ಆ್ಯಪ್ನಗರ

ಉಜಳಂಬ ಆಸ್ಪತ್ರೆಯಲ್ಲಿ 5 ಹುದ್ದೆಗಳು ಖಾಲಿ

ತಾಲೂಕಿನ ಉಜಳಂಬ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ರೋಗಿಗಳು ಪರದಾಡುವಂತಾಗಿದೆ. ಆಯುಷ್ಯ ವೈದ್ಯಾಧಿಕಾರಿ ಸೇರಿದಂತೆ ಇಲ್ಲಿ ಒಟ್ಟು ಐದು ಹುದ್ದೆಗಳು ಖಾಲಿ ಇವೆ.

Vijaya Karnataka 14 Jun 2019, 9:18 pm
ಗಣಪತಿ ಬಿ. ಹರಕೂಡೆ ಬಸವಕಲ್ಯಾಣ:ತಾಲೂಕಿನ ಉಜಳಂಬ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ರೋಗಿಗಳು ಪರದಾಡುವಂತಾಗಿದೆ. ಆಯುಷ್ಯ ವೈದ್ಯಾಧಿಕಾರಿ ಸೇರಿದಂತೆ ಇಲ್ಲಿ ಒಟ್ಟು ಐದು ಹುದ್ದೆಗಳು ಖಾಲಿ ಇವೆ.
Vijaya Karnataka Web 5 vacancies in ujalamba hospital are empty
ಉಜಳಂಬ ಆಸ್ಪತ್ರೆಯಲ್ಲಿ 5 ಹುದ್ದೆಗಳು ಖಾಲಿ


ಇವುಗಳನ್ನು ಶೀಘ್ರದಲ್ಲೆ ಭರ್ತಿ ಮಾಡಿಕೊಂಡರೆ ಸಕಾಲಕ್ಕೆ ಸೂಕ್ತ ಆರೋಗ್ಯ ಸೇವೆ ನೀಡಲು ಸಹಕಾರಿ ಆಗುತ್ತಲ್ಲದೆ ಆರೋಗ್ಯ ಸೇವೆ ನೀಡುವಲ್ಲಿ ಉಂಟಾಗುತ್ತಿರುವ ವಿಳಂಬವನ್ನು ತಪ್ಪಿಸಬಹುದು ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.

ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮದ ಮೂಲೆ ಮೂಲೆಯಲ್ಲಿರುವ ಸಮಸ್ಯೆಗಳನ್ನು ಹೆಕ್ಕಿ ತೆಗೆದು ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದು ಕೂಡ ಪ್ರಮುಖ ಸಮಸ್ಯೆಗಳಲ್ಲೊಂದಾಗಿದೆ.

ಖಾಲಿ ಇರುವ ಹುದ್ದೆಗಳು :ಆಯುಷ್ಯ ವೈದ್ಯಾಧಿಕಾರಿ, ಎಫ್‌ಡಿಸಿ, ಸ್ಟಾಫ್‌ ನರ್ಸ್‌-2 ಮತ್ತು ಗ್ರೂಪ್‌ ಡಿ-2 ಹೀಗೆ ಒಟ್ಟು ಐದು ಹುದ್ದೆಗಳು ಖಾಲಿ ಇವೆ.

ಹಣ ಕೈಗಿಟ್ಟರೆ ಮಾತ್ರ ಗ್ಲೂಕೋಸ್‌:

