ಬೀದರ್: ಹಜರತ್ ಟಿಪ್ಪು ಸುಲ್ತಾನ್ ಅವರು ಮತಾಂಧ, ಕ್ರೂರಿ ಆಗಿರಲಿಲ್ಲ. ಆದರೆ, ಇಂದು ಮತಾಂಧರಿಂದ ಹಾಗೂ ಕೋಮುವಾದಿ ಶಕ್ತಿಗಳಿಂದ ಸಮಾಜದಲ್ಲಿ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಗಂಭೀರ ಆಪಾದನೆ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಬೀದರ್ನ ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸವನ್ನು ಯಾರೂ ಮರೆಯಬಾರದು. ಇತಿಹಾಸ ತಿರುಚಬಾರದು ಎಂದು ಸಚಿವರು ನುಡಿದರು.
ಬ್ರಿಟಿಷರ ಸಾಮ್ರಾಜ್ಯಶಾಹಿ, ವಸಾಹತುಶಾಹಿ ವಿರುದ್ಧ ಹೋರಾಟ ಮಾಡಿದ ಟಿಪ್ಪು ಸುಲ್ತಾನ್ ಕನ್ನಡಿಗರು. ತಂದೆ ಹೈದರಾಲಿ ತೋರಿದ ದಾರಿಯಲ್ಲೇ ನಡೆದ ಅವರು, ವಿದೇಶಿಗರ ಕೈಯಲ್ಲಿ ಆಡಳಿತ ನೀಡಲಿಲ್ಲ ಎಂದರು. ಟಿಪ್ಪು ಕುರಿತು ಕೆಲವರು ಬೇರೊಂದು ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಸಮಾಜಕ್ಕೆ ಟಿಪ್ಪು ಕುರಿತು ಸತ್ಯ ಮಾಹಿತಿ ನೀಡಲು ರಾಜ್ಯ ಸರಕಾರದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷ ರಹಿಂ ಖಾನ್ ಮಾತನಾಡಿ, ಟಿಪ್ಪು ಸುಲ್ತಾನ್ ಅವರ ಕುರಿತು ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಿ, ನಾಡಿನಲ್ಲಿ ಅಶಾಂತಿ ಕದಡುವ ಕೆಲಸವನ್ನು ಮಾಡಲಾಗುತ್ತಿದೆ. ಏನೆಲ್ಲ ಮಾಡಿದರೂ ಟಿಪ್ಪು ಸುಲ್ತಾನ್ ಅವರ ಕುರಿತು ಜನರಲ್ಲಿ ಪ್ರೀತಿ ಹೆಚ್ಚಾಗುತ್ತಿದೆಯೇ ಹೊರತು ಕಮ್ಮಿಯಾಗುತ್ತಿಲ್ಲ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷೆ ಭಾರತಬಾಯಿ ಮಲ್ಲಿನಾಥ ಸೇರಿಕಾರ್, ಬಿಡಿಎ ಅಧ್ಯಕ್ಷ ಸಂಜಯ್ ಜಾಗಿರದಾರ್, ನಗರಸಭೆಯ ಹಂಗಾಮಿ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ಕಂಠೀರವ ಸ್ಟುಡಿಯೋ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ್, ಮಾಜಿ ಶಾಸಕ ಮೊಹಮ್ಮದ್ ಲೈಕೋದ್ದಿನ್, ಎಸ್ಪಿ ದೇವರಾಜು ಡಿ., ಹೆಚ್ಚುವರಿ ಡಿಸಿ ಡಾ.ಡಿ.ಷಣ್ಮುಖ, ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ, ಇರ್ಷಾದ್ ಪೈಲ್ವಾನ್, ಅಬ್ದುಲ್ ಅಲಿ, ಡಾ.ಎನ್.ಎ.ಖಾದ್ರಿ ಇತರರಿದ್ದರು.
