ಬೀದರ್: ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಹಾಗೂ ಶಾರದಾ ಮಾತೆಯವರ ಸಂದೇಶಗಳನ್ನು ನಾಡಿಗೆ ಬಿತ್ತರಿಸಲು ಸಭಾಭವನ, ಗುಡಿ ಹಾಗೂ ಪತ್ರಿಕೆ ಅಗತ್ಯ ಎಂದು ಕೊಲ್ಕತ್ತಾದ ರಾಮಕೃಷ್ಣ ಮಠ ಮತ್ತು ಮಿಷನ್ ಬೇಲೂರು ಮಠದ ಉಪಾಧ್ಯಕ್ಷ ಶ್ರೀ ಶ್ರೀಮತ್ ಸ್ವಾಮಿ ಗೌತಮಾನಂದಜಿ ಮಹಾರಾಜ ಹೇಳಿದರು.
ಬೀದರ್ನ ರಾಮಕೃಷ್ಣ- ವಿವೇಕಾನಂದ ಆಶ್ರಮದಲ್ಲಿ ಸೋಮವಾರ ನಡೆದ ಶ್ರೀ ರಾಮಕೃಷ್ಣ ವಿಶ್ವ ಭಾವೈಕ್ಯ ಮಂದಿರದ ಅಡಿಗಲ್ಲು ನೆರವೇರಿಸಿ ಹಾಗೂ ವಿವೇಕ ಭವನ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸ್ವಾಮೀಜಿಗಳ ಸಂದೇಶ ಸಾರಲು ಪತ್ರಿಕೆ ಬೇಕು. ಎಲ್ಲರೂ ಒಂದೆಡೆ ಸೇರಲು ಸಭಾ ಭವನ ಹಾಗೂ ಜನರನ್ನು ಹಿಡಿದಿಡಲು ಗುಡಿಗಳು ತುಂಬಾನೇ ಅಗತ್ಯ ಎಂದು ಪ್ರತಿಪಾದಿಸಿದರು.
ಶ್ರೀ ರಾಮಕೃಷ್ಣ ಪರಮಹಂಸರು ಜಾಗೃತ ದೇವತೆ ಎಂದ ಅವರು, ಇಂಥ ಸ್ವಾಮೀಜಿಗಳ ವಿಚಾರಗಳನ್ನು ನಾಡಿನ ಉದ್ದಗಲಕ್ಕೂ ಪಸರಿಸಬೇಕಿದೆ ಎಂದರು. ನಿಮ್ಮ ನಿಮ್ಮ ಧರ್ಮ ಉತ್ತಮತ್ವ ಎಂದು ಹೇಳಿ, ಆದರೆ, ಬೇರೆ ಧರ್ಮದಲ್ಲಿ ಕೈ ಹಾಕಬೇಡಿ ಎಂದರು. ಸ್ವಾಮೀಜಿಗಳ ಸಂದೇಶಗಳನ್ನು ಪ್ರಚಾರ ಮಾಡಿ, ಕೃಪಾಶೀರ್ವಾದ ಪಡೆದುಕೊಂಡು ಎಲ್ಲರೂ ಸುಖದಿಂದ, ನೆಮ್ಮದಿಯಿಂದ ಬದುಕಿ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಜಿಲ್ಲೆಯು ಭಾವೈಕ್ಯದ ಕೇಂದ್ರ ಬಿಂದುವಾಗಿದೆ. ಶರಣರು, ಸಂತರು, ಗುರುನಾನಕರು ಹೀಗೆ ಎಲ್ಲರೂ ಬಂದು ಹೋದ ಪವಿತ್ರ ಭೂಮಿಯಿದು. ಸರ್ವ ಧರ್ಮದ ಸಮನ್ವಯತೆಯ ಕೇಂದ್ರಬಿಂದುವಿದು ಎಂದು ಬಣ್ಣಿಸಿದರು. ನೆಮ್ಮದಿಗಾಗಿ ಎಲ್ಲರೂ ಅಧ್ಯಾತ್ಮದ ಕಡೆಗೆ ಸಾಗಬೇಕಿದೆ ಎಂದ ಸಚಿವರು, ಮಾನವೀಯ, ನೈತಿಕ ಮೌಲ್ಯದೊಂದಿಗೆ ಎಲ್ಲರಿಗೂ ಪ್ರೀತಿ ಹಂಚಬೇಕಿದೆ. ಯಾವುದೇ ಕೆಲಸದಲ್ಲಿ ಶ್ರದ್ಧೆ ಇದ್ದರೆ, ಎಲ್ಲವೂ ಇರುತ್ತದೆ. ಇಲ್ಲವಾದರೆ ಏನೂ ಇರದು ಎಂದರು. ಸ್ವಾಮಿ ವಿವೇಕಾನಂದರು ದೇಶದ ಯುವಕರಿಗೆ ಆದರ್ಶ ಹಾಗೂ ಪ್ರೇರಣೆಯಾಗಿದ್ದಾರೆ ಎಂದು ಸಚಿವರು ಹೇಳಿದರು.
