ವಿಕ ಸುದ್ದಿಲೋಕ, ಗುಂಡ್ಲುಪೇಟೆ (ಚಾಮರಾಜನಗರ)
ಮಕ್ಕಳ ಮಾರಾಟ ಜಾಲದ ಮತ್ತೊಬ್ಬ ಆರೋಪಿ, ಗುಂಡ್ಲುಪೇಟೆ ಪಟ್ಟಣದಲ್ಲಿ ಮಗುವನ್ನು ಸಾಗಣೆ ಮಾಡುವ ಸಂದರ್ಭದಲ್ಲಿಯೇ ಶನಿವಾರ ಸಿಕ್ಕಿ ಬಿದ್ದಿದ್ದಾನೆ.
ರಟ್ಟಿನ ಬಾಕ್ಸ್ನಲ್ಲಿ ಮಗುವನ್ನು ಸಾಗಿಸುತ್ತಿದ್ದ ಫ್ರಾನ್ಸಿಸ್ ಬಂಧಿತ ಆರೋಪಿ. ಈತ ಮೈಸೂರಿನಲ್ಲಿ ಸಿಕ್ಕಿಬಿದ್ದಿರುವ ಮಕ್ಕಳ ಮಾರಾಟ ಜಾಲದ ಪ್ರಮುಖ ಆರೋಪಿ ಲ್ಯಾಬ್ಟೆಕ್ನಿಷಿಯನ್ ಉಷಾಳ ಪತಿ ಎಂದು ಪೊಲೀಸರು ತಿಳಿಸಿದ್ದಾರೆ. ಪಟ್ಟಣದ ಟ್ಯಾಕ್ಸಿ ಚಾಲಕನ ಸಮಯ ಪ್ರಜ್ಞೆ ಹಾಗೂ ಅನುಮಾನದಿಂದ ಫ್ರಾನ್ಸಿಸ್ ರೆಡ್ ಹ್ಯಾಂಡ್ಗೆ ಸಿಕ್ಕಿಬಿದ್ದಿದ್ದಾನೆ. ಇಲ್ಲದಿದ್ದರೆ ಮಗು ಕೇರಳದ ತ್ರಿಷೂರ್ಗೆ ಸಾಗಣೆಯಾಗುತ್ತಿತ್ತು. ಮೈಸೂರು ಕೇಂದ್ರಿತವಾಗಿ ನಡೆಯುತ್ತಿದ್ದ ಮಕ್ಕಳ ಮಾರಾಟ ಜಾಲವನ್ನು ಭೇದಿಸಿದ ಬಳಿಕವೂ ಅವರ ಕಾರ್ಯಾಚರಣೆ ನಿಂತಿಲ್ಲ ಎಂಬುದನ್ನು ಈ ಘಟನೆ ಸಾಬೀತು ಪಡಿಸಿದೆ.
ಶನಿವಾರ ಮಧ್ಯಾಹ್ನ ಪಟ್ಟಣದ ಟ್ಯಾಕ್ಸಿ ನಿಲ್ದಾಣದ ಬಳಿಗೆ ಕಾರಿನಲ್ಲಿ ಬಂದ ನಾಲ್ಕು ಮಂದಿ ತ್ರಿಷೂರ್ಗೆ ಡ್ರಾಪ್ ಮಾಡಲು ಬೇರೆ ಕಾರೊಂದನ್ನು ಬಾಡಿಗೆಗೆ ಕೇಳಿದ್ದಾರೆ. ಟ್ಯಾಕ್ಸಿ ಚಾಲಕ ಅನಿಲ್ಕುಮಾರ್ ಬಾಡಿಗೆಗೆ ಮಾತನಾಡಿದ್ದಾರೆ. ನಂತರ ತಾವು ಬಂದಿದ್ದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ರಟ್ಟಿನ ಬಾಕ್ಸ್ವೊಂದನ್ನು ಹಿಡಿದು ಬಾಡಿಗೆ ಕಾರು ಏರಲು ಮುಂದಾಗಿದ್ದಾನೆ. ಬಾಡಿಗೆ ಹೇಳಿದಾಕ್ಷಣ, ದರದ ಬಗ್ಗೆ ಚೌಕಾಶಿ ಮಾಡದೇ ಒಪ್ಪಿಕೊಂಡದ್ದು ಹಾಗೂ ಆ ಬಾಕ್ಸ್ ಹಿಡಿದುಕೊಂಡು ಬಂದಿದ್ದು, ಟ್ಯಾಕ್ಸಿ ಚಾಲಕನಿಗೆ ಅನುಮಾನಾಸ್ಪದವಾಗಿ ಕಂಡಿದೆ.
