ಕೊಳ್ಳೇಗಾಲ: ರಾಷ್ಟ್ರೀಯ ಹೆದ್ದಾರಿ (209) ಅಗಲೀಕರಣಕ್ಕೆ ಸಂಬಂಧಿಸಿದಂತೆ ಮಧ್ಯ ರೇಖೆಯನ್ನು ಮತ್ತೆ ಗುರುತಿಸಿ, ಮರು ಅಳತೆ ಮಾಡುವ ಮೂಲಕ ನಗರಸಭೆ ಅಧಿಕಾರಿಗಳು ವಿವಾದಕ್ಕೆ ತೆರೆ ಎಳೆದಿದ್ದಾರೆ.
ಹೆದ್ದಾರಿ ಅಗಲೀಕರಣಕ್ಕಾಗಿ ಮಧ್ಯ ರೇಖೆಯಲ್ಲಿ ವ್ಯತ್ಯಾಸವಿದೆ. ಕೆಲವೆಡೆ ಪ್ರಭಾವಿಗಳ ಒತ್ತಾಯಕ್ಕೆ ಮಣಿಯಲಾಗಿದೆ ಎಂಬ ಸಾರ್ವಜನಿಕರ ಆರೋಪ ಹಾಗೂ ಅನುಮಾನಗಳ ಬಗ್ಗೆ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು.
ವರದಿಯ ಫಲವಾಗಿ ಅಧಿಕಾರಿಗಳು ಮರು ಅಳತೆ ಮಾಡಿ ಲೋಪದೋಷಗಳನ್ನು ಸರಿಪಡಿಸುವ ಕಾರ್ಯವನ್ನು ಬುಧವಾರ ನಡೆಸಿದರು. ಆ ಮೂಲಕ ಆರೋಪ ಹಾಗೂ ಇದ್ದ ಅನುಮಾನಗಳನ್ನು ಹೋಗಲಾಡಿಸಿದರು.
ಅಧಿಕಾರಿಗಳು ಪ್ರಭಾವಿಗಳ ಆಸ್ತಿ ಉಳಿಸುವ ಸಲುವಾಗಿ ಸೆಂಟರ್ ಪಾಯಿಂಟ್ ವ್ಯತ್ಯಾಸ ಮಾಡಿ ವಿವಾದ ಸೃಷ್ಟಿಯಾಗಿತ್ತು. ಇದು ಸಾರ್ವಜನಿಕರ ಕೆಂಗಣ್ಣಿಗೂ ಗುರಿಯಾಗಿತ್ತು. ಈ ಸಂಬಂದ ಪತ್ರಿಕೆಯಲ್ಲಿ ಅ. 17 ರಂದು ವರದಿ ಪ್ರಕಟಗೊಂಡಿತ್ತು.
ಎಚ್ಚೆತ್ತ ಕಟ್ಟಡ ಮಾಲೀಕರು : ಕಳೆದ ಐದು ದಿನದಿಂದ ನಗರ ಸಭೆ ಮತ್ತು ಹೆದ್ದಾರಿ ಪ್ರಾಧಿಕಾರ ರಸ್ತೆ ಅಗಲೀಕರಣ ಕಾರ್ಯ ಪ್ರಾರಂಭ ಮಾಡಿ ಖಾಲಿ ಇರುವ ಕಟ್ಟಡಗಳು, ಸುತ್ತುಗೋಡೆ, ಸರಕಾರಿ ಶಾಲಾ ಕಾಲೇಜುಗಳು ಹಾಗೂ ಕಚೇರಿ ಕಟ್ಟಡಗಳ ಸುತ್ತುಗೋಡೆಗಳನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿರುವುದರಿಂದ ಎಚ್ಚೆತ್ತ ಕೆಲ ಕಟ್ಟಡ ಮಾಲೀಕರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.