ದಾರಿ ತಪ್ಪುತ್ತಿರುವ ಯುವಕರನ್ನು ಸರಿ ದಾರಿಗೆ ತರುವ ಕೆಲಸವನ್ನು ರಾಮಕೃಷ್ಣ- ವಿವೇಕಾನಂದರ ಆಶ್ರಮಗಳು ಮಾಡುತ್ತಿವೆ ಎಂದ ಅವರು, ಆಧುನಿಕತೆ ಹೆಚ್ಚಾದಂತೆ ಮನುಷ್ಯ ಆಲಸಿಯಾಗುತ್ತಿದ್ದಾನೆ. ಮನಸ್ಸು ಯಂತ್ರವಾಗುತ್ತಿದೆ. ಇದಕ್ಕೆ ಆಧ್ಯಾತ್ಮವೇ ಮದ್ದು ಎಂದರು. ಸ್ವಾಮೀಜಿಗಳು ಯಾವುದೇ ಆದೇಶ ನೀಡಿದರೂ ತಾವು ಪಾಲನೆ ಮಾಡುವುದಾಗಿ ಹಾಗೂ ಸೇವೆ ಮಾಡುವುದಾಗಿ ಸಚಿವ ಖಂಡ್ರೆ ಭರವಸೆ ನೀಡಿದರು.
ವಿವೇಕರು ಕೇವಲ ಹಿಂದೂ, ಭಾರತಕ್ಕಾಗಿ ಅಲ್ಲ
ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ಶಾರದಾ ಮಾತೆ ಸೇರಿ ಅನೇಕ ಸ್ವಾಮೀಜಿಗಳು ಕೇವಲ ಹಿಂದೂ, ಭಾರತಕ್ಕಾಗಿ ಬಂದವರಲ್ಲ. ಅವರು ಬಹುಜನ ಹಿತಾಯ, ಬಹುಜನ ಸುಖಾಯಕ್ಕಾಗಿ ಬಂದವರು. ಕೆಳಗೆ ಬಿದ್ದ ಎಲ್ಲರನ್ನೂ ಮೇಲೆತ್ತಲು ವಿವೇಕರು ದುಡಿದರು ಎಂದು ಗದಗ- ವಿಜಯಪುರ ರಾಮಕೃಷ್ಣ- ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದಜೀ ಮಹಾರಾಜ್ ನುಡಿದರು. ರಾಜ್ಯದ ವಿದ್ಯಾರ್ಥಿ ವಲಯವು ಸ್ವಾಮಿ ವಿವೇಕಾನಂದರ ಸಂದೇಶ ಅರಿಯುವಂತಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಏನಾದರೂ ಪ್ರಯತ್ನ ಮಾಡಬೇಕು ಎಂದು ಸಚಿವ ಖಂಡ್ರೆಗೆ ಸ್ವಾಮೀಜಿ ಕೋರಿದರು.
