ಕೊಳ್ಳೇಗಾಲ: ರೋಟರಿ ಮಿಡ್ ಟೌನ್ ಮತ್ತು ಕಾವೇರಿ ರಿಕ್ರಿಯೇಷನ್ ಮಾಲ್ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪಟ್ಟಣದ ನಾಗೇಂದ್ರ ಮತ್ತು ತಂಡ ಪ್ರಥಮ ಸ್ಥಾನ ಹಾಗೂ ಮಹೇಶ್ವರ ಮತ್ತು ತಂಡ ದ್ವಿತಿಯ ಸ್ಥಾನ ಪಡೆದವು.
ಕಾವೇರಿ ರಿಕ್ರಿಯೇಷನ್ ಮಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ 10 ತಂಡಗಳು ಪಾಲ್ಗೊಂಡಿದ್ದವು. ಪಟ್ಟಣದ ನಾಗೇಂದ್ರ ಮತ್ತು ತಂಡ ಪ್ರಥಮ ಸ್ಥಾನ ಗಳಿಸಿ 10 ಸಾವಿರ ರೂ., ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು. ಮಹೇಶ್ವರ ಮತ್ತು ತಂಡ ದ್ವಿತೀಯ ಸ್ಥಾನಗಳಿಸಿ 5 ಸಾವಿರ ರೂ. ಮತ್ತು ಟ್ರೋಪಿಯನ್ನು ಪಡೆಯಿತು.
ಪಂದ್ಯಾವಳಿಗೆ ಚಾಲನೆ ನೀಡಿದ ಕ್ಷೇತ್ರದ ಶಾಸಕ ಎಸ್.ಜಯಣ್ಣ ಮಾತನಾಡಿ, ರೋಟರಿ ಮಿಡ್ ಟೌನ್ ಅತ್ಯಂತ ಕ್ರಿಯಾಶೀಲ ಹಾಗೂ ಸಾಮಾಜಿಕ ಕಳಕಳಿ ಹೊಂದಿದ ಸಂಸ್ಥೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟವಟಿಕೆಗೆ ಹೆಚ್ಚಿನ ಪ್ರೊತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಪಟ್ಟಣದ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಸಮಾರು 2.25 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಟ್ರೋಫಿಯನ್ನು ವಿತರಿಸಿ ಮಾತನಾಡಿದ ಇನ್ಸ್ಪೆಕ್ಟರ್ ಅಮರ್ನಾರಾಯಣ್, ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಕೀಡಾಪಟುಗಳು ಭಾಗವಹಿಸುವಂತೆ ಮಾಡಬೇಕು ಎಂದರು.
ರೋಟರಿ ಜಿಲ್ಲಾ ಗರ್ವನರ್ ಡಾ.ಆರ್.ಎಸ್.ನಾಗಾರ್ಜುನ ಮಾತನಾಡಿ, 140 ಕ್ಲಬ್ಗಳಲ್ಲಿ ಕೊಳ್ಳೇಗಾಲದ ಉತ್ತಮ ಕ್ಲಬ್ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರೋಟರಿ ಮಿಡ್ಟೌನ್ ಅಧ್ಯಕ್ಷ ಎಸ್.ಮಹೇಶ್, ಕ್ರೀಡಾಕೂಟದ ಸಂಚಾಲಕ ಜಿ.ಎಚ್,ಪ್ರವೀಣ್ಕುಮಾರ್, ಜಿಲ್ಲಾ ಸಹಾಯಕ ರಾಜ್ಯಪಾಲ ಬಿ.ಕೆ ಪ್ರಕಾಶ್, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯರಾದ ಹರ್ಷ, ಶಾಂತರಾಜು, ರಾಘವೇಂದ್ರ, ಮುಡಿಗುಂಡ ಶಾಂತರಾಜು, ಕಾವೇರಿ ರಿಕ್ರಿಯೇಷನ್ ಮಾಲ್ ಅಧ್ಯಕ್ಷ ಸುಂದರ್ರಾಜ್(ಪಾಪಣ್ಣ), ಉಮಾಶಂಕರ್, ವಿನಯ್, ಪುಟ್ಟಅರಸಶೆಟ್ಟಿ, ಡಿ.ವೆಂಕಟಚಾಲ, ಬಸವರಾಜು ಸಂಸ್ಥೆಯ ಎಲ್ಲಾ ಸದಸ್ಯರುಗಳು ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು.