ಆ್ಯಪ್ನಗರ

40 ಮಕ್ಕಳಿಗೆ ಒಂದೂವರೆ ಕೆಜಿ ತರಕಾರಿ ಸಾಲುತ್ತಾ ?

40 ವಿದ್ಯಾರ್ಥಿಗಳಿಗೆ ಒಂದೂವರೆ ಕೆಜಿ ತರಕಾರಿ ಸಾಲುತ್ತಾ ?,ಅಧಿಕಾರಿಗಳು ಮನೆಯಿಂದ ತರುತ್ತಾರಾ ?, ಗುಣಮಟ್ಟದ ಊಟ ನೀಡದ ಹಿನ್ನೆಲೆಯಲ್ಲಿ ಮಕ್ಕಳು ಹಾಸ್ಟೆಲ್‌ ಬಿಟ್ಟು ಮನೆಗೆ ಹೋಗುತ್ತಿದ್ದಾರೆ. ನಾನು ಜಿಲ್ಲೆಯ 8 ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ್ದೇನೆ, ಅದರಲ್ಲಿ ಒಂದೇ ಒಂದು ಕಡೆ ಗುಣಮಟ್ಟದ ಊಟ, ಕುಡಿಯುವ ನೀರು, ಸ್ವಚ್ಛತೆ ಕಂಡು ಬಂದಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಪ್ರಶ್ನಿಸಿದರು.

Vijaya Karnataka 17 Jul 2019, 7:26 pm
ಬೀದರ್‌:40 ವಿದ್ಯಾರ್ಥಿಗಳಿಗೆ ಒಂದೂವರೆ ಕೆಜಿ ತರಕಾರಿ ಸಾಲುತ್ತಾ ?,ಅಧಿಕಾರಿಗಳು ಮನೆಯಿಂದ ತರುತ್ತಾರಾ ?, ಗುಣಮಟ್ಟದ ಊಟ ನೀಡದ ಹಿನ್ನೆಲೆಯಲ್ಲಿ ಮಕ್ಕಳು ಹಾಸ್ಟೆಲ್‌ ಬಿಟ್ಟು ಮನೆಗೆ ಹೋಗುತ್ತಿದ್ದಾರೆ. ನಾನು ಜಿಲ್ಲೆಯ 8 ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ್ದೇನೆ, ಅದರಲ್ಲಿ ಒಂದೇ ಒಂದು ಕಡೆ ಗುಣಮಟ್ಟದ ಊಟ, ಕುಡಿಯುವ ನೀರು, ಸ್ವಚ್ಛತೆ ಕಂಡು ಬಂದಿಲ್ಲ. ಮಕ್ಕಳ ಮೇಲೆ ದಬ್ಬಾಳಿಕೆ, ಕಡಿಮೆ ಊಟ, ತಿಂಡಿ ನೀಡುತ್ತಿರುವುದು ಕಂಡು ಬಂದಿದೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಪ್ರಶ್ನಿಸಿದರು.
Vijaya Karnataka Web 40 children have one and a half kg vegetables
40 ಮಕ್ಕಳಿಗೆ ಒಂದೂವರೆ ಕೆಜಿ ತರಕಾರಿ ಸಾಲುತ್ತಾ ?


ಬೀದರ್‌ ಜಿಲ್ಲಾ ಪಂಚಾಯಿತಿಯ ಕಚೇರಿಯಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ,ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯ ಹೀಗೆ ಯಾವೊಂದು ಹಾಸ್ಟೆಲ್‌ಗಳಲ್ಲೂ ಸರಿಯಾದ ವ್ಯವಸ್ಥೆಯಿಲ್ಲ.ಅಧಿಕಾರಿಗಳು ಮೇಲಿಂದ ಮೇಲೆ ವಸತಿ ನಿಲಯಗಳಿಗೆ ಭೇಟಿ ನೀಡುವುದಿಲ್ಲವೇ ? ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸುವುದಿಲ್ಲವೇ ? ಎಂದು ಕೇಳಿದರು.

ಆಗ ಮಾತನಾಡಿದ ಅಧಿಕಾರಿಗಳು, ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದರು. ಮತ್ತೆ ಮಾತನಾಡಿದ ಗೀತಾ ಅವರು, ಅಧಿಕಾರಿಗಳು ಸಕಾಲಕ್ಕೆ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದರೆ ಮಕ್ಕಳಿಗೆ ಮೂಲ ಸೌಕರ್ಯಗಳೇಕೆ ಸಿಗುತ್ತಿಲ್ಲ ಎಂದರು.

ನಾನು ಭೇಟಿ ನೀಡಿದ ಹಾಸ್ಟೆಲ್‌ಗಳಲ್ಲಿನ ಅವ್ಯವಸ್ಥೆ ಹಾಗೂ ಅಲ್ಲಿನ ಮಕ್ಕಳ ಸಮಸ್ಯೆಗಳನ್ನು ಆಲಿಸಿದ ಬಳಿಕ ನನಗೆ 2 ದಿನ ರಾತ್ರಿ ನಿದ್ರೆ ಬಂದಿಲ್ಲ. ನನ್ನ ಕಣ್ಣ ಮುಂದೆಯೇ ಮಕ್ಕಳ ಸಮಸ್ಯೆ ಹೊಯ್ದಾಡುತ್ತಿದೆ. ಬಡ ಮಕ್ಕಳಿಗೆ ಮೂಲ ಸೌಕರ್ಯ ನೀಡದಿದ್ದರೆ ಅಧಿಕಾರಿಗಳಿದ್ದು ಏನು ಪ್ರಯೋಜನ ಎಂದರು.

