ಆ್ಯಪ್ನಗರ

ಅಕ್ರಮವಾಗಿ ಪಡಿತರ ಸಾಗಣೆ ಮಾಡುವವರ ವಿರುದ್ಧ ಎಫ್‌ಐಆರ್‌: ಸಚಿವ ಗೋಪಾಲಯ್ಯ

ರಾಜ್ಯದಲ್ಲಿ ಪಡಿತರಕ್ಕೆ ಯಾವುದೇ ಕೊರತೆಯಿಲ್ಲ ಎಂದು ಸಚಿವ ಗೋಪಾಲಯ್ಯ ಹೇಳಿದ್ದು, ಅಕ್ರಮವಾಗಿ ಪಡಿತರ ಧಾನ್ಯ ಸಾಗಣೆ ಮಾಡುವ ಮಾಲೀಕರ ಮೇಲೆ ಎಫ್ಐಆರ್ ದಾಖಲಿಸಿ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Vijaya Karnataka Web 10 Jun 2020, 9:05 pm
ಬೀದರ್: ರಾಜ್ಯದಲ್ಲಿ ಪಡಿತರಕ್ಕೆ ಕೊರತೆಯಿಲ್ಲ. ಹೀಗಾಗಿ ರೇಷನ್ ಕಾರ್ಡ್‌ ಇರದವರಿಗೆ, ವಲಸಿಗರು ಎಲ್ಲರಿಗೂ ತಪ್ಪದೇ ಪಡಿತರ ವಿತರಣೆ ವ್ಯವಸ್ಥೆ ಮಾಡಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆ ಹಾಗೂ ಪ್ರಧಾನಮಂತಿ ಗರೀಬ್ ಕಲ್ಯಾಣ ಅನ್ನ ಯೋಜನೆ ಮತ್ತು ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಪಡಿತರ ವಿತರಣೆಯ ಸಮರ್ಪಕ ಅನುಷ್ಠಾನದ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
Vijaya Karnataka Web minister gopalaiah ordered officials to book fir against owners who supplies ration illegally in bidar
ಅಕ್ರಮವಾಗಿ ಪಡಿತರ ಸಾಗಣೆ ಮಾಡುವವರ ವಿರುದ್ಧ ಎಫ್‌ಐಆರ್‌: ಸಚಿವ ಗೋಪಾಲಯ್ಯ


ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರ ಬಗ್ಗೆ ಕಾಳಜಿ ವಹಿಸಿ ಏಪ್ರಿಲ್‌ನಲ್ಲಿ ಸಾಕಷ್ಟು ಪಡಿತರ ಕೊಟ್ಟಿದೆ. ಇದು ಬಡವರಿಗೆ ಸರಿಯಾಗಿ ತಲುಪಬೇಕು. ಪಡಿತರ ನೀಡಲು ಸರಕಾರಗಳು ಕೋಟ್ಯಂತರ ರೂ. ಖರ್ಚು ಮಾಡುತ್ತಿವೆ. ಮಕ್ಕಳಿಗೆ ಕಳಪೆ ಆಹಾರ ಪೂರೈಸಿದರೆ ಸಹಿಸುವುದಿಲ್ಲ. ಎಲ್ಲಾದರೂ ಕಳಪೆ ಆಹಾರ ಧಾನ್ಯ ಪೂರೈಸುವುದು ಕಂಡುಬಂದರೆ ಇಲಾಖೆಗೆ ತಿಳಿಸಿ ಎಂದು ಹೇಳಿದರು.

​ಪಡಿತರ ಅಕ್ರಮ ಮಾರಾಟಗಾರರ ಮೇಲೆ ಕ್ರಮ

ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪಡಿತರಕ್ಕೆ ನೀಡಿದ ಆಹಾರ ಧಾನ್ಯಗಳ ಅಕ್ರಮ ಮಾರಾಟ ನಡೆಯುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಎಷ್ಟೇ ಪ್ರಭಾವಿ ಇರಲಿ, ಅಕ್ರಮವಾಗಿ ಪಡಿತರ ಧಾನ್ಯ ಸಾಗಣೆ ಮಾಡುವ ಮಾಲೀಕರ ಮೇಲೆ ಎಫ್ಐಆರ್ ದಾಖಲಿಸಿ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೆಲವು ಶಾಲೆಗಳಲ್ಲಿ 6 ತಿಂಗಳಿನಿಂದ ಪಡಿತರ ಹಾಗೆ ಇರುವುದು ಕಂಡು ಬಂದಿದೆ. ಹೀಗೆ ಮಾಡುವುದು ತಪ್ಪು. ಅವಧಿ ಮೀರಿದ ಯಾವುದೇ ಧಾನ್ಯಗಳನ್ನು ಮತ್ತು ಎಣ್ಣೆಯನ್ನು ಶಾಲಾ ಮಕ್ಕಳಿಗೆ ವಿತರಿಸಬಾರದು. ಶಾಲೆಗಳಲ್ಲಿರುವ ಹಳೆಯ ಸ್ಟಾಕ್‌ನ್ನುಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಹೊಸದಾಗಿ ನೀಡಿದ ಧಾನ್ಯ ಹಾಗೂ ಎಣ್ಣೆಯನ್ನು ಶಾಲೆಗಳಲ್ಲಿ ಬಳಸಲು ಕ್ರಮ ವಹಿಸಬೇಕು ಎಂದು ಗೋಪಾಲಯ್ಯ ಸೂಚಿಸಿದರು.