ರಸ್ತೆ ಅಗಲೀಕರಣಕ್ಕೆ ಬೆರಳಣಿಕೆಯಷ್ಟು ಜನರ ವಿರೋಧ ಹೊರತು ಪಡಿಸಿದರೆ ಉಳಿದಂತೆ ಉತ್ತಮ ಸ್ಪಂದನ ದೊರೆಯುತ್ತಿದೆ. ಈ ನಡುವೆ ಅಧಿಕಾರಿಗಳು ಪ್ರಭಾವಕ್ಕೆ ಮಣಿದು ರಸ್ತೆ ಅಳತೆಯಲ್ಲಿ ವ್ಯತ್ಯಾಸ ಮಾಡಿ ಅನಗತ್ಯ ವಿವಾದ ಸೃಷ್ಟಿ ಮಾಡಿದ್ದಾರೆ ಎಂಬ ಆರೋಪ ಇತ್ತು.
ಪಟ್ಟಣದ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದ ಬಳಿ, ಎಂಜಿಎಸ್ವಿ ಕಾಲೇಜು ಮುಂಭಾಗದಲ್ಲಿ ರಸ್ತೆ ಸೆಂಟರ್ ಪಾಯಿಂಟ್ ಮಾಡುವಾಗ ಪ್ರಭಾವಿಗಳ ಕಟ್ಟಡ ಉಳಿಸುವ ಸಲುವಾಗಿ ವ್ಯತ್ಯಾಸ ಮಾಡಿದ್ದಾರೆ ಎಂಬ ಆರೋಪ ಇತ್ತು.
ಬಸ್ ನಿಲ್ದಾಣದ ಬಳಿ ತಲೆ ಎತ್ತಿರುವ ವಾಣಿಜ್ಯ ಮಳಿಗೆಯ ಮೆಟ್ಟಿಲುಗಳನ್ನು ಉಳಿಸಿ ಕಟ್ಟಡಕ್ಕೆ ತೊಂದರೆಯಾಗದಂತೆ ಮಾಡಲು ಅಧಿಕಾರಿಗಳು ಹರಸಾಹಸ ಮಾಡಿದ್ದಾರೆ ಎಂಬುದು ಸಾರ್ವಜನಿಕರ ದೂರಾಗಿತ್ತು.
ಸುಲಲಿತವಾಗಿ ನಡೆಯುವ ಕಾರ್ಯಕ್ಕೆ ಅಧಿಕಾರಗಳೆ ತೊಡಕು ಮಾಡುವ ಕಾರ್ಯ ಮಾಡುತ್ತಿರುವ ಬಗ್ಗೆ ಪಟ್ಟಣದಲ್ಲಿ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು.
ಎಚ್ಚೆತ್ತ ಅಧಿಕಾರಿಗಳು: ವಿಕ ವರದಿಯಿಂದ ನಗರ ಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತು ಪಟ್ಟಣದ ದೇವಲ ಮಹಷಿ ವೃತ್ತದಿಂದ ತಾಲೂಕು ಪಂಚಾಯಿತಿಯವರೆಗೆ ರಸ್ತೆ ಕೇಂದ್ರ ಸ್ಥಾನವನ್ನು ಗುರುತಿಸಿ ಅಲ್ಲಿಂದ ಎರಡು ಕಡೆಯೂ ಸಮನಾಗಿ ರಸ್ತೆಗೆ ಬೇಕಾದ ಜಾಗವನ್ನು ಗುರುತು ಹಚ್ಚಿದರು. ಈ ಅಳತೆ ವೇಳೆ ಬಹಳಷ್ಟು ಕಡೆ ವ್ಯತ್ಯಾಸ ಕಂಡು ಬಂದಿತು. ನಂತರ ಸಾರ್ವಜನಿಕರೆದುರೆ ಅಳತೆ ಮಾಡಿ ಅನುಮಾನಕ್ಕೆ ತೆರೆ ಎಳೆದು ಅಧಿಕಾರಿಗಳು ನಿಟ್ಟುಸಿರು ಬಿಟ್ಟರು.
ನಗರಸಭೆ ಆಯುಕ್ತ ಡಿ.ಕೆ. ಲಿಂಗರಾಜು, ಹೆದ್ದಾರಿ ಪ್ರಾಧಿಕಾರದ ಎಇಇ ಕಾಂತರಾಜು, ಎಇ ನಾಗೇಂದ್ರ ಮುಂತಾದವರು ಅಳತೆ ಮಾಡುವ ಸಂದರ್ಭದಲ್ಲಿ ಹಾಜರಿದ್ದರು.