ಬೀದರ್: ಬೀದರ್ ಸಹಕಾರಿ ಸಕ್ಕರೆ ಕಾರಖಾನೆಗೆ ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಈಶ್ವರ್ ಖಂಡ್ರೆ ಈಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಕಾರಖಾನೆಗೆ ದಯನೀಯ ಸ್ಥಿತಿ ಬಂದಿದ್ದು, ಇದಕ್ಕೆ ಅವರೆ ಹೊಣೆ ಎಂದು ಬಿಜೆಪಿ ರಾಜ್ಯ ಕಬ್ಬು ಬೆಳೆಗಾರರ ಪ್ರಕೋಷ್ಠದ ಸಂಚಾಲಕ ಡಿ.ಕೆ. ಸಿದ್ರಾಮ್ ಲೇವಡಿ ಮಾಡಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರ ಜೀವನಾಡಿಯಾಗಿರುವ ಈ ಕಾರಖಾನೆಯಿಂದಲೇ ಖಂಡ್ರೆ ಪರಿವಾರ ಮೇಲೆ ಬಂದಿದೆ. ಯಾವ ಕಾರಖಾನೆಯಿಂದ ಖಂಡ್ರೆ ಅವರು ಮೇಲೆ ಬಂದಿದ್ದಾರೋ, ಆ ಕಾರಖಾನೆಯನ್ನೇ ಅವರಿಗೆ ಉಳಿಸಿಕೊಳ್ಳಲಾಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು.
ಕಾರಖಾನೆಯ ಆರಂಭಿಸಲು 10 ಕೋಟಿ ಸಾಲಕ್ಕೆ ಗ್ಯಾರಂಟಿ ನೀಡಲಾಗಿದ್ದರೂ, ಅಪೆಕ್ಸ್ ಬ್ಯಾಂಕ್ನವರು ಸಾಲ ನೀಡುತ್ತಿಲ್ಲವಂತೆ. ಅಭಿವೃದ್ಧಿಯ ಹೆಸರ ಮೇಲೆ 1000 ಕೋಟಿ ತರಲಾಗಿದೆ ಎಂದು ಸಚಿವರು ಹೇಳಿದ್ದಾರೆ. ರೈತರ ಹಿತಕ್ಕಾಗಿ ಕೇವಲ 10 ಕೋಟಿಗೆ ಗ್ಯಾರಂಟಿ ನೀಡಿದ್ದರೂ ಸಾಲ ಸಿಗುತ್ತಿಲ್ಲ. ಇದು ಕೇವಲ ಕಣ್ಣೊರೆಸುವ ತಂತ್ರವಷ್ಟೇ ಎಂದು ಆಪಾದಿಸಿದರು.
ಜಿಲ್ಲೆಯ ಇತರೆ ಸಕ್ಕರೆ ಕಾರಖಾನೆಗಳು ಸದ್ಯದವರೆಗೆ 1.60 ಲಕ್ಷ ಟನ್ಗೂ ಅಧಿಕ ಕಬ್ಬು ನುರಿಸಿದರೆ, ಬಿಎಸ್ಎಸ್ಕೆ ಕೇವಲ 11.252 ಟನ್ ಮಾತ್ರ ಕಬ್ಬು ನುರಿಸಿದೆ. ಈ ಕಾರಖಾನೆಗೆ ಇಂತಹ ಸ್ಥಿತಿ ಬರಲು ಸಚಿವ ಈಶ್ವರ್ ಖಂಡ್ರೆ ಅವರೇ ನೇರ ಕಾರಣ ಎಂದು ದೂರಿದರು.
ಟನ್ ಕಬ್ಬಿಗೆ ಸಕ್ಕರೆ ಕಾರಖಾನೆಗಳವರು ಕೇವಲ 1900 ರೂ. ನೀಡುತ್ತಿದ್ದಾರೆ. ಈ ಹಿಂದೆ ಸಚಿವರು ಪ್ರತಿ ಟನ್ಗೆ 2200 ರೂ. ಕೊಡಿಸುವುದಾಗಿ ಹೇಳಿದ್ದರು. ಅಂತೆಯೇ ಪ್ರತಿ ಟನ್ಗೆ 2200 ರೂಪಾಯಿ ಕೊಡಿಸಬೇಕು ಎಂದರು. ಅಲ್ಲದೆ, ತಮ್ಮ ಕಾಲೇಜಿಗೆ ಧಕ್ಕೆ ಆಗುತ್ತದೆ ಎಂಬ ಕಾರಣದಿಂದ ಸರಕಾರಿ ಎಂಜಿನಿಯರಿಂಗ್ ಕಾಲೇಜು ಆರಂಭಿಸುತ್ತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶಾಮರಾವ್ ವರವಟ್ಟಿಕರ್, ಶಿವಾಜಿರಾವ್ ಭೋಸ್ಲೆ, ಶಾಂತವೀರ ಕೇಸ್ಕರ್, ಪ್ರತಾಪ್ ಪಾಟೀಲ್, ಸುರೇಶ್ ಕಾನೇಕರ್, ಚಂದ್ರಕಾಂತ ಪಾಟೀಲ್, ಶರಣಪ್ಪ ಕಡಗಂಚೆ ಇದ್ದರು.