ಯಮರಾಜನೇ ನಿಜವಾದ ಸಮಾಜವಾದಿ
ಜೀವವನ್ನು ಕೊಂಡೊಯ್ಯುವ ವಿಷಯದಲ್ಲಿ ಯಾರಿಗೂ ತಾರತಮ್ಯ ಮಾಡದ ಯಮರಾಜನೇ ನಿಜವಾದ ಸಮಾಜವಾದಿ ಎಂದು ಬೀದರ್ನ ಸಿದ್ಧಾರೂಢ ಆಶ್ರಮದ ಶ್ರೀ ಶಿವಕುಮಾರ ಸ್ವಾಮೀಜಿ ನಗೆ ಚಟಾಕಿ ಹಾರಿಸಿದರು. ಪರಮಾತ್ಮ ನಮ್ಮೊಳಗೇ ಇದ್ದಾನೆ, ಅದನ್ನು ಬಿಟ್ಟು ನಾವು ಹೊರಗೆ ಹುಡುಕಾಟ ನಡೆಸುತ್ತಿದ್ದೇವೆ, ಇದು ಮೂರ್ಖತನವಲ್ಲದೇ ಮತ್ತೇನು ಅಲ್ಲ ಎಂದರು. ಅಜ್ಞಾನ, ಅಹಂಕಾರಗಳು ಮನಸ್ಸೆಂಬ ಕನ್ನಡಿಯ ಮೇಲೆ ಕುಳಿತಿರುವುದರಿಂದ ಆತ್ಮದ ಸಾಕ್ಷಾತ್ಕಾರ ಆಗುತ್ತಿಲ್ಲ. ಸಾಕ್ಷಾತ್ಕಾರವಾಗದೇ ಮೋಕ್ಷ ಸಾಧ್ಯವಿಲ್ಲ. ನಾನು, ನನ್ನದು ಎಂಬ ಬಂಧನದಿಂದ ಬಿಡುಗಡೆಯಾದರೆ ಜ್ಞಾನ, ಸಾಕ್ಷಾತ್ಕಾರವಾಗುತ್ತದೆ. ಮೋಕ್ಷವೂ ಸಿಗುತ್ತದೆ ಎಂದರು.
ಅಡಿಗಲ್ಲು, ಉದ್ಘಾಟನೆ, ಧ್ಯಾನ, ಕೀರ್ತನೆ
ಬೀದರ್ನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ರಾಮಕೃಷ್ಣ ವಿಶ್ವ ಭಾವೈಕ್ಯ ಮಂದಿರಕ್ಕೆ ಸೋಮವಾರ ಕೊಲ್ಕತ್ತಾದ ಸ್ವಾಮಿ ಗೌತಮಾನಂದಜಿ ಮಹಾರಾಜ್ ಅಡಿಗಲ್ಲು ನೆರವೇರಿಸಿದರು. ನಿರ್ಮಾಣಗೊಂಡಿರುವ ವಿವೇಕ ಭವನವನ್ನು ಲೋಕಾರ್ಪಣೆಗೊಳಿಸಿದರು. ಬೆಳಗ್ಗೆ ಆಶ್ರಮದ ಪರಿಸರದಲ್ಲಿ ಧ್ಯಾನ ಸುಖ ಸಾಗರ, ಉಷಾ ಕೀರ್ತನೆ, ಸಂಕೀರ್ತನೆ ಭಕ್ತಿ ಭಾವದಿಂದ ಜರುಗಿದವು. ಶಾಸಕ ರಹಿಂಖಾನ್, ತಮಿಳುನಾಡು ಊಟಿಯ ಸ್ವಾಮಿ ರಾಘವೇಶಾನಂದಜಿ ಮಹಾರಾಜ್, ಮೈಸೂರಿನ ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್, ಹುಬ್ಬಳ್ಳಿಯ ಸ್ವಾಮಿ ರಘುವೀರಾನಂದಜಿ ಮಹಾರಾಜ್, ಬೆಳಗಾವಿಯ ಸ್ವಾಮಿ ಸತ್ವಸ್ಥಾನಂದಜಿ ಮಹಾರಾಜ್, ಮಂಗಳೂರಿನ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ಗೋವಾದ ಸ್ವಾಮಿ ಹೃದಾನಂದಜೀ ಮಹಾರಾಜ್, ರಾಣೆಬೆನ್ನೂರಿನ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಹಾಗೂ ಹಲವಾರು ಸ್ವಾಮೀಜಿಗಳು ಇದ್ದರು. ಸ್ವಾಮಿ ಜ್ಯೋತಿರ್ಮಯಾನಂದಜಿ ಮಹಾರಾಜ್ ಸ್ವಾಗತಿಸಿದರು. ಬಂದ ಭಕ್ತರಿಗಾಗಿ ಎಳ್ಳಮವಾಸ್ಯೆ ನಿಮಿತ್ತ ಭಜ್ಜಿ, ರೊಟ್ಟಿ, ಹುಗ್ಗಿ, ಅಂಬಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.