ಆ್ಯಪ್ನಗರ

ಸೊರಗಿದ ಮಳೆ, ಎಲ್ಲೆಡೆ ಒಣ ಹವೆ

ಮುಂಗಾರು ಬಿತ್ತನೆಗೆ ಅಣಿಯಾದರೂ ಮಳೆ ಕೊರತೆಯಿಂದ ರೈತರು ಹಿಂದೇಟು ಹಾಕುವಂತಾಗಿದೆ. ಎಲ್ಲೆಡೆ ಒಣ ಹವೆ, ಗಾಳಿಯಿಂದಾಗಿ ನೆಲದಲ್ಲಿ ತೇವಾಂಶವೂ ಕಡಿಮೆಯಾಗುತ್ತಿದೆ.

Vijaya Karnataka 29 Jun 2019, 5:00 am
ಬಸವಕಲ್ಯಾಣ:ಮುಂಗಾರು ಬಿತ್ತನೆಗೆ ಅಣಿಯಾದರೂ ಮಳೆ ಕೊರತೆಯಿಂದ ರೈತರು ಹಿಂದೇಟು ಹಾಕುವಂತಾಗಿದೆ. ಎಲ್ಲೆಡೆ ಒಣ ಹವೆ, ಗಾಳಿಯಿಂದಾಗಿ ನೆಲದಲ್ಲಿ ತೇವಾಂಶವೂ ಕಡಿಮೆಯಾಗುತ್ತಿದೆ.
Vijaya Karnataka Web no rain dry hay everywhere
ಸೊರಗಿದ ಮಳೆ, ಎಲ್ಲೆಡೆ ಒಣ ಹವೆ


ಬಿತ್ತನೆಗೆ ಸಜ್ಜಾಗಿ ಕುಳಿತ ರೈತರು, ಜೂನ್‌ ತಿಂಗಳು ಮುಗಿಯುತ್ತ ಬಂದರೂ ಬಿತ್ತನೆ ಯೋಗ್ಯ ಮಳೆ ಬರುತ್ತಿಲ್ಲ ಎಂದು ಗೋಳು ತೋಡಿಕೊಳ್ಳುತ್ತಿದ್ದಾರೆ. ಕಳೆದ ಶುಕ್ರವಾರ ರಾತ್ರಿ (ಜೂ.21) ತಾಲೂಕಿನಾದ್ಯಂತ ಮಳೆ ಆಗಿದ್ದು, ತದನಂತರ ವಾರ ಕಳೆದರೂ ಮಳೆ ಮಾಯವಾಗಿದೆ. ಜೂನ್‌ ಮುಗಿಯುವ ಹಂತದಲ್ಲಿದ್ದು, ರೈತರು ಅಂದುಕೊಂಡಿರುವ ನಿರೀಕ್ಷಿತ ಮಳೆ ಬಾರದಿರುವುದು ಚಿಂತೆಗೀಡು ಮಾಡಿದೆ.

ಜೂ.21 ರಂದು ಬಿದ್ದ ಮಳೆ ಬೇಸಿಗೆ ಭೂಮಿಯನ್ನು ತಂಪಾಗಿಸಿದೆ. ಆದರೆ, ಬಿತ್ತನೆಗೆ ಬೇಕಾಗುವಷ್ಟು ತೇವಾಂಶ ಅದು ಕೊಟ್ಟಿಲ್ಲ. ಪೂರಕ ಮಳೆಯ ಬರುವಿಕೆಗಾಗಿ ತಾಲೂಕಿನ ಒಕ್ಕಲಿಗರು ಕಾಯುತ್ತಿದ್ದು, ಆಕಾಶದತ್ತ ಮುಖಮಾಡಿ ಕುಳಿತಿದ್ದಾರೆ.