ಸಾಯಗಾಂವ್ಅನ್ನು ಹುಲಸೂರಿಗೆ ಸೇರಿಸಿ
ಹುಲಸೂರಿಗೆ ಸಾಯಗಾಂವ್ ಕೇವಲ 6 ಕಿಮೀ ಇದೆ. ಭಾಲ್ಕಿ 20 ಕಿಮೀ ಇದೆ. ಆದರೂ, ಸಾಯಗಾಂವ್ ಅನ್ನು ಹುಲಸೂರು ತಾಲೂಕಿಗೆ ಸೇರಿಸದೇ ಸಚಿವರು ರಾಜಕೀಯವಾಗಿ ಮರಾಠಾ ಭಾಗದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಡಿಕೆ ಆರೋಪ ಮಾಡಿದರು. ಸಾಯಗಾಂವ್ ಅನ್ನು ಕೂಡಲೇ ಹುಲಸೂರು ವ್ಯಾಪ್ತಿಗೆ ಸೇರಿಸಬೇಕು ಎಂದರು. ಅಲ್ಲದೆ, ಸಾಯಗಾಂವ್ ಜಿಪಂ ಕ್ಷೇತ್ರವಾದರೂ ಒಂದೂ ತೊಗರಿ ಖರೀದಿ ಕೇಂದ್ರ ಆರಂಭಿಸದೇ ತಾರತಮ್ಯ ಮನೋಭಾವ ಪ್ರದರ್ಶಿಸಲಾಗುತ್ತಿದೆ ಎಂದರು.
ಬಿಎಸ್ವೈ ಗ್ರೀನ್ ಸಿಗ್ನಲ್:
ಪರಿವರ್ತನಾ ಯಾತ್ರೆಯಲ್ಲಿ ಪ್ರಕಾಶ್ ಖಂಡ್ರೆ ಭಾಲ್ಕಿಯ ಅಭ್ಯರ್ಥಿ ಎಂದು ಘೋಷಿಸಿದ್ದಕ್ಕೆ ನೋವಾಗಿದ್ದು ನಿಜ. ಹೀಗಾಗಿ, ಯಡಿಯೂರಪ್ಪನವರ ವಿರುದ್ಧ ಮಾತನಾಡಿದ್ದೆ ಎಂದು ಡಿ.ಕೆ. ಸಿದ್ರಾಮ್ ಹೇಳಿದರು. ಯಡಿಯೂರಪ್ಪನವರ ವಿರುದ್ಧ ಮಾತನಾಡಿದ್ದಕ್ಕೆ ಕ್ಷಮೆಯಾಚಿಸುವೆ ಎಂದರು. ಬಿಎಸ್ವೈ ಹಾಗೂ ನನ್ನ ನಡುವೆ ಉತ್ತಮ ಬಾಂಧವ್ಯ ಇದೆ. ಅವರು ನನಗೆ ಕರೆಸಿ ಮಾತನಾಡಿದ್ದಾರೆ ಎಂದರು. ಮತ್ತೆ ನಡೆದ ಸಮೀಕ್ಷೆಯಲ್ಲಿ ನನ್ನ ಹೆಸರೇ ಮುಂದಿದ್ದು, ಮತ್ತೆ ಯಡಿಯೂರಪ್ಪನವರು ಮಾತನಾಡಿ, ಕ್ಷೇತ್ರದಲ್ಲಿ ಕೆಲಸ ಶುರು ಮಾಡು ಎಂದಿದ್ದಾರೆ ಎಂದೂ ಡಿ.ಕೆ. ಸಿದ್ರಾಮ್ ಹೇಳಿದರು.
ನನಗೆ, ಇಲ್ಲದಿದ್ದರೆ ಮರಾಠಾ ಅಭ್ಯರ್ಥಿಗೆ ಕೊಡಿ
ಸಮೀಕ್ಷೆಯಂತೆ ನನಗೆ ಟಿಕೆಟ್ ನೀಡಬೇಕು. ಇಲ್ಲವಾದರೆ ಮರಾಠಾ ಅಭ್ಯರ್ಥಿಗೆ ಭಾಲ್ಕಿಯ ಬಿಜೆಪಿ ಟಿಕೆಟ್ ನೀಡಬೇಕು ಎಂದು ಡಿ.ಕೆ. ಸಿದ್ರಾಮ್ ನುಡಿದರು. ನನಗೆ ಪಕ್ಷ ಟಿಕೆಟ್ ನೀಡದೇ ಇದ್ದರೂ ಪಕ್ಷದ ಕಾರ್ಯಕರ್ತನಾಗಿ ಇರುತ್ತೇನೆ. ನನಗೆ ಜೆಡಿಎಸ್ನವರೂ ಸಂಪರ್ಕಿಸಿದ್ದು ನಿಜ, ಆದರೆ ನಾನು ಜೆಡಿಎಸ್ ಸೇರಲ್ಲ. ಜನವರಿ 26 ರಿಂದ ಮನೆ ಮನೆಗೆ ಪಾದಯಾತ್ರೆ ಶುರು ಮಾಡುವೆ ಎಂದರು.
ಸದ್ಯಕ್ಕೆ ಭಾಲ್ಕಿ ಕ್ಷೇತ್ರದಲ್ಲಿ ಈಶ್ವರ್ ಖಂಡ್ರೆ ಅವರಿಗೆ ವಿರುದ್ಧವಾದ ವಾತಾವರಣವಿದೆ. ಭಾಲ್ಕಿಯಲ್ಲಿ ಒಬ್ಬ ಗುತ್ತಿಗೆದಾರನಿಗೆ ಮಾತ್ರ ಕೆಲಸ ನೀಡುತ್ತಿದ್ದಾರೆ. ಎಲ್ಲವನ್ನು ಮುಂದಿನ ದಿನಗಳಲ್ಲಿ ಬಯಲಿಗೆಳೆಯುವೆ ಎಂದರು.