ಆ್ಯಪ್ನಗರ

ಹಾಸ್ಟೆಲ್‌:ಮಲಗಲು ಜಾಗ ಇಲ್ಲ, ಬಯಲಲ್ಲೇ ಎಲ್ಲ

ಇಕ್ಕಟ್ಟಾದ ಒಂದೇ ಕೋಣೆಯಲ್ಲಿ 12 ವಿದ್ಯಾರ್ಥಿಗಳ ನಿದ್ರೆ. 100 ವಿದ್ಯಾರ್ಥಿಗಳ ಊಟಕ್ಕೆ ಮೂರೇ ಟೇಬಲ್‌. ಬರೀ ನಾಲ್ಕೇ ಶೌಚಾಲಯಗಳು. ಊಟಕ್ಕೆ ಜಾಗದ ಕೊರತೆಯಿಂದಾಗಿ ಎಲ್ಲೆಂದರಲ್ಲೇ ಊಟ ಮಾಡಿ ತಾಟು ಬೀಸಾಡುವ ವಿದ್ಯಾರ್ಥಿಗಳು. ಬಯಲಲ್ಲೇ ಸ್ನಾನ. ಕಂಪ್ಯೂಟರ್‌ ಇಲ್ಲ. ಗ್ರಂಥಾಲಯವಿಲ್ಲ. ಕಾಟ್‌ ಇದೆ, ಬೆಡ್‌ ಇಲ್ಲ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ಗುಣಮಟ್ಟದ ಊಟವೂ ಇಲ್ಲ. ಹಾಲು, ಮೊಟ್ಟೆ ನಿಯಮಿತವಾಗಿ ನೀಡುತ್ತಿಲ್ಲ. ಬೀದರ್‌ ದೇವರಾಜ ಅರಸು ಬಾಲಕರ ವಸತಿ ನಿಲಯದಲ್ಲಿನ ಸಮಸ್ಯೆಗಳ ಪಟ್ಟಿಯಿದು.

Vijaya Karnataka 3 Dec 2018, 5:00 am
ಭೀಮರಾವ್‌ ಬುರಾನಪುರ ಬೀದರ್‌ :ಇಕ್ಕಟ್ಟಾದ ಒಂದೇ ಕೋಣೆಯಲ್ಲಿ 12 ವಿದ್ಯಾರ್ಥಿಗಳ ನಿದ್ರೆ. 100 ವಿದ್ಯಾರ್ಥಿಗಳ ಊಟಕ್ಕೆ ಮೂರೇ ಟೇಬಲ್‌. ಬರೀ ನಾಲ್ಕೇ ಶೌಚಾಲಯಗಳು. ಊಟಕ್ಕೆ ಜಾಗದ ಕೊರತೆಯಿಂದಾಗಿ ಎಲ್ಲೆಂದರಲ್ಲೇ ಊಟ ಮಾಡಿ ತಾಟು ಬೀಸಾಡುವ ವಿದ್ಯಾರ್ಥಿಗಳು. ಬಯಲಲ್ಲೇ ಸ್ನಾನ. ಕಂಪ್ಯೂಟರ್‌ ಇಲ್ಲ. ಗ್ರಂಥಾಲಯವಿಲ್ಲ. ಕಾಟ್‌ ಇದೆ, ಬೆಡ್‌ ಇಲ್ಲ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ಗುಣಮಟ್ಟದ ಊಟವೂ ಇಲ್ಲ. ಹಾಲು, ಮೊಟ್ಟೆ ನಿಯಮಿತವಾಗಿ ನೀಡುತ್ತಿಲ್ಲ...
Vijaya Karnataka Web BDR-2-12-BDR2


ಬೀದರ್‌ ನಗರದ ಸಾಯಿ ಕಾಲೊನಿಯ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಶ್ರೀ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದಲ್ಲಿನ ಸಮಸ್ಯೆಗಳ ಪಟ್ಟಿಯಿದು. ಪಿಯುಸಿ, ಪದವಿ, ಎಂಜಿನಿಯರಿಂಗ್‌, ಐಟಿಐ, ಡಿಪ್ಲೊಮಾ, ಬಿಇಡಿ, ಡಿಇಡಿ, ಬಿಎಸ್ಸಿ, ಬಿಕಾಂ, ಬಿಎ ಹೀಗೆ ವಿವಿಧ ಕೋರ್ಸ್‌ಗಳ 100 ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿದ್ದು, ಸರಕಾರ ನೀಡುವ ಸವಲತ್ತುಗಳು ಸಕಾಲಕ್ಕೆ ಸಿಗದೆ ಪರದಾಡುವಂತಾಗಿದೆ.

