ಸಮೀಕ್ಷೆ ಬಳಿಕೆ ಟಿಕೆಟ್ ಹಂಚಿಕೆ: ಬಿಎಸ್ವೈ
ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಒಂದು ಸಮೀಕ್ಷೆಯಾಗಿದ್ದು, ಇನ್ನೆರಡು ಸಮೀಕ್ಷೆಯಾದ ಬಳಿಕ ಜನ ಅಪೇಕ್ಷೆ ಪಟ್ಟಂಥ ವ್ಯಕ್ತಿಗೆ ಟಿಕೆಟ್ ನೀಡಲಾಗುತ್ತದೆ ಎಂದೂ ಯಡಿಯೂರಪ್ಪ ನುಡಿದರು.
ಬೀದರ್: ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಒಂದು ಸಮೀಕ್ಷೆಯಾಗಿದ್ದು, ಇನ್ನೆರಡು ಸಮೀಕ್ಷೆಯಾದ ಬಳಿಕ ಜನ ಅಪೇಕ್ಷೆ ಪಟ್ಟಂಥ ವ್ಯಕ್ತಿಗೆ ಟಿಕೆಟ್ ನೀಡಲಾಗುತ್ತದೆ ಎಂದೂ ಯಡಿಯೂರಪ್ಪ ನುಡಿದರು.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ನ. 15 ರಿಂದ ಜ.15ರ ವರೆಗೆ ಪರಿವರ್ತನಾ ರಾರಯಲಿ ಹೆಸರಿನಡಿ ರಥಯಾತ್ರೆ ನಡೆಸಲಾಗುವುದು. ಪ್ರತಿ ಕ್ಷೇತ್ರದ ಸಮಾವೇಶದಲ್ಲಿ 10ಕ್ಕೂ ಅಧಿಕ ಸಾವಿರ ಜನರನ್ನು ಸೇರಿಸಲಾಗುತ್ತದೆ. ಈ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಮನೆಗೆ ಕಳುಹಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ಗಣೇಶ ಮೈದಾನದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರ ಸಮಾವೇಶ ಹಾಗೂ ಯುವ ನಾಯಕ ಸೂರ್ಯಕಾಂತ ನಾಗಮಾರಪಳ್ಳಿ ಬಿಜೆಪಿಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ಐದಾರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವುದು ನಿಶ್ಚಯ. ಜನಬಲ, ದೈವಬಲ, ಭಗವಂತನ ಇಚ್ಛೆಯಂತೆ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತು ಹಾಕಲಾಗುವುದು ಎಂದರು.
''ನಿತ್ಯವೂ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಲೂಟಿ, ದರೋಡೆಯಲ್ಲಿ ತೊಡಗಿದ್ದಾರೆ. ಈ ಮೂಲಕ ಜನರನ್ನು ಅಡ್ಡ ದಾರಿಗೆ ತಳ್ಳುತ್ತಿದ್ದಾರೆ. ಸಮಾಜದಲ್ಲಿ ಜಾತಿಯ ವಿಷ ಬೀಜ ಬಿತ್ತುವ ಮೂಲಕ ಒಡೆದಾಳುತ್ತಿರುವ ಸಿಎಂಗೆ ಧಿಕ್ಕಾರ '' ಹಾಕಿದ ಬಿಎಸ್ವೈ, ಉತ್ತರಪ್ರದೇಶ, ಮಹಾರಾಷ್ಟ್ರದ ರಾಜ್ಯ ಸರಕಾರಗಳು ರಾಷ್ಟ್ರೀಕೃತ ಬ್ಯಾಂಕ್ಗಳ ರೈತರ ಸಾಲ ಮನ್ನಾ ಮಾಡಿವೆ. ಇಲ್ಲಿ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
''ನಾನು ಈಗಾಗಲೇ ಸಿಎಂ ಆದವನು. ನನಗೇನು ಸಿಎಂ ಆಗಲೇಬೇಕು ಎಂದೇನಿಲ್ಲ. ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯವನ್ನಾಗಿಸಬೇಕು. ನಿರುದ್ಯೋಗಿಗಳ ಕೈಗೆ ಕೆಲಸ ನೀಡಬೇಕು. ಜನರು ಸ್ವಾಭಿಮಾನದಿಂದ ಬದುಕಬೇಕು ಎಂಬ ಆಸೆ ಇದೆ. ಮುಂದೆ ನಮ್ಮದೇ ಸರಕಾರ ಬರಲಿದ್ದು, ಜನರ ಕನಸು, ನನಸು ಮಾಡುವೆ. ಪ್ರಣಾಳಿಕೆಯಲ್ಲಿ ರೈತರು, ನಿರುದ್ಯೋಗಿಗಳು, ಪ್ರವಾಸೋದ್ಯಮ ಅಭಿವೃದ್ಧಿ, ದಲಿತರ, ಓಬಿಸಿಗಳ, ಅಲ್ಪ ಸಂಖ್ಯಾತರ ಏಳಿಗೆಯ ಯೋಜನೆಗಳ ಕುರಿತು ಯೋಜಿಸಲಾಗುತ್ತಿದೆ''ಎಂದರು.
