ಆ್ಯಪ್ನಗರ

ನೀರಿಲ್ಲದ ಶೌಚಾಲಯ ಇದ್ದರೇನು ಪ್ರಯೋಜನ ?

ಪಟ್ಟಣದ ಕೋಳಿವಾಡ, ಶಿವಪುರ ಬಡಾವಣೆ ಸೇರಿದಂತೆ ಹಲವೆಡೆ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ನಿರ್ಮಿಸಿರುವ ಸಾಮೂಹಿಕ ಶೌಚಾಲಯಗಳಿಗೆ ಸಮರ್ಪಕ ಸೌಲಭ್ಯ ಕಲ್ಪಿಸದ ಕಾರಣ ನಿರುಪಯುಕ್ತವಾಗಿವೆ.

Vijaya Karnataka 16 Jun 2019, 9:05 pm
ರಾಜಪ್ಪ ಪೂಜಾರಿ ಹುಮನಾಬಾದ್‌ :ಪಟ್ಟಣದ ಕೋಳಿವಾಡ, ಶಿವಪುರ ಬಡಾವಣೆ ಸೇರಿದಂತೆ ಹಲವೆಡೆ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ನಿರ್ಮಿಸಿರುವ ಸಾಮೂಹಿಕ ಶೌಚಾಲಯಗಳಿಗೆ ಸಮರ್ಪಕ ಸೌಲಭ್ಯ ಕಲ್ಪಿಸದ ಕಾರಣ ನಿರುಪಯುಕ್ತವಾಗಿವೆ.
Vijaya Karnataka Web what is the benefit of waterless toilet
ನೀರಿಲ್ಲದ ಶೌಚಾಲಯ ಇದ್ದರೇನು ಪ್ರಯೋಜನ ?


ಲಕ್ಷಾಂತರ ಹಣ ವೆಚ್ಚಮಾಡಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ ಎರಡ್ಮೂರು ವರ್ಷಗಳೆ ಕಳೆದರೂ ಬಳಕೆಯಾಗುತ್ತಿಲ್ಲ. ಅಗತ್ಯವಾಗಿರಬೇಕಾದ ವಿದ್ಯುತ್‌ ಸಂಪರ್ಕ, ನೀರು ಹಾಗೂ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣಕ್ಕೆ ಬಡಾವಣೆಯ ಜನರು ಬಯಲಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಸರಿಯಾದ ನಿರ್ವಹಣೆ ಇಲ್ಲದೇ ಆಗಲೇ ಶೌಚಾಲಯದ ಬಾಗಿಲು, ಕಿಟಕಿ, ನೀರಿನ ಪೈಪಗಳು ಹಾಳಾಗಿವೆ. ಇದರಿಂದ ಸರಕಾರ ಯೋಜನೆಗಳು ಹಳ್ಳ ಹಿಡಿಯುತ್ತಿವೆ ಎಂದು ಬಡಾವಣೆಯ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಲಕ್ಷಾಂತರ ಹಣ ಖರ್ಚು ಮಾಡಿದರೂ, ಅದರ ಉದ್ದೇಶ ಕಾರ್ಯರೂಪಗೊಳ್ಳುತ್ತಿಲ್ಲ. ಕೊಳಚೆ ಪ್ರದೇಶದ ಜನರಿಗಾಗಿ ನಿರ್ಮಿಸಿರುವ ಶೌಚಾಲಯಗಳ ಹೆಸರಲ್ಲಿ ಅಧಿಕಾರಿಗಳು ಹಣ ಪೋಲು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದೆ.

ಹಾಳು ಬಿದ್ದ ಶೌಚಾಲಯ:

ಶಿವಪುರ ಬಡಾವಣೆಯ ಹನುಮಾನ ದೇವಸ್ಥಾನದ ಹಿಂದೆ ನಿರ್ಮಿಸಿದ ಶೌಚಾಲಯದಲ್ಲಿ ಕಸ ಹಾಗೂ ಮಣ್ಣು ತುಂಬಿಕೊಂಡಿದೆ. ಜನತಾ ಕಾಲೊನಿಯಲ್ಲಿ ಪುರಸಭೆಯಿಂದ ನೂತನ ಶೌಚಾಲಯ ನಿರ್ಮಿಸಿದ್ದು, ಕಾಮಗಾರಿ ಪೂರ್ಣಗೊಳ್ಳದೆ ಮಹಿಳೆಯರು ಹಾಗೂ ಪುರುಷರು ಬಯಲಿಗೆ ಹೋಗುವಂತಾಗಿದೆ. ಸ್ಥಳೀಯ ಜನಪ್ರತಿನಧಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ನೂತನವಾಗಿ ಆಯ್ಕಗೊಂಡ ಸದಸ್ಯರು ಮೂಲ ಸೌಕರ್ಯ ಕಲ್ಪಿಸಿಕೊಡಬೇಕು ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.

ಹೇಸಿಗೆ ತುಳಿದೇ ಹೋಗಬೇಕು:

ಪ್ರತಿನಿತ್ಯ ಹುಮನಾಬಾದ -ಧುಮ್ಮನಸೂರ ಗ್ರಾಮಕ್ಕೆ ತೆರಳಬೇಕಾದರೆ ನಿವಾಸಿಗಳು ರಸ್ತೆಯ ಮೇಲೆ ಮಲ ಮೂತ್ರಗಳನ್ನು ತುಳಿದುಕೊಂಡೇ ಮೂಗು ಮುಚ್ಚಿಕೊಂಡು ಹೋಗಬೇಕು. ಕೋಳಿವಾಡ, ಇಂದಿರಾನಗರ, ಧನಗರ ಗಡ್ಡಾ ಸೇರಿದಂತೆ ಪಟ್ಟಣದ ಬಹುತೇಕ ಕಡೆ ಬಡಾವಣೆಯ ನೂರಾರು ಜನ ಬಯಲು ಶೌಚಕ್ಕೆ ಹೋಗುವುದು ಅನಿರ್ವಾಯವಾಗಿದೆ. ಹೀಗಾಗಿ ಇಲ್ಲಿ ರೋಗಗಳಿಗೆ ಮುಕ್ತ ಅವಕಾಶ ನೀಡಿದಂತಾಗಿದೆ. ಪುರಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದು, ಅದು ಕೇವಲ ಕಾಗದಗಳಲ್ಲಿ ಮಾತ್ರ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡುತ್ತಾರೆ ನಿವಾಸಿಗಳು.

ಸಾರ್ವಜನಿಕ ಶೌಚಾಲಯಗಳು ಕಾರ್ಯಾರಂಭ ಮಾಡುತ್ತಿಲ್ಲ. ಹಾಗಾಗಿ, ಬಯಲೇ ಗತಿ. ಇನ್ನು ಕೆಲವರು ಶೌಚಾಲಯ ನಿರ್ಮಿಸಿದರೂ ಇಂಗುಗುಂಡಿ ಮಾಡದ ಕಾರಣ ತೆರೆದ ಚರಂಡಿಗಳಿಗೆ ಕೊಳಚೆ ಹರಿಬಿಡುತ್ತಿದ್ದು, ದುರ್ವಾಸನೆಯಿಂದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ.

ಕೂಡಲೇ ಪುರಸಭೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಶೌಚಾಲಯಗಳಿಗೆ ಅವಶ್ಯವಿರುವ ಮೂಲ ಸೌಕರ್ಯ ಕಲ್ಪಿಸಿ ಅವುಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು. ಪಟ್ಟಣದಲ್ಲಿ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ.


ಪಟ್ಟಣದ ಕೋಳಿವಾಡ ಸೇರಿದಂತೆ ವಿವಿಧ ಬಡಾವಣೆಯ ನಿವಾಸಿಗಳು ಸಾಮೂಹಿಕ ಶೌಚಾಲಯ ಇಲ್ಲದ ಕಾರಣ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಶೌಚಾಲಯ ದುರಸ್ತಿ ಮಾಡಿ ಚಾಲನೆ ನೀಡಲಾಗುವುದು. ಸಾಮೂಹಿಕ ಶೌಚಾಲಯ ಪ್ರಾರಂಭಿಸಲಾಗುವುದು.

-ಮನೋಜಕುಮಾರ,ಪುರಸಭೆ ಮುಖ್ಯಾಧಿಕಾರಿ

ಕಳೆದ ಮೂರು ವರ್ಷದಿಂದ ಸರಿಯಾದ ನಿರ್ವಹಣೆ ಇಲ್ಲದೆ ಸಾಮೂಹಿಕ ಶೌಚಾಲಯಗಳು ಮೂಲೆಗುಂಪಾಗಿವೆ. ಜನರು ನಾಚಿಕೆ ಬಿಟ್ಟು ಬಯಲಿಗೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಚಿವರು ಪುರಸಭೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಸಲಹೆ ಸೂಚನೆ ನೀಡಬೇಕು.

-ದತ್ತಾತ್ರೇಯ ಪರೀಟ್‌, ಕೋಳಿವಾಡ ಬಡಾವಣೆ ನಿವಾಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