ಆ್ಯಪ್ನಗರ

ಸಿಟಿ ಬಸ್‌ ನಿಲ್ದಾಣದಲ್ಲಿಲ್ಲ ನೇಮ್‌ ಪ್ಲೇಟ್‌

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ನೂತನ ನಗರ ಸಾರಿಗೆ ಬಸ್‌ ನಿಲ್ದಾಣ (ಸಿಟಿ ಬಸ್‌ ಸ್ಟ್ಯಾಂಡ್‌) ಉದ್ಘಾಟನೆಯಾಗಿ ನಾಲ್ಕು ತಿಂಗಳಾದರೂ ನಿಲ್ದಾಣದಲ್ಲಿ ನಾಮ ಫಲಕಗಳನ್ನು (ರೂಟ್‌ ನೇಮ್‌ ಪ್ಲೇಟ್‌) ಹಾಕಿಲ್ಲ. ಹೀಗಾಗಿ, ಯಾವ ರೂಟ್‌ನ ಬಸ್ಸು ಎಲ್ಲಿ ನಿಲ್ಲುತ್ತದೆ ಎಂಬುದು ಗೊತ್ತಾಗದೆ ಪ್ರಯಾಣಿಕರು ಪರದಾಡುವಂತಾಗಿದೆ.

Vijaya Karnataka 16 Jun 2019, 9:23 pm
ಭೀಮರಾವ್‌ ಬುರಾನಪುರ ಬೀದರ್‌:ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ನೂತನ ನಗರ ಸಾರಿಗೆ ಬಸ್‌ ನಿಲ್ದಾಣ (ಸಿಟಿ ಬಸ್‌ ಸ್ಟ್ಯಾಂಡ್‌) ಉದ್ಘಾಟನೆಯಾಗಿ ನಾಲ್ಕು ತಿಂಗಳಾದರೂ ನಿಲ್ದಾಣದಲ್ಲಿ ನಾಮ ಫಲಕಗಳನ್ನು (ರೂಟ್‌ ನೇಮ್‌ ಪ್ಲೇಟ್‌) ಹಾಕಿಲ್ಲ. ಹೀಗಾಗಿ, ಯಾವ ರೂಟ್‌ನ ಬಸ್ಸು ಎಲ್ಲಿ ನಿಲ್ಲುತ್ತದೆ ಎಂಬುದು ಗೊತ್ತಾಗದೆ ಪ್ರಯಾಣಿಕರು ಪರದಾಡುವಂತಾಗಿದೆ.
Vijaya Karnataka Web the name plate is not at the bus stop
ಸಿಟಿ ಬಸ್‌ ನಿಲ್ದಾಣದಲ್ಲಿಲ್ಲ ನೇಮ್‌ ಪ್ಲೇಟ್‌


5.12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೊಸ ಸಿಟಿ ಬಸ್‌ ನಿಲ್ದಾಣದಲ್ಲಿ ನಿತ್ಯ ಬಸ್ಸು ಎಲ್ಲಿ ನಿಲ್ಲುತ್ತದೆ ಎಂದು ಪ್ರಯಾಣಿಕರು ಸಾರಿಗೆ ಸಿಬ್ಬಂದಿಗೆ ಪದೆ ಪದೇ ಕೇಳುವುದು, ಅಲೆದಾಡುವುದು ತಪ್ಪುತ್ತಿಲ್ಲ.

ಭಾಲ್ಕಿ, ಮನ್ನಾಎಖ್ಖೆಳ್ಳಿ, ಚಿಂಚೋಳಿ, ಬಸವಕಲ್ಯಾಣ, ಹುಮನಾಬಾದ್‌, ಇಡೀ ಬೀದರ್‌ ನಗರ ಹಾಗೂ ಬೀದರ್‌ ತಾಲೂಕಿನ ಹಲವು ಗ್ರಾಮಗಳಿಗೆ ಈ ಸಿಟಿ ಬಸ್‌ ಸ್ಟ್ಯಾಂಡ್‌ನಿಂದಲೇ ಬಸ್ಸುಗಳು ರವಾನೆಯಾಗುತ್ತವೆ. ನಿತ್ಯವೂ ಅಂದಾಜು 260 ಬಸ್ಸುಗಳು ಇಲ್ಲಿಂದ ಹೋಗಿ- ಬರುತ್ತವೆ. ಆದರೆ, ಯಾವ ಊರಿನ ಬಸ್ಸು ಎಲ್ಲಿ ನಿಲ್ಲುತ್ತದೆ ಎನ್ನುವುದೇ ಪ್ರಯಾಣಿಕರಿಗೆ ತಿಳಿಯದಂತಾಗಿದೆ. ಹೀಗಾಗಿ, ನಿಲ್ದಾಣಕ್ಕೆ ಯಾವುದಾದರೊಂದು ಬಸ್ಸು ಬಂದರೆ ಎಲ್ಲ ಪ್ರಯಾಣಿಕರು ಬಸ್ಸಿನತ್ತಲೇ ಓಡುತ್ತಿದ್ದಾರೆ.

ಕೇವಲ 2.13 ಎಕರೆನಲ್ಲಿ ಈ ಬಸ್‌ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಇದರಲ್ಲೇ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಕಟ್ಟಡವು ಒಳಗೊಂಡಿದೆ. ಇಕ್ಕಟ್ಟಾದ ಜಾಗದಲ್ಲಿ ಬಸ್ಸು ಬಂದು ನಿಲ್ಲುವುದರಿಂದ ಪ್ರಯಾಣಿಕರು ಪದೆ ಪದೇ ಬಸ್ಸಿನ ಬಳಿ ಹೋಗಿ ಎಲ್ಲಿಗೆ ಹೋಗುತ್ತದೆ ಎಂದು ಕೇಳುವಂತಾಗಿದೆ. ಯಾವ ಊರಿನ ಬಸ್ಸು ಎಲ್ಲಿ ನಿಲ್ಲುತ್ತದೆ ಎಂಬ ನಾಮ ಫಲಕ ಹಾಕಿದ್ದರೆ, ಆಯಾ ಊರಿನ ಪ್ರಯಾಣಿಕರು ಅದೇ ಸ್ಥಳದಲ್ಲಿ ನಿಂತು ಬಸ್ಸಿಗಾಗಿ ಕಾಯುತ್ತಾರೆ. ಆದರೆ, ಇದೀಗ ಇಡೀ ನಿಲ್ದಾಣದಲ್ಲಿ ನಿಂತು ಬಸ್ಸಿಗಾಗಿ ಅತ್ತ ಇತ್ತ ನೋಡುವಂತಾಗಿದೆ.

ತಾಲೂಕಿನ ವಿವಿಧ ಗ್ರಾಮಗಳಿಗೆ ಹಾಗೂ ಮನ್ನಾಎಖ್ಖೆಳ್ಳಿ, ಚಿಂಚೋಳಿ ಕಡೆಗೆ ಹೋಗುವ ಪ್ರಯಾಣಿಕರೇ ಈ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಲ್ಲುತ್ತಾರೆ. ಜತೆಗೆ ನಗರದ ವಿವಿಧ ಏರಿಯಾಗಳಿಗೆ ಹೋಗುವವರೂ ಇಲ್ಲಿ ಬರುತ್ತಾರೆ. ಯಾವ ಬಸ್ಸು ಎಲ್ಲಿ ನಿಲ್ಲುತ್ತದೆ ಎನ್ನುವುದು ಗೊತ್ತಾಗದದೇ ಕೇಳುತ್ತಲೇ ಇರುತ್ತಾರೆ. ಇದು ಒಂದೆಡೆ ಸಿಬ್ಬಂದಿಗೆ ಇರುಸು ಮುರುಸು ಉಂಟು ಮಾಡಿದರೆ, ಪ್ರಯಾಣಿಕರಿಗೆ ಕಿರಿ ಕಿರಿಯಾಗುತ್ತಿದೆ.

ನಿಲ್ದಾಣದ ಎದುರೇ ಖಾಸಗಿ ಜೀಪ್‌

ಸಿಟಿ ಬಸ್‌ ನಿಲ್ದಾಣದ ಎದುರೇ, ಮುಖ್ಯದ್ವಾರದಲ್ಲಿ ವಿವಿಧ ತಾಲೂಕು ಕೇಂದ್ರಗಳಿಗೆ ಹಾಗೂ ಗ್ರಾಮಗಳಿಗೆ ಪ್ರಯಾಣಿಕರನ್ನು ಕರೆದೊಯ್ಯಲು ಖಾಸಗಿ ಜೀಪ್‌ಗಳು ನಿಲ್ಲುತ್ತಿವೆ. ಇದು ನಗರದ ಜನರ ಸಂಚಾರಕ್ಕೆ ತೊಡಕಾಗಿ ಪರಿಣಮಿಸುತ್ತಿದೆ. ಬಸ್‌ ನಿಲ್ದಾಣದ ಎದುರಿನಿಂದ ಅಂಬೇಡ್ಕರ್‌ ವೃತ್ತದತ್ತ ತೆರಳಲು ಜನತೆ ಒಂದಷ್ಟು ಸರ್ಕಸ್‌ ಮಾಡಬೇಕಾಗಿದೆ. ಆಟೋಗಳು, ಖಾಸಗಿ ಜೀಪ್‌ಗಳು ಮನಸೋ ಇಚ್ಛೆ ನಿಲ್ಲುತ್ತಿರುವುದರಿಂದ ಬೈಕ್‌ ಸವಾರರಿಗೂ ತಲೆ ನೋವಾಗಿ ಪರಿಣಮಿಸಿದೆ. ಬಸ್‌ ನಿಲ್ದಾಣದ ಮುಂದೆಯೇ ಖಾಸಗಿ ವಾಹನಗಳು ನಿಲ್ಲುತ್ತಿದ್ದರೂ ಸಂಬಂಧಪಟ್ಟವರು ಮಾತ್ರ ತಮಗೂ, ಇದಕ್ಕೂ ಸಂಬಂಧವೇ ಇಲ್ಲದಂತಿರುವುದು ಮಾತ್ರ ಖೇದಕರ ಸಂಗತಿಯಾಗಿದೆ.

ಈ ನಿಲ್ದಾಣದಲ್ಲಿ ಭಾಲ್ಕಿ, ಹುಮನಾಬಾದ್‌, ಮನ್ನಾಎಖ್ಖೆಳ್ಳಿ ಹೀಗೆ ವಿವಿಧೆಡೆ ಹೋಗಲು ಬಸ್ಸುಗಳು ಎಲ್ಲಿ ನಿಲ್ಲುತ್ತವೋ ಗೊತ್ತಾಗದು. ನಾಮ ಫಲಕ ಇಲ್ಲದ ಕಾರಣ ಅಕ್ಷರಸ್ಥರು ಸಹ ಪದೆ ಪದೇ ಚಾಲಕರಿಗೆ, ನಿರ್ವಾಹಕರಿಗೆ ಹಾಗೂ ಸಾರಿಗೆ ಸಿಬ್ಬಂದಿಗೆ ಈ ಬಸ್ಸು ಎಲ್ಲಿಗೆ ಹೋಗುತ್ತದೆ, ಎಲ್ಲಿ ನಿಲ್ಲುತ್ತದೆ ? ಎಂದು ಕೇಳುವಂತಾಗಿದೆ. ನಾಮ ಫಲಕ ಹಾಕಿದ್ದರೆ ಪ್ರಯಾಣಿಕರಿಗೆ ಯಾವ ಬಸ್ಸು ಎಲ್ಲಿ ನಿಲ್ಲುತ್ತದೆ ಎಂಬುದು ಸಲೀಸಾಗಿ ಗೊತ್ತಾಗುತ್ತದೆ.

- ರವಿ ನೆಲವಾಡೆ, ಬಾಪೂರ ಗ್ರಾಮದ ಪ್ರಯಾಣಿಕ

ಬೀದರ್‌ ನಗರದ ಸಿಟಿ ಬಸ್‌ ನಿಲ್ದಾಣದಲ್ಲಿ ಇನ್ನೂ ಸಿವಿಲ್‌ ಕೆಲಸ ಬಾಕಿ ಉಳಿದಿದೆ. ಈ ಕೆಲಸ ಈಗಾಗಲೇ ನಡೆಯುತ್ತಿದ್ದು, ಮುಗಿದ ಕೂಡಲೇ ನಾಮ ಫಲಕಗಳನ್ನು ಅಳವಡಿಸಲಾಗುತ್ತದೆ. ನಾಮ ಫಲಕ ಅಳವಡಿಸಲು ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿದೆ.

- ಚಂದ್ರಕಾಂತ ಫುಲೇಕರ್‌, ಸಂಚಾರಿ ವಿಭಾಗೀಯ ಅಧಿಕಾರಿ, ಬೀದರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