ಬೀದರ್: ಇಂದು ಹಿರಿಯ ನಾಗರಿಕರು ಹಿಂದಿಗಿಂತಲೂ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪಾಲಕರು ಮಕ್ಕಳನ್ನು ಕಾಳಜಿಯಿಂದ ನೋಡಿಕೊಂಡು, ಶಿಕ್ಷಣ ಕೊಡಿಸಿ ಭವಿಷ್ಯವನ್ನು ರೂಪಿಸುತ್ತಾರೆ. ಆದರೆ, ಅದೇ ಮಕ್ಕಳು ದೊಡ್ಡವರಾದ ಮೇಲೆ ಪಾಲಕರನ್ನೇ ದೂರ ಮಾಡುತ್ತಿದ್ದಾರೆ ಎಂದು ಜಿಪಂ ಅಧ್ಯಕ್ಷೆ ಭಾರತಬಾಯಿ ಮಲ್ಲಿನಾಥ ಸೇರಿಕಾರ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆತ್ತವರನ್ನು ಮನೆಯಿಂದ ಮಕ್ಕಳು ದೂರ ಮಾಡುತ್ತಿರುವುದರಿಂದ ಇಂದು ಬಹುತೇಕರ ಕುಟುಂಬಗಳಲ್ಲಿ ಅನುಭವಸ್ಥರ ಕೊರತೆ ಎದ್ದು ಕಾಣುತ್ತಿದೆ. ಪರಿಣಾಮವಾಗಿ ಕುಟುಂಬದಲ್ಲಿ ಆತ್ಮಹತ್ಯೆ, ಕೌಟುಂಬಿಕ ಸಾಮರಸ್ಯ ಕೊರತೆ ಕಂಡು ಬರುತ್ತಿದೆ. ಹಿರಿಯ ನಾಗರಿಕರು ತಮ್ಮ ವೃದ್ಧಾಪ್ಯ ಜೀವನವನ್ನು ಸಂಗೀತ, ಮನರಂಜನೆ ಕೇಳುವುದು ಮತ್ತು ಮಕ್ಕಳಿಗೆ ನೈತಿಕ ವಿಚಾರಗಳನ್ನು ಕಲಿಸುವುದು ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸುಖಮಯವಾಗಿ ಕಳೆಯುವಂತಾಗಬೇಕು ಎಂದರು.
ನಗರ ಸಭೆಯ ಹಂಗಾಮಿ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ ಮಾತನಾಡಿ, ನಾವು ನಮ್ಮ ತಂದೆ ತಾಯಿಗಳಿಗೆ ಗೌರವ ನೀಡಿದರೆ ಮಾತ್ರ ನಮ್ಮ ಮಕ್ಕಳು ನಮಗೆ ಗೌರವ ನೀಡುತ್ತಾರೆ ಎಂದರು.
ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ್ ಮಾತನಾಡಿ, ಇಂದಿನ ಆಧುನಿಕ ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತಿರುವ ಯುವಕರು ತಮ್ಮ ತಂದೆ ತಾಯಿಯ ಸೂಕ್ತ ಆರೈಕೆಗೆ ಗಮನ ಹರಿಸದಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಸರಕಾರದಿಂದ ಸಿಗುವ ವೃದ್ಧಾಪ್ಯ ವೇತನ, ವಿವಿಧ ರಿಯಾಯಿತಿ ಸೌಲಭ್ಯಗಳನ್ನು ಪಡೆಯಲು ಹಿರಿಯ ನಾಗರಿಕರು ಸರಕಾರಿ ಕಚೇರಿಗಳಿಗೆ ಪ್ರತಿನಿತ್ಯ ಅಲೆದಾಡಿ, ಪಡುತ್ತಿರುವ ಸಂಕಷ್ಟಗಳ ಕುರಿತು ಹಿರಿಯ ನಾಗರಿಕರ ದೂರುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸುವುದಾಗಿ ತಿಳಿಸಿದರು.
ಸೆ. 13 ರಂದು ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಮತ್ತು ದೇಹದಾನ ಮಾಡಿದ ಹಿರಿಯ ನಾಗರಿಕ ಮನ್ನಳ್ಳಿ ಗ್ರಾಮದ ಚೆನ್ನಪ್ಪಾ ಸಂಗೋಳಗಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಪಾಂಡುರಂಗ ಬಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಈರಣ್ಣಾ ಎಸ್. ಪಾಂಚಾಳ, ನಿವೃತ್ತ ಜಂಟಿ ಕೃಷಿ ನಿರ್ದೇಶಕ ಎಂ.ಎಸ್.ಕಟಗಿ, ಡಾ. ಮಾರುತಿ ಕಂಪೌಂಡ್, ಪ್ರಲ್ಹಾದರಾವ್ ಕುಲಕರ್ಣಿ ಮುತ್ತಂಗಿ, ರೊಟ್ಟೆ, ದೇಶಾಂಶ ಹುಡಗಿ, ಲೀಲಾವತಿ ಚಕೋತೆ, ಎಸ್.ಬಿ. ಕುಚಬಾಳ್, ವೈಜನಾಥ ಕಮಠಾಣೆ, ಪಂಚಾಕ್ಷರಿ ಪುಣ್ಯಶೆಟ್ಟಿ ಸೇರಿದಂತೆ ಹಲವು ಹಿರಿಯರು ಇದ್ದರು. ಲಕ್ಷ್ಮಣರಾವ್ ಕಾಂಚೆ ಪ್ರಾರ್ಥನೆ ಗೀತೆ ಹಾಡಿದರೆ, ಡ್ಯಾನಿಯಲ್ ರಾಜ್ ಕೊಳಾರ್ ನಿರೂಪಿಸಿದರು.