ಬಾಕ್ಸ್ನಲ್ಲಿ ಏನಿದೆ ಎಂಬುದನ್ನು ನಮಗೆ ತೋರಿಸಬೇಕು. ಲಗೇಜ್ ಪರಿಶೀಲಿಸದೇ ನಾವು ಬಾಡಿಗೆಗೆ ಬರಲ್ಲ ಎಂದು ಚಾಲಕ ಅನಿಲ್ಕುಮಾರ್ ಪಟ್ಟು ಹಿಡಿದಿದ್ದಾರೆ. ತಕ್ಷ ಣವೇ ಬಾಡಿಗೆ ಕಾರು ಏರಲು ಬಂದ ವ್ಯಕ್ತಿ ಬಾಕ್ಸ್ ಬಿಟ್ಟು ಓಡಲು ಪ್ರಯತ್ನಿಸಿದಾಗ ಚಾಲಕ ಅನಿಲ್ಕುಮಾರ್ ಹಾಗೂ ಇತರೆ ಸ್ನೇಹಿತರು ಆತನನ್ನು ಹಿಡಿದಿದ್ದಾರೆ. ಇನ್ನುಳಿದ ಇಬ್ಬರು ತಾವು ಬಂದಿದ್ದ ಕಾರಿನಲ್ಲೇ ಪರಾರಿಯಾಗಿದ್ದಾರೆ. ಆ ಬಾಕ್ಸ್ ತೆರೆದಾಗ ಪುಟಾಣಿ ಮಗು ಕಂಡು ಬಂದಿದೆ.
ಬಳಿಕ ಟ್ಯಾಕ್ಸಿ ಚಾಲಕರೇ ಸಿಕ್ಕಿಬಿದ್ದ ಆರೋಪಿ ಫ್ರಾನ್ಸಿಸ್ನನ್ನು ಪಟ್ಟಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಆದರೆ ಸಿಕ್ಕಿಬಿದ್ದ ಆರೋಪಿ ಪೊಲೀಸರಿಗೆ ವಿವರಿಸಿರುವ ಸಂಗತಿಯೇ ಬೇರೆ. ಮೈಸೂರಿನಲ್ಲಿರುವ ತಮ್ಮ ನರ್ಸಿಂಗ್ ಹೋಮ್ನಲ್ಲಿ ಹೆರಿಗೆಯಾಗಿದ್ದ ಮಗುವನ್ನು, ಅದರ ಪಾಲಕರ ವಶಕ್ಕೆ ಒಪ್ಪಿಸುವ ಸಲುವಾಗಿ ವಿಳಾಸ ಹುಡುಕಿಕೊಂಡು ಪಟ್ಟಣಕ್ಕೆ ಬಂದಿದ್ದೆ. ವಿಳಾಸ ಪತ್ತೆಯಾಗಲಿಲ್ಲ. ಆದರೆ ನನ್ನನ್ನು ಕರೆತಂದಿದ್ದ ಕಾರಿನವರು ಮೈಸೂರಿಗೆ ಕರೆದೊಯ್ಯದೇ ದಾರಿಯಲ್ಲಿ ಬಿಟ್ಟು ಹೋದರು. ಇದರಿಂದ ಮೈಸೂರಿಗೆ ಹೋಗಲು ಪಟ್ಟಣದಲ್ಲಿ ಕಾರು ಬಾಡಿಗೆಗೆ ಪಡೆಯಲು ಹೋದಾಗ ಇದೆಲ್ಲಾ ನಡೆಯಿತು ಎಂದಿದ್ದಾನೆ.
