ಆ್ಯಪ್ನಗರ

ಸಂವಿಧಾನವನ್ನೇ ಒಪ್ಪದ ಬಿಜೆಪಿ: ಗುಲಾಂ ನಬಿ ಆಜಾದ್‌

ಇಡೀ ಭಾರತ ದೇಶವೇ ಸಂವಿಧಾನದ ಮೇಲೆ ನಿಂತಿದೆ. ಆದರೆ, ಈ ಸಂವಿಧಾನವನ್ನು ಬಿಜೆಪಿ ಒಪ್ಪದು ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ, ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್‌ ಹೇಳಿದರು.

Vijaya Karnataka 21 Apr 2019, 5:00 am
ಬೀದರ್‌ :ಇಡೀ ಭಾರತ ದೇಶವೇ ಸಂವಿಧಾನದ ಮೇಲೆ ನಿಂತಿದೆ. ಆದರೆ, ಈ ಸಂವಿಧಾನವನ್ನು ಬಿಜೆಪಿ ಒಪ್ಪದು ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ, ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್‌ ಹೇಳಿದರು.
Vijaya Karnataka Web bjp unconfirmed with constitution ghulam nabi azad
ಸಂವಿಧಾನವನ್ನೇ ಒಪ್ಪದ ಬಿಜೆಪಿ: ಗುಲಾಂ ನಬಿ ಆಜಾದ್‌

ಬೀದರ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ''ದೇಶದಲ್ಲಿನ ಆಯಾ ಧರ್ಮಗಳಿಗೆ ಧರ್ಮ ಗ್ರಂಥಗಳಿರುವಂತೆ, ದೇಶಕ್ಕೆ ಹಾಗೂ ರಾಜಕೀಯಕ್ಕೆ ಧರ್ಮ ಗ್ರಂಥ ಸಂವಿಧಾನ. ಈ ಸಂವಿಧಾನದಡಿಯೇ ಕಾಂಗ್ರೆಸ್‌ನವರು ಚುನಾವಣೆ ಎದುರಿಸುತ್ತಿದ್ದೇವೆ''ಎಂದು ಸ್ಪಷ್ಟಪಡಿಸಿದರು.

''ಜಾತಿಯಾಧಾರಿತ ರಾಜಕಾರಣಕ್ಕೆ ನಾವು ಬೆಂಬಲ ನೀಡಲ್ಲ. ಭಾರತದಲ್ಲಿ ಹುಟ್ಟಿದ ಎಲ್ಲರಿಗೂ ಸಂವಿಧಾನ ರಕ್ಷಣೆ, ಸಮ್ಮಾನ ನೀಡುತ್ತದೆ. ಆದರೆ, ಬಿಜೆಪಿ ಧರ್ಮಾಧಾರಿತ ರಾಜಕೀಯ ಮಾಡುವುದಲ್ಲದೆ, ರಾಜಕೀಯಕ್ಕೆ ಧರ್ಮದ ಸಹಾಯವನ್ನು ಪಡೆಯುತ್ತಿದೆ'' ಎಂದು ಆರೋಪಿಸಿದರು.

'' ಬಿಜೆಪಿ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ. ಸಂವಿಧಾನವು ನಮಗೆಲ್ಲರಿಗೂ ನೀಡಿರುವ ಸ್ವಾತಂತ್ರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪುವುದಿಲ್ಲ. ಮೋದಿ ಅವರು ಸಿಬಿಐ ಬಳಕೆ ಮಾಡಿಕೊಂಡು ಕಾಂಗ್ರೆಸ್‌, ಡಿಎಂಕೆ, ಆಪ್‌, ಆರ್‌ಜೆಡಿಯ ಲಾಲೂ ಪ್ರಸಾದ್‌ ಯಾದವ್‌, ಮಾಯಾವತಿ, ಶರದ್‌ ಪವಾರ್‌ ಮುಂತಾದ ಎದುರಾಳಿ ಪಕ್ಷಗಳ ಮುಖಂಡರು, ಸಂಬಂಧಿಕರ ಮೇಲೆ ದಾಳಿ ನಡೆಸಿದ್ದಾರೆ. ಹೀಗೆ ದಾಳಿ ಮಾಡಿಸಿದ ಜಗತ್ತಿನ ಮೊದಲ ಪ್ರಧಾನಿ ಮೋದಿ''ಎಂದು ಟೀಕಿಸಿದರು.

''ಪ್ರಜಾಪ್ರಭುತ್ವದಲ್ಲಿ ಮೋದಿ ಅವರಿಗೆ ನಂಬಿಕೆಯೇ ಇಲ್ಲ. ಭಾರತವನ್ನು ಸರ್ವಾಧಿಕಾರಿಗಳು ಆಳುತ್ತಿರುವಂತಾಗಿದೆ. ಎಲ್ಲದ್ದಕ್ಕೂ ನಿರ್ಬಂಧ ಹೇರಲಾಗುತ್ತಿದೆ. ಊಟ, ಉಡುಗೆ, ತೊಡುಗೆ ಹೀಗೆ ಇರಬೇಕು ಎಂಬ ನಿರ್ಣಯಗಳು ಸಂವಿಧಾನಕ್ಕೆ ವಿರೋಧವಾದದ್ದಾಗಿವೆ. ಸಂಸತ್ತಿನಲ್ಲಿ ಮಾತನಾಡದ ಮೋದಿ,ಹೊರಗಡೆ ಮಾತ್ರ ಮಾತನಾಡುತ್ತಾರೆ. ಸುದ್ದಿಗೋಷ್ಠಿಯನ್ನು ನಡೆಸದ ಮೊದಲ ಪ್ರಧಾನಿ ಇವರು'' ಎಂದರು.