​‘ತಪ್ಪಿತಸ್ಥರ ಮೇಲೆ ಕ್ರಿಮಿನಲ್‌ ಕೇಸ್‌ ಹಾಕಬೇಕು’: ಡಿಸಿ

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್., ಪಡಿತರ ಕೇಂದ್ರಗಳಿಗೆ ತಹಶೀಲ್ದಾರರು ಅನಿರೀಕ್ಷಿತ ಭೇಟಿ ನೀಡಿ, ಪಡಿತರ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬೇಕು. ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಈಗ ಮಳೆ ಆರಂಭವಾಗಿದೆ. ಎಲ್ಲ ಶಾಲೆಗಳಲ್ಲಿ ಆಹಾರ ಧಾನ್ಯಗಳನ್ನು ಸುರಕ್ಷತೆಯಿಂದಿಡಲು ನೋಡಿಕೊಳ್ಳಬೇಕು. ನ್ಯಾಯಬೆಲೆ ಅಂಗಡಿಗಳಿಗು ಕೂಡ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಬೇಕು ಎಂದರು.

​‘ಸರಕಾರದ ಕ್ರಮ ಶ್ಲಾಘನೀಯ’: ಶಾಸಕ ಬಿ.ನಾರಾಯಣರಾವ್‌

ಇದೆ ವೇಳೆ ಶಾಸಕ ಬಿ.ನಾರಾಯಣರಾವ್ ಮಾತನಾಡಿ, ಕೊರೊನಾದಂತಹ ಕಠಿಣ ಸಂದರ್ಭದಲ್ಲಿ ಸರಕಾರ ಜನರ ಬಳಿ ಬಂದು, ಮೂರು ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯ ನೀಡಿದ್ದು ನಿಜಕ್ಕೂ ಶ್ಲಾಘನೀಯ. ನರೇಗಾ ಯೋಜನೆಯಡಿ ನಮ್ಮ ತಾಲೂಕಿನಲ್ಲಿ ಜನತೆಗೆ ಕೈ ತುಂಬಾ ಕೆಲಸ ಸಿಕ್ಕಿದೆ. ಬಸವಕಲ್ಯಾಣ ತಾಲೂಕಿನಲ್ಲಿ 10,000ಕ್ಕೂ ಹೆಚ್ಚು ಜನರಿಗೆ ಕೆಲಸ ಸಿಕ್ಕಿದೆ ಎಂದು ಸರಕಾರದ ಕಾರ್ಯವನ್ನು ಮೆಚ್ಚಿದರು.

ವಿದ್ಯಾರ್ಥಿಗಳಿಗೆ ಪೂರೈಕೆಯಾಗುವ ಧಾನ್ಯ ಸರಿ ಇಲ್ಲ ಎಂಬ ಆರೋಪ

ಜಿಪಂ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಮಾತನಾಡಿ, ಹಾಸ್ಟೆಲ್‌ಗಳಿಗೆ ಪೂರೈಕೆಯಾಗುವ ತೊಗರಿ ಬೇಳೆ, ಅಕ್ಕಿಯಂತಹ ಆಹಾರ ಧಾನ್ಯಗಳು ಸರಿ ಇಲ್ಲ ಎನ್ನುವ ದೂರುಗಳಿವೆ. ನಾವು ಕೂಡ ಖುದ್ದು ಭೇಟಿ ನೀಡಿ ನೋಡಿದ್ದೇನೆ ಎಂದು ತಿಳಿಸಿದರು. ಜಿಪಂ ಉಪಾಧ್ಯಕ್ಷರಾದ ಲಕ್ಷ್ಮಣ ಈಶ್ವರ ಬುಳ್ಳಾ ಮಾತನಾಡಿ, ಸಂಬಂಧಿಸಿದ ಅಧಿಕಾರಿಗಳು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದರು. ಆಹಾರ ಇಲಾಖೆಯ ಉಪ ನಿರ್ದೇಶಕರಾದ ಬಾಬು ರೆಡ್ಡಿ ಮಾತನಾಡಿ, ಪಡಿತರ ವಿತರಣೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಕೆಎಫ್‌ಸಿಎಸ್‌ಸಿನ ಜನರಲ್ ಮ್ಯಾನೇಜರ್ ಚಂದ್ರಕಾಂತ, ಆಪ್ತ ಕಾರ್ಯದರ್ಶಿ ಕಾಂತರಾಜು, ತಹಸೀಲ್ದಾರರು ಮತ್ತು ಆಹಾರ ಇಲಾಖೆಯ ನಿರೀಕ್ಷಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