ಬಿತ್ತನೆಗೆ ಚಾಲನೆ:

ಖುಷ್ಕಿ ಭೂಮಿ ಹೊಂದಿದ್ದ ಹಾಗೂ ಕೆಲ ರೈತರು ಬಿತ್ತನೆ ಶುರು ಮಾಡಿದ್ದರು. ಇನ್ನೊಂದು ಮಳೆಯ ನಿರೀಕ್ಷೆಯಲ್ಲಿರುವ ಬಹುತೇಕ ರೈತರು,ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಬಿತ್ತನೆ ಶುರು ಮಾಡಿರುವ ರೈತರು, ಮಳೆ ಬಾರದಿರುವ ಲಕ್ಷಣವನ್ನು ಕಂಡು ತಮ್ಮ ಬಿತ್ತನೆ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.

ಮಳೆ ಬೀಳದೇ ಇರುವುದರಿಂದ ಕೆರೆ, ನಾಲೆಗಳು, ಕೃಷಿ ಹೊಂಡಗಳು ಒಣಗಿ ನಿಂತಿವೆ. ಎಲ್ಲೆಡೆ ಒಣ ಹವೆ ಬೀಸುತ್ತಿದ್ದು, ಜೂನ್‌ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದರಿಂದ ಮಳೆ ಕೊರತೆ ಎದುರಾಗಿದೆ. ಮೇವಿನ ಸಮಸ್ಯೆ ತಾಂಡವವಾಡುತ್ತಿದೆ. ನಗರದ ವಿದ್ಯಾಪೀಠದಲ್ಲಿ ಸ್ಥಾಪನೆ ಮಾಡಿರುವ ಮೇವು ಬ್ಯಾಂಕ್‌ನಲ್ಲಿ ರೈತರು ಮೇವು ಒಯ್ಯುವುದು ಇನ್ನೂ ನಿಂತಿಲ್ಲ. ಕಣಕಿ ಹೊತ್ತ ಲಾರಿ-ಟ್ರ್ಯಾಕ್ಟರ್‌ಗಳು ನಗರದಲ್ಲಿ ಇನ್ನೂ ಓಡಾಡುತ್ತಿವೆ. ವರುಣ ಕೃಪೆ ತೋರದಿರುವುದರಿಂದ ಸದ್ಯ ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ.


ಈ ಬಾರಿ ಮುಂಗಾರು ಪೂರ್ವ ಮಳೆ-ಅಕಾಲಿಕ ಮಳೆ ಅಷ್ಟೊಂದು ಹೇಳಿಕೊಳ್ಳುವಂಥದ್ದಿಲ್ಲ. ಈ ನಿಟ್ಟಿನಲ್ಲಿ ಜೂನ್‌ನಲ್ಲಿ ಮುಂಗಾರು ಮಳೆ ಅಬ್ಬರಿಸಬೇಕಾಗಿತ್ತು. ಆದರೆ, ನಿಸರ್ಗದ ಗಣಿತದಿಂದಾಗಿ ಅದು ಹುಸಿಯಾಗಿದೆ.

-ಚಂದ್ರಶೇಖರ್‌ ಜಮಖಂಡಿ, ರೈತ ಸಂಘ ಅಧ್ಯಕ್ಷ, ಬಸವಕಲ್ಯಾಣ

ವಾಡಿಕೆಗಿಂತ ತಾಲೂಕಿನಲ್ಲಿ ಶೇ.30ರಷ್ಟು ಮಳೆ ಕೊರತೆಯಾಗಿದೆ. ಇದುವರೆಗೆ ತಾಲೂಕಿನಲ್ಲಿ ಶೇ.15-20 ರಷ್ಟು ಬಿತ್ತನೆಯಾಗಿದೆ. ಮುಡಬಿ, ರಾಜೇಶ್ವರ, ಮಂಠಾಳ ಈ ಹೋಬಳಿಗಳು ಹೊರತುಪಡಿಸಿ ಬೇರೆಡೆ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ. ಮಳೆ ಬರುವ ಸಂಭವ ಇದೆ.

-ವೀರಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕರು, ಬಸವಕಲ್ಯಾಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