ವಾಜಪೇಯಿ ಬೆಸ್ಟ್‌ ಪಿಎಂ

ನರೇಂದ್ರ ಮೋದಿ ಅವರು ಸಂವಿಧಾನಕ್ಕೆ ವಿರೋಧವಾಗಿಯೇ ಎಲ್ಲವನ್ನು ಮಾಡುತ್ತಿದ್ದಾರೆ ಎಂದ ಆಜಾದ್‌ ಅವರು, ಬಿಜೆಪಿಯ ಅಟಲ್‌ ಬಿಹಾರಿ ವಾಜಪೇಯಿ ಅವರು ಇದಕ್ಕೆ ತದ್ವಿರುದ್ಧವಾಗಿದ್ದರು. ಅವರೊಬ್ಬ ಉತ್ತಮ ಪ್ರಧಾನಿಗಳಾಗಿದ್ದರು ಎಂದು ಗುಣಗಾನ ಮಾಡಿದರು. ವಾಜಪೇಯಿ ಅವರ ಆತ್ಮೀಯರಾಗಿದ್ದಕ್ಕೆ ಅವರ ಪತ್ನಿಗೆ ಟಿಕೆಟ್‌ ಸಿಗಲಿಲ್ಲ ಎಂದೂ ತೇಜಸ್ವಿನಿ ಅನಂತಕುಮಾರ ಹೆಸರು ಹೇಳದೇ ತಿಳಿಸಿದರು.

ಕಾಶ್ಮೀರ ಕೊಂದು ಹಾಕಿದ ಮೋದಿ

ಕಳೆದ ನಾಲ್ಕು ವರ್ಷಗಳಲ್ಲಿ ಕಾಶ್ಮೀರದಲ್ಲಿ ಅತಿ ಹೆಚ್ಚಿನ ಜನರು, ಸೈನಿಕರ ಸಾವಾಗಿದೆ. ದಾಳಿಗಳಾಗಿವೆ. ಪ್ರವಾಸೋದ್ಯಮ ಸಂಪೂರ್ಣ ಇಲ್ಲವಾಗಿದೆ. ಕಳೆದ 70 ವರ್ಷಗಳಲ್ಲಿ ಆಗದ್ದೆಲ್ಲ ಈ ನಾಲ್ಕೇ ವರ್ಷಗಳಲ್ಲಿ ಆಗಿದ್ದು, ಇಡೀ ಕಾಶ್ಮೀರವನ್ನು ಮೋದಿ ಕೊಂದು ಹಾಕಿದ್ದಾರೆ ಎಂದು ಗುಲಾಂ ನಬಿ ಆಜಾದ್‌ ದೂರಿದರು. ನಾರ್ತ್‌ ಈಸ್ಟ್‌ ರಾಜ್ಯಗಳಲ್ಲೂ ಬಿಜೆಪಿಯವರು ಬೆಂಕಿ ಹಚ್ಚಿದ್ದಾರೆ. ಮತಗಳಿಗಾಗಿ ಎಲ್ಲೆಡೆ ಒಡೆದಾಳಲಾಗುತ್ತಿದೆ ಎಂದರು.

ಸಂವಿಧಾನದ ಮೇಲೆ ನಡೆಯುವ ಕಾಂಗ್ರೆಸ್‌ನ ಸೀಟುಗಳೇಕೆ 2014ರಲ್ಲಿ ಕಮ್ಮಿಯಾದವು ಎನ್ನುವ ಪ್ರಶ್ನೆಗೆ ಸತ್ಯ ಹೇಳಿದ್ದಕ್ಕೆ ಕಡಿಮೆಯಾದವು. ಸುಳ್ಳು ಹೇಳಿದವರ ಸೀಟು ಹೆಚ್ಚಾದವು ಎಂದರು.

ಘಟಬಂಧನ್‌ಗೆ ಎಷ್ಟು ಸೀಟು ಲಭಿಸಲಿವೆ, ಯಾರು ಪ್ರಧಾನಿ ಅಭ್ಯರ್ಥಿ ಎನ್ನುವ ಪ್ರಶ್ನೆಗೆ, ಘಟಬಂಧನ್‌ ವರ್ಸಸ್‌ ಬಿಜೆಪಿ ನಡುವಿನ ಈ ಹೋರಾಟದಲ್ಲಿ ಸಂವಿಧಾನದಡಿ ಕೆಲಸ ಮಾಡುವವರಿಗೆ ಹೆಚ್ಚಿನ ಸೀಟು ಸಿಗಲಿದ್ದು, ಪ್ರಧಾನಿ ಯಾರು ಎಂಬುದು ಘಟಬಂಧನ್‌ ನಿರ್ಧರಿಸಲಿದೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