ತಡವಾಗಿ ಆರಂಭ, ಭಣಗುಡುವ ಕುರ್ಚಿಗಳು
ಬೆಳಗ್ಗೆ 11ಕ್ಕೆ ಶುರುವಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವು ಮಧ್ಯಾಹ್ನ 12.20ಕ್ಕೆ ಶುರುವಾಯಿತು. ಸಚಿವ ಈಶ್ವರ್ ಖಂಡ್ರೆ ಅವರು ಸಕಾಲಕ್ಕೆ ಬಾರದೇ ಇರುವುದರಿಂದ ಕಾರ್ಯಕ್ರಮ ವಿಳಂಬವಾಗಿ ಆರಂಭವಾಯಿತು. ಸಚಿವರಿಗಾಗಿ ಅಧಿಕಾರಿಗಳು, ವಿದ್ಯಾರ್ಥಿಗಳು, ಜನರು ಕಾದು ಕುಳಿತಿದ್ದರು. ತಡವಾಗಿ ಆರಂಭವಾಗಿದ್ದಕ್ಕೆ ಜನರು ಗೊಣಗುವಂತಾಯಿತು.
ಕಾರ್ಯಕ್ರಮ ತಡವಾಗಿ ಆರಂಭಿಸಿದ್ದರಿಂದ ಜನರ ಜಿಲ್ಲಾ ರಂಗ ಮಂದಿರದಲ್ಲಿ ಕೂಡಲಿಲ್ಲ ಹಾಗೂ ಕಾರ್ಯಕ್ರಮಕ್ಕೆ ಹೆಚ್ಚಿನ ಜನರೂ ಬಂದಿರಲಿಲ್ಲ. ಹೀಗಾಗಿ ಬೆರಳೆಣಿಕೆಯ ಜನರಿಂದಾಗಿ ರಂಗ ಮಂದಿರದಲ್ಲಿನ ಕುರ್ಚಿಗಳು ಬಿಕೋ ಎನ್ನುತ್ತಿದ್ದವು. ಕೆಲ ಶಾಲಾ ಮಕ್ಕಳನ್ನು ಕರೆತಂದು ರಂಗ ಮಂದಿರದಲ್ಲಿ ಕೂಡಿಸಲಾಗಿತ್ತು. ಸಾರ್ವಜನಿಕರು ತುಂಬಾ ಕಮ್ಮಿ ಸಂಖ್ಯೆಯಲ್ಲಿದ್ದರು.
ಭಾರಿ ಬಂದೋಬಸ್ತ್, ತಪಾಸಣೆ
ಬೆಳಗ್ಗೆ10ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಟಿಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮದ ನಿಮಿತ್ತ ಜಿಲ್ಲಾಧಿಕಾರಿ ಕಚೇರಿ ಹೊರಗಡೆ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಾಡು ಮಾಡಲಾಗಿತ್ತು. ವೇದಿಕೆ ಕಾರ್ಯಕ್ರಮ ನಡೆದ ಜಿಲ್ಲಾ ರಂಗ ಮಂದಿರದ ಆವರಣದಲ್ಲೂ ಎಸ್ಪಿ ದೇವರಾಜು ಡಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ರಂಗ ಮಂದಿರದೊಳಗೆ ಜನರನ್ನುತಪಾಸಣೆ ಮಾಡಿ ಬಿಡಲಾಯಿತು. ಎಲ್ಲ ದ್ವಾರಗಳಲ್ಲಿ ತಪಾಸಣೆ ನಡೆಯಿತು. ಮುಖ್ಯ ದ್ವಾರದಲ್ಲಿ ತಪಾಸಣೆಯ ಯಂತ್ರವನ್ನು ಅಳವಡಿಸಲಾಗಿತ್ತು. ಎಲ್ಲೆಡೆ ಪೊಲೀಸರ ನಿಯೋಜನೆ ಮಾಡಲಾಗಿತ್ತು.
ದೂರವುಳಿದ ಬಿಜೆಪಿಗರು
ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಹಿಷ್ಕಾರ ಹಾಕಿದ್ದ ಸಂಸದ ಭಗವಂತ ಖೂಬಾ ಸೇರಿದಂತೆ, ಔರಾದ್ ಶಾಸಕ ಪ್ರಭು ಚವ್ಹಾಣ್, ಎಂಎಲ್ಸಿಗಳಾದ ರಘುನಾಥ ಮಲ್ಕಾಪುರೆ, ಅಮರನಾಥ ಪಾಟೀಲ್ ಅವರುಗಳು ಬೀದರ್ನ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ.