ಬೀದರ್: ಕಲಿಯುಗದಲ್ಲಿ ಅಲ್ಪ ಪುಣ್ಯ ಮಾಡಿ, ಹೆಚ್ಚು ಲಾಭ ಬಯಸುವ ಸ್ವಾರ್ಥ ನಿಜಕ್ಕೂ ಮಾರಕವಾದದ್ದು ಎಂದು ಕಾಶಿ ಜಗದ್ಗುರು ಶ್ರೀ ಡಾ.ಗಂಗಾಧರ ಭಗವತ್ಪಾದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ನ್ಯೂ ಆದರ್ಶ ಬಡಾವಣೆ ಭವಾನಿ ಮಂದಿರದಲ್ಲಿ ಜೈ ಮಾತಾ ಭವಾನಿ ಮಂದಿರ ಟ್ರಸ್ಟ್ ಹಾಗೂ ನ್ಯೂ ಮದರ್ ಥೆರೆಸಾ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಮನುಷ್ಯ ತಾನು ಪುಣ್ಯ ಪ್ರಾಪ್ತಿಗಾಗಿ ತೀರ್ಥಯಾತ್ರೆ ಮೊರೆ ಹೋಗುತ್ತಾನೆ. ಹಿಂದೂ ಧರ್ಮದ ಪ್ರಕಾರ 12 ಜ್ಯೋತಿರ್ಲಿಂಗಗಳ ದರುಶನ ಮಾಡಿದರೆ ಪುಣ್ಯ ದೊರೆಯುತ್ತದೆ ಎಂಬ ಪ್ರತೀತಿಯಿದೆ. ಹಿಂದಿನ ಕಾಲದಲ್ಲಿ ನಡೆದುಕೊಂಡು 12 ಜ್ಯೋತಿರ್ಲಿಂಗಗಳ ದರುಶನ ಮಾಡುತ್ತಿದ್ದ ಜನ ಈಗ ಜಗತ್ತನ್ನೇ ತನ್ನ ಅಂಗೈಯಲ್ಲಿ ಹಿಡಿದಿದ್ದು, ಮೂರು ನಾಲ್ಕು ದಿನಗಳಲ್ಲಿ 12 ಜ್ಯೋತಿರ್ಲಿಂಗಗಳ ದರುಶನ ಮಾಡುವಷ್ಟು ಸೌಲತ್ತು ದೊರೆತಿದೆ.
ಆದರೂ ಕೆಲವರು ಸಮಯ ಅಭಾವದ ನೆಪವೊಡ್ಡಿ ದರುಶನ ಮಾಡದವರಿಗೆ ಜ್ಯೋತಿರ್ಲಿಂಗಕ್ಕೆ ಸಂಬಂಧಿಸಿದ ಮಹಾಮಂತ್ರ ಜಪಿಸಿದರೆ ಸಾಕು. ಅದು ಸಹ ಆಗದಿದ್ದವರಿಗೆ ಕೇವಲ ಷಡಕ್ಷರಿ ಮಂತ್ರ ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಉಚ್ಚಾರಣೆ ಮಾಡಿದರೆ ಸಾಕು 70 ವರ್ಷದ ಪಾಪ ನಾಶವಾಗುತ್ತದೆ ಎಂದರು.
ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಗಳಿರುತ್ತಿದ್ದವು. ಅಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿ ತುಂಬಿರುತಿತ್ತು. ಆದರೆ, ಕುಟುಂಬಗಳು ಚದುರಿದಂತೆ ಜಪ, ತಪ, ಪೂಜಾದಿ ಕರ್ಮಗಳು ನಿಂತು ಹೋಗುತ್ತಿದ್ದು, ಅಂಥವರು ಕನಿಷ್ಠ ಭಗವಂತನ ನಾಮಸ್ಮರಣೆ ಮಾಡಿ, ದಾನ ಧರ್ಮೀಯರಾಗಿ ಬಾಳುವಂತೆ ಹೇಳಿದರು.
ಜಗತ್ತಿನಲ್ಲಿ ಕೇವಲ ಭಾರತೀಯರು ಮಾತ್ರ ಆಚರಿಸುವ ಯುಗಾದಿ ಇಡೀ ಮನುಕುಲ ಉದ್ಧಾರಕ್ಕಾಗಿ ಪ್ರಾರ್ಥಿಸುವ ಸಂದರ್ಭ. ಈ ವರ್ಷ ಎಲ್ಲರಿಗೂ ಸುಖ, ಶಾಂತಿ ಹಾಗೂ ನೆಮ್ಮದಿ ತಂದು ಕೊಡಲಿ, ಸರ್ವರ ಬಾಳು ಬೆಳಗುವಂತಾಗಲಿ ಎಂದು ಹರಸಿದರು.
ವಿಶ್ವನಾಥ ಹಿರೇಮಠ, ಬಸವರಾಜ ದೇಶಮುಖ, ಡಾ.ಉಮಾ ದೇಶಮುಖ, ಶಿವಯ್ಯ ಸ್ವಾಮಿ, ಎಂ.ಜಿ.ದೇಶಪಾಂಡೆ, ಶಿವಕುಮಾರ ಸ್ವಾಮಿ, ಪ್ರಕಾಶ ಕನ್ನಾಳೆ, ಪಾಲಕ್ಷಯ್ಯ ಸ್ವಾಮಿ, ಆನಂದ ಹಿರೇಮಠ, ಶಾಂತಲಿಂಗಯ್ಯ ಸ್ವಾಮಿ, ಗದಗೆಪ್ಪ ಹಿರೇಮಠ, ಅರವಿಂದ ಪೋಲಾ, ಸಂಜೀವಕುಮಾರ ಸ್ವಾಮಿ, ಅಮೂಲ್ಯ, ಸಾಯಿಪ್ರಸಾದ್, ಮಂಜುನಾಥ ಸ್ವಾಮಿ, ವೀರೇಶ್ ಹಿರೇಮಠ ಮತ್ತಿತರರಿದ್ದರು.