ಬೀದರ್: ಬಸವಕಲ್ಯಾಣದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೊಂದಿಗೆ, ಸೋಮವಾರ ಅನುಭವ ಮಂಟಪದಲ್ಲೇ ಕೆಲ ಕಾಲ ಈ ಬಗ್ಗೆ ಚರ್ಚಿಸಿದರು.
ಅತ್ತ ಡಾ. ಬಸವಲಿಂಗ ಪಟ್ಟದ್ದೇವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಅನುಭವ ಮಂಟಪ, ಬಸವಣ್ಣನವರ ಕುರಿತು ಮನವರಿಕೆ ಮಾಡುತ್ತಿದ್ದರೆ ಇತ್ತ ವೇದಿಕೆ ಮೇಲಿಂದಲೇ ಎದ್ದು ಹೋದ ಯಡಿಯೂರಪ್ಪ ಅವರು ಮಲ್ಲಿಕಾರ್ಜುನ ಖೂಬಾ ಅವರ ಹೆಗಲ ಮೇಲೆ ಕೈ ಹಾಕಿ ಕಿವಿಯಲ್ಲೇ ಗುಸು ಗುಸು ಮಾತನಾಡುತ್ತಿದ್ದರು. ಇದು ಅಲ್ಲಿದ್ದ ಬಿಜೆಪಿಯ ನಾಯಕರೆಲ್ಲರೂ ಅವರತ್ತಲೇ ನೋಡುವಂತೆ ಮಾಡಿತು.
ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರೂ ಹಾಜರಾಗಿ ಅಚ್ಚರಿ ಮೂಡಿಸಿದರು. ವಿಕದೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು, ಹೋಳಿ ಹುಣ್ಣಿಮೆ ನಂತರ ಜೆಡಿಎಸ್ಗೆ ರಾಜೀನಾಮೆ ನೀಡುವೆ. ಜತೆಗೆ, ಹೋಳಿ ಹಬ್ಬದ ನಂತರ ಬಿಜೆಪಿ ಸೇರುವುದು ಖಚಿತ ಎಂದು ಸ್ಪಷ್ಟಪಡಿಸಿದರು. ಅದ್ಧೂರಿಯಾದ ಕಾರ್ಯಕ್ರಮವೊಂದನ್ನು ಮಾಡಿಯೇ ಬಿಜೆಪಿ ಸೇರುವೆ ಎಂದರು.