ಸಿಎಂ ಆದ 24 ಗಂಟೆಯಲ್ಲೇ 2ಎಗೆ ಸೇರ್ಪಡೆ
ಮುಂದೆ ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ಮರಾಠಾ ಸಮಾಜವನ್ನು 2ಎಗೆ ಸೇರಿಸುವೆ ಎಂದು ಭರವಸೆ ನೀಡಿದ ಬಿಎಸ್ವೈ, ಇನ್ನೊಂದು ವಾರದಲ್ಲಿ ಸಿಎಂ ಸಿದ್ಧರಾಮಯ್ಯ, ಸಚಿವ ಸಂಪುಟದ ಎಲ್ಲ ಸಚಿವರುಗಳು ಸರಕಾರದ ಖಜಾನೆಯ ಹಣ ಲೂಟಿ ಮಾಡಿರುತ್ತಿರುವ ಕುರಿತು ರಾಜ್ಯದ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುವುದಾಗಿ ಹೇಳಿದರು.
ಸೂರ್ಯಕಾಂತಗಿದೆ ಒಳ್ಳೆಯ ಭವಿಷ್ಯ; ಬಿಎಸ್ವೈ
ಸೂರ್ಯಕಾಂತ ನಾಗಮಾರಪಳ್ಳಿ ಬಿಜೆಪಿ ಪಕ್ಷದಲ್ಲೇ ಇದ್ದರು. ಇಂದು ನಮ್ಮೊಂದಿಗೆ ಇದ್ದಾರೆ ಎಂದ ಬಿಎಸ್ವೈ, ಈ ಮೂಲಕ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದಾರೆ ಎಂದರು.
''ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಆತ್ಮೀಯರಾಗಿದ್ದರು. ರಾಜ್ಯದಲ್ಲಿ ಗಂಡೆದೆಯ ರಾಜಕಾರಣ ಮಾಡಿದವರು. ವಿವಿಧ ಕ್ಷೇತ್ರಗಳಲ್ಲಿನ ಕೆಲಸ, ಕಾರ್ಯ, ಸೇವೆಯಿಂದಾಗಿ ಜನಪ್ರಿಯರಾಗಿದ್ದರು. ಅವರನ್ನು ನಾವು ಇಂದು ಕಳೆದುಕೊಂಡಿದ್ದೇವೆ. ಗುರುಪಾದಪ್ಪನವರ ಹಿರಿಯ ಪುತ್ರ ಉಮಾಕಾಂತರನ್ನು ನಾನೂ ಸ್ವಾಗತಿಸುತ್ತೇನೆ. ಗುರುಪಾದಪ್ಪನವರು ಇಲ್ಲದಿದ್ದರೂ, ಇಂದು ನಾನು ನಿಮ್ಮೊಂದಿಗೆ ಇದ್ದೇನೆ. ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಮುಂದೆ ಉತ್ತಮ ಭವಿಷ್ಯವಿದೆ''ಎಂದು ಬಿಎಸ್ವೈ ನುಡಿದರು.
ಕೋಟ್
ಎಂಕ, ನಾಣಿ, ಸೀನ ಎಂಬಂತೆ ಲೋಕಭೆಯಲ್ಲಿ ಕೇವಲ 44 ಸಂಸದರಿದ್ದೀರಿ. ನಿಮ್ಮ ಯೋಗ್ಯತೆಗೆ ಪ್ರತಿಪಕ್ಷದ ನಾಯಕ ಸ್ಥಾನವೂ ಸಿಕ್ಕಿಲ್ಲ. ಆದರೆ, ಅಮೆರಿಕಾದಲ್ಲಿ ಕುಳಿತು ಭಾರತದ ಮುಂದಿನ ಪ್ರಧಾನಿ ನಾನೇ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಇದಕ್ಕಿಂತ ನಾಚಿಕೆಗೇಡು ಬೇಕಾ ದೇಶದಲ್ಲಿ?
- ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