ವೈದ್ಯರೊಬ್ಬರು ವಾರದಲ್ಲಿ ಎರಡು ದಿನ ಮಾತ್ರ ಆಸ್ಪತ್ರೆಗೆ ಬಂದು ಕೇವಲ ಎರಡು ಗಂಟೆ ಮಾತ್ರ ರೋಗಿಗಳಿಗೆ ತಪಾಸಣೆ,ಚಿಕಿತ್ಸೆ ಮಾಡುತ್ತಾರೆ. ವೇಳೆಗೆ ಸರಿಯಾಗಿ ವೈದ್ಯರು ಆಸ್ಪತ್ರೆಗೆ ಬರದಿರುವುದರಿಂದ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ರೋಗಿಗೆ ಗ್ಲೂಕೋಸ್‌ ಅಗತ್ಯವಿದ್ದರೆ ಆನ್‌ ಡ್ಯೂಟಿಯಲ್ಲಿರುವ ನರ್ಸ್‌ಗೆ 100-200 ರೂ. ಕೈಗೀಡಬೇಕಾಗುತ್ತದೆ ಎಂದು ಶಾಲಾ ವಿದ್ಯಾರ್ಥಿಗಳಿಬ್ಬರು ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಯವರ ಮುಂದೆ ಗೋಳು ತೋಡಿಕೊಂಡಿದ್ದಾರೆ. ವಿಷಯ ಆಲಿಸಿದ ಜಿಲ್ಲಾಧಿಕಾರಿ, ಈ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಆದೇಶಿಸಿದ್ದಾರೆ.ಅಲ್ಲದೆ, ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿರುವ ವೈದ್ಯರೊಬ್ಬರ ವರ್ಗಾವಣೆಗೂ ಅವರು ಆದೇಶಿಸಿದ್ದಾರೆ.

ಆರೋಗ್ಯ ಕೇಂದ್ರದ ಸಮಸ್ಯೆ:

ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವಸತಿ ಗೃಹ (ಕ್ವಾಟರ್ಸ್‌) ಶಿಥಿಲಾವಸ್ಥೆಯಲ್ಲಿದ್ದು ಕಿರಿಯ ಆರೋಗ್ಯ ಸಹಾಯಕಿಯರ/ಸಹಾಯಕರ ವಸತಿ ಗೃಹ ಇಲ್ಲ. ಆರು ಹಾಸಿಗೆಗಳ ಸಾಮರ್ಥ್ಯ‌ ಹೊಂದಿರುವ ಕೇಂದ್ರವನ್ನು ಅಗತ್ಯಕ್ಕನುಸಾರವಾಗಿ ಮೇಲ್ದರ್ಜೆಗೇರಿಸುವ ಅಗತ್ಯವಿದೆ.

ಪ್ರಸೂತಿ ವಿಭಾಗ ಮತ್ತು ಒಪಿಡಿ ರೋಗಿಗಳಿಗೆ ಪ್ರತ್ಯೇಕವಾಗಿ ಅನುಕೂಲವಾಗುವಂತೆ ಕೇಂದ್ರದ ಕಟ್ಟಡದ ಮೇಲೆ ಎರಡು ನೀರಿನ ಟ್ಯಾಂಕ್‌ಗಳನ್ನು ಅಳವಡಿಸಬೇಕು. ಆಸ್ಪತ್ರೆ ಕಟ್ಟಡದೊಳಗೆ ನೀರು ಪೂರೈಸುವ ಪೈಪ್‌ಲೈನ್‌ 10 ವರ್ಷ ಹಳೆಯದಾಗಿದೆ. ಅದನ್ನು ಬದಲಾಯಿಸಿ ಹೊಸದು ಅಳವಡಿಸಬೇಕು. ನಾಮಫಲಕದೊಂದಿಗೆ ಆಸ್ಪತ್ರೆಗೆ ಮುಖ್ಯ ಪ್ರವೇಶ ಗೇಟ್‌ ಇಲ್ಲ. ರೋಗಿಗಳ ಸಂಬಂಧಿಕರಿಗೆ ಬಟ್ಟೆ ಒಗೆಯಲು ಕೇಂದ್ರದ ಆವರಣದಲ್ಲಿ ನೀರಿನ ಸಿಮೆಂಟ್‌ ಕರ್ಸಿ ಇಲ್ಲದಿರುವುದರಿಂದ ಸಮಸ್ಯೆಯಾಗುತ್ತಿದೆ. 22 ವರ್ಷದ ಹಳೆಯ ಈ ಆಸ್ಪತ್ರೆಯಲ್ಲಿನ ಕೋಣೆಗಳ ಬಾಗಿಲು ಮತ್ತು ಕಿಟಕಿಗಳ ದುರಸ್ತಿಯಾಗಬೇಕಾಗಿದೆ. ಆಸ್ಪತ್ರೆಗೊಂದು ಉದ್ಯಾನವನದ ಅವಶ್ಯಕತೆ ಇದೆ ಎಂದು ಉಜಳಂಬ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