ಮಗು ಪತ್ತೆಯಾದ ವಿಷಯ ತಿಳಿದು ಪಟ್ಟಣದ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಕಾರ್ಯನಿರ್ವಾಹಕಿ ಎನ್.ಎಂ.ಸರಸ್ವತಿ, ಮಹಿಳಾ ಪೇದೆ ರಾಣಿ ಮತ್ತು ಸಾಂತ್ವನ ಕೇಂದ್ರದ ನೌಕರ ಮಹೇಶ್ ಮಗುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದರು. ಮಗುವಿಗೆ ಕೇವಲ 15 ದಿನವಾಗಿರಬಹುದು. ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಪೊಲೀಸ್ ಠಾಣೆಯಲ್ಲಿ ಸಾಂತ್ವನ ಕೇಂದ್ರದವರು ಮತ್ತು ಮಹಿಳಾ ಪೇದೆ ಮಗುವಿಗೆ ಬಾಟಲಿ ಹಾಲು ಕುಡಿಸಿ ಆರೈಕೆ ಮಾಡುತ್ತಿದ್ದಾರೆ.
ಆರು ಆರೋಪಿಗಳು ಮತ್ತೆ ಪೊಲೀಸ್ ಕಸ್ಟಡಿಗೆ
ಮೈಸೂರು ವರದಿ: ಮಕ್ಕಳ ಜಾಲದ ರೂವಾರಿಯಾಗಿರುವ ಉಷಾ ಅವರ ಪತಿ ಫ್ರಾನ್ಸಿಸ್ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಧೀಶರ ಎದುರು ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ಮತ್ತೆ ಪೊಲೀಸ್ ಕಸ್ಟಡಿಗೆ: ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದ ನಕಲಿ ವೈದ್ಯೆ ಉಷಾ , ನರ್ಸ್ ರೇಣುಕಾ, ಸಮಾಜ ಸೇವಕಿ ಶ್ರೀಮತಿ, ಯುವಕರಾದ ಮಹೇಶ್, ವೆಂಕಟೇಶ, ಮೋಹನ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಮತ್ತೆ ನ್ಯಾಯಾಧೀಶರ ಎದುರು ಹಾಜರು ಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
''ಈವರೆಗೆ ಜಾಲದ ಸದಸ್ಯರು ಮಾರಾಟ ಮಾಡಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದ್ದು, ಉಳಿದ ಮಕ್ಕಳ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಮಕ್ಕಳ ಪೋಷಕರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ'' ಎಂದು ಎಸ್ಪಿ ರವಿ ಡಿ.ಚನ್ನಣ್ಣನವರ್ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.
ಫೋಟೋಗಳಿವೆ
ಸಿಎಚ್ಎನ್5ಜಿಪಿಟಿ1
ಗುಂಡ್ಲುಪೇಟೆ ಪಟ್ಟಣದ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಕಾರ್ಯನಿರ್ವಾಹಕಿ ಸರಸ್ವತಿ ಮಡಿಲಲ್ಲಿ ಮಗು.
ಸಿಎಚ್ಎನ್5ಜಿಪಿಟಿ2
ಗುಂಡ್ಲುಪೇಟೆಯಲ್ಲಿ ಸಿಕ್ಕಿಬಿದ್ದಿರುವ ಮಕ್ಕಳ ಮಾರಾಟ ಜಾಲದ ಆರೋಪಿ ಫ್ರಾನ್ಸಿಸ್ ಪೊಲೀಸರ ವಶದಲ್ಲಿರುವ ಆರೋಪಿ ಫ್ರಾನ್ಸಿಸ್.
ಗುಂಡ್ಲುಪೇಟೆಯಲ್ಲಿ ಮಕ್ಕಳ ಮಾರಾಟ ಜಾಲದವರು ಮಗುವನ್ನು ಕೇರಳಕ್ಕೆ ಸಾಗಿಸಲು ರಟ್ಟಿನ ಬಾಕ್ಸ್ನಲ್ಲಿ ಪ್ಯಾಕ್ ಮಾಡಿರುವುದು.