ಬಸವಕಲ್ಯಾಣ: ತಾಲೂಕಿನ ಯರಂಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಎರಡು ಗುಂಪಿನ ಮಧ್ಯೆ ಜಗಳವಾಗಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಈಗಾಗಲೇ ಎರಡು ಗುಂಪಿನ 12 ಜನರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಶುಕ್ರವಾರ ರಾತ್ರಿ ಗ್ರಾಮದಲ್ಲಿ ಹಜರತ ರಾಜ ಸವಾರ ಸಾಹೇಬ ಜಾತ್ರಾ ಮಹೋತ್ಸವದಲ್ಲಿ ಯುವತಿಯೊಬ್ಬಳನ್ನು ಚುಡಾಯಿಸಲಾಗಿದೆ ಎಂದು ಪರಸ್ಪರ ಮಾರಾಮಾರಿ ನಡೆದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಒಂದು ಸಮುದಾಯದ ಯುವತಿಗೆ ಯುವಕನೊಬ್ಬ ಚುಡಾಯಿಸಿದ್ದರಿಂದ ಯುವತಿ ಕಡೆಯವರು ಯುವಕನಿರುವ ಬಡಾವಣೆಗೆ ಹೋಗಿ ದಾಂಧಲೆ ಮಾಡಿದ್ದಾರೆ. ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ಯುವಕನ ಕಡೆಯವರು ಯುವತಿ ಕಡೆಯವರ ಮೇಲೆ ಹಲ್ಲೆ ಮಾಡಿದ್ದಾರೆ.
ಸಾರಿಗೆ ಬಸ್ಸಿನ ಗಾಜÜು ಒಡೆಯಲಾಗಿದ್ದು, ನಾಲ್ಕು ದ್ವಿಚಕ್ರ ವಾಹನಗಳು ಜಖಂ ಗೊಂಡಿವೆ. ಸ್ಥಳದಲ್ಲಿಯೇ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಶುಕ್ರವಾರ ರಾತ್ರಿ ಘಟನಾ ಸ್ಥಳಕ್ಕೆ ಹುಮನಾಬಾದ ಡಿವೈಎಸ್ಪಿ ಚಂದ್ರಕಾಂತ ಪೂಜಾರಿ ಭೇಟಿ ನೀಡಿದ್ದಾರೆ.
ಸ್ಥಳದಲ್ಲಿ ನಗರ ಸಿಪಿಐ ಅಲಿಸಾಬ, ಮಂಠಾಳ ಸಿಪಿಐ ಎಂ.ಎಂ. ಡಪ್ಪಿನ, ಪಿಎಸ್ಐಗಳಾದ ಗುರು ಪಾಟೀಲ, ಬಾಬುರಾವ, ಶಿರೋಮಣಿ ಕರಂಜಿಕರ, ಅಮೂಲ ಕಾಳೆ ಹಾಗೂ ಸಿಬ್ಬಂದಿಗಳು ಇದ್ದಾರೆ. ಬೀದರನ ಒಂದು ಡಿಆರ್ ವಾಹನ ನಿಯೋಜಿಸಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.