ಖಾಸಗಿ ಕಟ್ಟಡ ಇರುವುದರಿಂದ ಕೋಣೆಗಳು ಚಿಕ್ಕದಾಗಿವೆ. ಕೋಣೆ ನಂ. 9 ತೀರಾ ಚಿಕ್ಕದಾಗಿದ್ದರೂ ಮೂರು ಕಾಟ್‌ಗಳಿವೆ. ಜತೆಗೆ ನೆಲದ ಮೇಲೆ ಸೇರಿ ಒಟ್ಟು ಈ ರೂಮ್‌ನಲ್ಲಿ 12 ವಿದ್ಯಾರ್ಥಿಗಳು ನಿತ್ಯವೂ ಮಲಗುತ್ತಾರೆ. 20 ರಿಂದ 30 ವಿದ್ಯಾರ್ಥಿಗಳು ಒಂದೇ ಬಾರಿ ಊಟ ಮಾಡುವ ಸಾಮರ್ಥ್ಯ‌ವುಳ್ಳ ಟೇಬಲ್‌ ಇದ್ದು, 100 ವಿದ್ಯಾರ್ಥಿಗಳಿಗೆ ಏಕ ಕಾಲಕ್ಕೆ ಊಟ ಮಾಡಲು ಸಮಸ್ಯೆಯಾಗುತ್ತಿದೆ. ಹೀಗಾಗಿ, ಕೋಣೆಯಲ್ಲಿ ಅಥವಾ ಬೇರೆಲ್ಲೋ ಊಟ ಮಾಡಿ ಎಲ್ಲೆಂದರಲ್ಲೇ ಊಟದ ತಾಟುಗಳನ್ನು ಬೀಸಾಡಲಾಗುತ್ತಿದೆ.

ಬಯಲಲ್ಲೇ ವಿದ್ಯಾರ್ಥಿಗಳು ಸ್ನಾನ ಮಾಡುವಂತಹ ಪರಿಸ್ಥಿತಿಯಿದೆ. ಕಾಟ್‌ ನೀಡಲಾಗಿದ್ದರೂ ಬೆಡ್‌ ನೀಡಿಲ್ಲ. ಉನ್ನತ ವ್ಯಾಸಂಗ ಮಾಡುವ ಇಲ್ಲಿನ ವಿದ್ಯಾರ್ಥಿಗಳಿಗೆ ಗ್ರಂಥಾಲಯವೇ ಇಲ್ಲ. ಕಂಪ್ಯೂಟರ್‌ ಸಹ ಇಲ್ಲ. ಗುಣಮಟ್ಟದ ಊಟವನ್ನೂ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳೇ ಆರೋಪಿಸಿದ್ದಾರೆ. ಹಾಲು, ಮೊಟ್ಟೆಯನ್ನು ಸಕಾಲಕ್ಕೆ ನೀಡದೇ ಮನಸ್ಸಿಗೆ ಬಂದಂತೆ ನೀಡಲಾಗುತ್ತಿದೆ. ತಿಂಗಳಿಗೆರಡು ಬಾರಿ ನೀಡುವ ಮಾಂಸದೂಟವನ್ನು ಸರಿಯಾಗಿ ಮಾಡಲ್ಲ. ಆಟೋಟಕ್ಕೆ ಸಾಮಗ್ರಿಗಳನ್ನೇ ನೀಡಿಲ್ಲ ಎಂದು ತಿಳಿಸಿದ್ದಾರೆ.

ವಸತಿ ನಿಲಯದ ಮಕ್ಕಳಿಗೆ ಸರಕಾರ ಎಲ್ಲವನ್ನೂ ನೀಡಿದ ಮೇಲೂ ಇಲ್ಲಿನ ವಿದ್ಯಾರ್ಥಿಗಳಿಗೆ ಮಾತ್ರ ಸಕಾಲಕ್ಕೆ ಯಾವುದೂ ಲಭಿಸದೇ ಇರುವುದು ವಿಕ ಭೇಟಿಯಿಂದ ಕಂಡು ಬಂದಿದೆ. ಒಂದರ್ಥದಲ್ಲಿ ದೇವರು ಕೊಟ್ಟರೂ ಪೂಜಾರಿ ಭಕ್ತರಿಗೆ ನೀಡಿಲ್ಲ ಎಂಬಂತಹ ಸ್ಥಿತಿ ಇಲ್ಲಿನ ವಸತಿ ನಿಲಯದಲ್ಲಿದೆ. ಮೇಲ್ನೋಟಕ್ಕೆ ಮನೆಯಂತೆ ಕಾಣುವ ಈ ವಸತಿ ನಿಲಯದಲ್ಲಿ ಇಕ್ಕಟ್ಟಾದ ಜಾಗದಿಂದಾಗಿ ರೋಸಿ ಹೋಗಿರುವ ವಿದ್ಯಾರ್ಥಿಗಳು ಕೂಡಲೇ ಇಲ್ಲಿಂದ ಬೇರೆಡೆ ಸ್ಥಳಾಂತರಿಸಿ ನಮಗೆ ಮುಕ್ತಿ ಕೊಡಿಸಿ ಎಂದು ಅಳಲು ತೋಡಿಕೊಂಡರು.

ಚಪಾತಿಗಾಗಿ ಕ್ಯೂ ಕಡ್ಡಾಯ!

ಕಾಲ ಕಾಲಕ್ಕೆ ಮೊಟ್ಟೆ, ಹಾಲು ನೀಡುತ್ತಿಲ್ಲ. ತಿಳಿ ನೀರಿನ ಸಾಂಬಾರು ಮಾಡಲಾಗುತ್ತದೆ. ಖಾರ, ಅರಿಶಿಣ ಬಿಟ್ಟರೆ ಏನೂ ಇರದು. ಎಣ್ಣೆ ಇಲ್ಲದೆ ಹಿಟ್ಟು ಹಚ್ಚಿದ ಚಪಾತಿ ಮಾಡಲಾಗುತ್ತಿದೆ. ಕೇವಲ ಇಬ್ಬರು ಮಾತ್ರ ಚಪಾತಿ ಮಾಡುತ್ತಿದ್ದರಿಂದ ಊಟಕ್ಕೆ ಕುಳಿತಾಗ ಚಪಾತಿಗಾಗಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಶೌಚಾಲಯ ಹಾಗೂ ಕೋಣೆಗಳನ್ನು ಸಕಾಲಕ್ಕೆ ಸ್ವಚ್ಛಗೊಳಿಸಲ್ಲ.ಸೊಳ್ಳೆಗಳ ಕಾಟವೂ ವಿಪರೀತವಾಗಿದೆ ಎಂದು ವಸತಿ ನಿಲಯಕ್ಕೆ ಭೇಟಿ ನೀಡಿದ ವಿಜಯ ಕರ್ನಾಟಕ ಪ್ರತಿನಿಧಿ ಎದುರು ವಿದ್ಯಾರ್ಥಿಗಳು ಸಮಸ್ಯೆ ಬಿಡಿಸಿಟ್ಟರು.

ಇಕ್ಕಟ್ಟಾದ ಜಾಗದಿಂದಾಗಿ ವಿದ್ಯಾರ್ಥಿಗಳು ಇಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಓದಲು ಬಂದವರು, ಬದುಕಲು ಕಷ್ಟಪಡುವಂತಾಗಿದೆ. ಹೀಗಾಗಿ, ಕೂಡಲೇ ಕಟ್ಟಡವನ್ನು ಬದಲಾಯಿಸಿ, ದೊಡ್ಡದಾದ ಕಟ್ಟಡಕ್ಕೆ ಇಲ್ಲವೇ, ಸರಕಾರದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಎಲ್ಲ ಸೌಲತ್ತುಗಳು ಮಕ್ಕಳಿಗೆ ಲಭಿಸುವಂತಾಗಬೇಕು. ಎಲ್ಲೆಡೆ ಪ್ರಭಾರಿ ಸಿಬ್ಬಂದಿಯಿದ್ದು, ವಸತಿ ನಿಲಯಗಳ ನಿರ್ವಹಣೆ ಸೂಕ್ತವಾಗಿ ಆಗುತ್ತಿಲ್ಲ.

- ಸಿ. ಧನಂಜಯ್‌, ಸಂಘಟನಾ ಕಾರ‍್ಯದರ್ಶಿ, ವಿದ್ಯಾರ್ಥಿ ಮುಖಂಡ, ಬೀದರ್‌

ಬಿಸಿಎಂ ಅಧಿಕಾರಿ ನಿನ್ನೆಯಷ್ಟೇ ನಿವೃತ್ತರಾಗಿದ್ದಾರೆ. ನಾನು ನಿನ್ನೆಯೇ ಪ್ರಭಾರವಹಿಸಿಕೊಂಡಿದ್ದೇನೆ. ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವೆ. ಸಮಸ್ಯೆಗಳಿದ್ದರೆ ಬಗೆಹರಿಸಲಾಗುವುದು. ಜತೆಗೆ ಸರಕಾರದ ಗಮನಕ್ಕೂ ತರಲಾಗುವುದು.

- ಅವಿನಾಶ್‌, ಪ್ರಭಾರ ಬಿಸಿಎಂ ಜಿಲ್ಲಾ ಅಧಿಕಾರಿ, ಬೀದರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