ಕಡೇ ಆಷಾಢ ಶುಕ್ರವಾರ, ದೇವಾಲಯದಲ್ಲಿ ಜನ ಸಾಗರ
ಕಡೇ ಆಷಾಢ ಶುಕ್ರವಾರದ ಅಂಗವಾಗಿ ನಗರದ ಚಾಮರಾಜೇಶ್ವರ ದೇವಾಲಯ ಹಾಗೂ ಕಾಳಮ್ಮನ ಗುಡಿಬೀದಿಯಲ್ಲಿರುವ ಕಾಳಿಕಾಂಬ ದೇವಸ್ಥಾನದಲ್ಲಿ ಭಕ್ತಾದಿಗಳ ದಂಡು ನೆರೆದಿತ್ತು.
ಚಾಮರಾಜನಗರ: ಕಡೇ ಆಷಾಢ ಶುಕ್ರವಾರದ ಅಂಗವಾಗಿ ನಗರದ ಚಾಮರಾಜೇಶ್ವರ ದೇವಾಲಯ ಹಾಗೂ ಕಾಳಮ್ಮನ ಗುಡಿಬೀದಿಯಲ್ಲಿರುವ ಕಾಳಿಕಾಂಬ ದೇವಸ್ಥಾನದಲ್ಲಿ ಭಕ್ತಾದಿಗಳ ದಂಡು ನೆರೆದಿತ್ತು.
ಚಾಮರಾಜೇಶ್ವರ ದೇವಸ್ಥಾನದ ಒಳಾವರಣದಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಚಾಮುಂಡಿ ತಾಯಿಗೆ ಸರತಿಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.
ಶುಕ್ರವಾರ ಮುಂಜಾನೆಯೇ ದೇವಾಲಯಕ್ಕೆ ಧಾವಿಸಿ ಬಂದ ಮಹಿಳೆಯರು ತಟ್ಟೆಗೆ ಅಕ್ಕಿಯನ್ನು ಹಾಕಿ, ನಿಂಬೆಹಣ್ಣಿನ ದೀಪವನ್ನು ಹಚ್ಚಿ,'ವರವ ಕೊಡು ತಾಯೇ'ಎಂದು ಚಾಮುಂಡಾಂಬೆಯನ್ನು ಪ್ರಾರ್ಥಿಸಿದರು.
ಕಡೇ ಶುಕ್ರವಾರದ ಹಿನ್ನೆಲೆಯಲ್ಲಿ ನಿಂಬೆಹಣ್ಣು ದೀಪ ಇಡುವುದಕ್ಕೆ ಹೊರಗಡೆ ವ್ಯವಸ್ಥೆ ಮಾಡಲಾಗಿತ್ತು, ದೇವರಿಗೆ ಪೂಜೆ ಸಲ್ಲಿಸಿದ ನಂತರ ನಿಂಬೆ ಹಣ್ಣು ದೀಪವಿರಿಸಿ, ತಾಯಿಯ ಚರಣಗಳಲ್ಲಿ ಹೂಹಣ್ಣು ಇಟ್ಟು ಪೂಜೆ ಸಲ್ಲಿಸಿದರು.
'ಆಷಾಢ ಮಾಸದಲ್ಲಿ ಯಾವುದೇ ಶು» Üಕಾರ್ಯಗಳು ನಡೆಯುವುದು ಅಪರೂಪ, ಆದರೆ ಚಾಮುಂಡಿ ತಾಯಿಗೆ ಆಷಾಢ ಮಾಸವೇ ಪವಿತ್ರ ಎನ್ನುವ ನಂಬಿಕೆ. ಆ ನಿಟ್ಟಿನಲ್ಲಿ ದೇವಿಯನ್ನು ಸ್ತುತಿಸಿ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಕೈಗೊಂಡಿದ್ದೇವೆ ಎನ್ನುತ್ತಾರೆ ಮಹಿಳೆಯರು.
ತಾಳಿಪೂಜೆ: ಪೂಜೆ ಮುಗಿದ ಬಳಿಕ ಆವರಣದಲ್ಲಿ ಕುಳಿತ ಮಹಿಳೆಯರು, ನಗರದ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ಮಹಿಳೆಯರಿಗೆ ಪರಸ್ವರ ತಾಳಿಪೂಜೆ ನೆರವೇರಿಸಲಾಯಿತು.
ನಗರದ ಕಾಳಮ್ಮನ ಗುಡಿಬೀದಿಯಲ್ಲಿರುವ ಕಾಳಿಕಾಂಬ ದೇಗುಲದಲ್ಲಿ ಕಡೇ ಆಷಾಢ ಶುಕ್ರವಾರದ ಅಂಗವಾಗಿ 'ಬಳೆ' ಅಲಂಕಾರ ಮಾಡಲಾಗಿತ್ತು. ಪ್ರಾಂಗಣದಲ್ಲಿರುವ ಕಮಠೇಶ್ವರ, ಸುಬ್ರಹ್ಮಣ್ಯ, ಆಂಜನೇಯಸ್ವಾಮಿಗೂ ನಾನಾಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿ, ನೆರೆದಿದ್ದ ಭಕ್ತಾದಿಗಳ ಗಮನಸೆಳೆಯಿತು.
ಇಲ್ಲಿಯೂ ಸಹ ಭಕ್ತಾದಿಗಳು ಸಾಕಷ್ಟು ಸಂಖ್ಯೆಯಲ್ಲಿ ನೆರೆದು, ವಿಶೇಷ ಪೂಜೆ ಸಲ್ಲಿಸಿದರು.
ನಗರದ 2 ದೇವಸ್ಥಾನಗಳಲ್ಲೂ ಆಷಾಢ ಮಾಸದ ಸಂಭ್ರಮ ಮನೆ ಮಾಡಿತ್ತು.