ವಸತಿ ನಿಲಯಗಳ ಮಕ್ಕಳಿಂದ ಸಮಸ್ಯೆಗಳ ಕುರಿತು ಅನೇಕ ದೂರುಗಳು ಬರುತ್ತಿವೆ. ಹಾಸ್ಟೆಲ್‌ ಮಕ್ಕಳ ಪರಿಸ್ಥಿತಿ ಇಂದು ಅನಾಥ ಮಕ್ಕಳಂತಾಗಿದೆ. ಶ್ರೀಮಂತರು, ಉಳ್ಳವರು, ನಮ್ಮಂತಹವರು ಲಕ್ಷಾಂತರ ರೂ. ನೀಡಿ ಮಕ್ಕಳನ್ನು ಬೆಂಗಳೂರು, ಮಂಗಳೂರಿನಲ್ಲಿ ಓದಿಸುತ್ತೇವೆ.ಆದರೆ, ಬಡವರು ಸರಕಾರಿ ಹಾಸ್ಟೆಲ್‌ಗಳಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಾರೆ. ಇಂತಹ ಬಡವರ ಮಕ್ಕಳಿಗೆ ಸರಕಾರದ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಆದರೆ, ನಮ್ಮಲ್ಲಿ ಮಕ್ಕಳಿಗೆ ಸೌಕರ್ಯಗಳೇ ಸಿಗುತ್ತಿಲ್ಲ ಎಂದರು.

ಮೆನು ಚಾರ್ಟ್‌ ಬೆಂಕಿಗೆ ಹಾಕಿ

ವಸತಿ ನಿಲಯಗಳಲ್ಲಿನ ಅವ್ಯವಸ್ಥೆಯ ಕುರಿತು ಜಿಪಂ ಅಧ್ಯಕ್ಷರು ತಿಳಿಸುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮಸಾಗರ ದಾಂಡೇಕರ್‌ ಅವರು ಮಾತನಾಡಿ, ಮೆನು ಚಾರ್ಟ್‌ ಪ್ರಕಾರವೇ ಮಕ್ಕಳಿಗೆ ಊಟ, ತಿಂಡಿ ನೀಡಲಾಗುತ್ತಿದೆ ಎಂದರು. ಇದಕ್ಕೆ ಸಿಟ್ಟಾದ ಗೀತಾ ಅವರು, ನಿಮ್ಮ ಮೆನು ಚಾರ್ಟ್‌ ಅನ್ನು ಒಯ್ದು ಬೆಂಕಿಗೆ ಹಾಕಿ. ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ನೋಡಿ. ಮೆನು ಚಾರ್ಟ್‌ ಪ್ರಕಾರ ಯಾವುದನ್ನೂ ಮಕ್ಕಳಿಗೆ ನೀಡುತ್ತಿಲ್ಲ ಎಂದರು.

ಸಂತಪುರ, ವಡಗಾಂವ್‌ ಹಾಸ್ಟೆಲ್‌ಗಳಲ್ಲಿ ಮೆನು ಚಾರ್ಟ್‌ ಪ್ರಕಾರ ಮಕ್ಕಳಿಗೆ ಏನೂ ನೀಡುತ್ತಿಲ್ಲ ಎಂದರು. ಅಲ್ಲದೆ, ನಿತ್ಯ ಬರೀ ಬಿಸಿ ನೀರಿನಲ್ಲಿ ರವೆ ಹಾಕಿ ಖಿಚಡಿಯಂತೆ ಉಪ್ಪಿಟ್ಟು, ನೀರಲ್ಲಿ ಸಕ್ಕರೆ ರವೆ ಹಾಕಿ ಸೀರಾ ಮಾಡಿ ಬಡಿಸಲಾಗುತ್ತಿದೆ. ಮಕ್ಕಳು ತಿನ್ನದ ಕಾರಣ ತಿಪ್ಪೆಗೆ ಸುರಿಯಲಾಗುತ್ತಿದೆ. ಮನುಷ್ಯತ್ವ ಇದ್ದವರು ಹೀಗೆ ಮಾಡಬಾರದು.ವಸತಿ ನಿಲಯಗಳಲ್ಲಿ ಶೌಚಾಲಯ ಇಲ್ಲದ ಕಾರಣ ಮಕ್ಕಳು ಡಬ್ಬಾ ಹಿಡಿದು ಹೊರಗೆ ಹೋಗುತ್ತಿದ್ದಾರೆ. ಮಕ್ಕಳಿಗೆ ಹಾವು, ಚೇಳು ಕಡಿದು ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