಎನ್ಡಿಆರ್ಎಫ್ ನಿಯಮದಂತೆ ಬೆಳೆ ಹಾನಿಯಾಗಿರುವ 3 ಲಕ್ಷ ಹೆಕ್ಟೇರ್ನ ಪ್ರತಿ ಎಕರೆಗೆ 2720 ರೂ. ಕೂಡಲೇ ಕೊಡಬೇಕು. ಬೀದರ್ನ ಬೀದರ್ ಸಹಕಾರಿ ಸಕ್ಕರೆ ಕಾರಖಾನೆಗೆ ಸರಕಾರದಿಂದ ಅನುದಾನ ಕೊಡಬೇಕು ಎಂದರು.
ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ರೈತ ಸಂಘದ ಪ್ರಮುಖರು, ರಾತ್ರಿ ವೇಳೆ ನೀಡಲಾಗುತ್ತಿರುವ ತ್ರಿ ಫೇಸ್ ವಿದ್ಯುತ್ ಬದಲು, ಹಗಲಿನಲ್ಲಿ ತ್ರಿ ಫೇಸ್ ವಿದ್ಯುತ್ ನೀಡಬೇಕು. ಕೂಡಲೇ ಸರಕಾರ ರೈತರ ಸಮಸ್ಯೆಗೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸುವ ಮೂಲ ಭರವಸೆ ತುಂಬಬೇಕು ಎಂದು ಮನವಿ ಮಾಡಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ್ ಕೌಠಾ, ದಯಾನಂದ ಸ್ವಾಮಿ ಸಿರ್ಸಿ, ಶಾಮಣ್ಣ ಬಾವಗಿ, ಸಿದ್ರಾಮಪ್ಪ ಆಣದೂರೆ, ವಿಠಲರೆಡ್ಡಿ ಆಣದೂರ, ಪ್ರಕಾಶ್ ಬಾವಗಿ, ಶೋಭಾವತಿ ಕಾರಭಾರಿ, ಚಂದ್ರಶೇಖರ ಜಮದಂಡಿ, ಕೋಂಡಿಬಾರಾವ್ ಪಾಂಡ್ರೆ, ಸತೀಶ್ ನನ್ನೂರೆ, ಶ್ರೀಮಂತ ಬಿರಾದಾರ್ ಸೇರಿದಂತೆ ಹಲವಾರು ರೈತರು ಇದ್ದರು.