ಆ್ಯಪ್ನಗರ

​ ಚಾಮರಾಜೇಶ್ವರ ಆಷಾಢ ರಥೋತ್ಸವ ಈ ಬಾರಿ ರದ್ದು

ನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರಸ್ವಾಮಿಯ ಆಷಾಢ ಮಾಸದ ರಥೋತ್ಸವ ಇದೇ ಪ್ರಥಮ ಬಾರಿಗೆ ರದ್ದಾಗುತ್ತಿದೆ. ಮಂಗಳವಾರ ಜಿಲ್ಲಾಧಿಕಾರಿ ಬಿ.ರಾಮು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ವಿಕ ಸುದ್ದಿಲೋಕ 24 May 2017, 8:48 pm
ಚಾಮರಾಜನಗರ: ನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರಸ್ವಾಮಿಯ ಆಷಾಢ ಮಾಸದ ರಥೋತ್ಸವ ಇದೇ ಪ್ರಥಮ ಬಾರಿಗೆ ರದ್ದಾಗುತ್ತಿದೆ.
Vijaya Karnataka Web
​ ಚಾಮರಾಜೇಶ್ವರ ಆಷಾಢ ರಥೋತ್ಸವ ಈ ಬಾರಿ ರದ್ದು

ಮಂಗಳವಾರ ಜಿಲ್ಲಾಧಿಕಾರಿ ಬಿ.ರಾಮು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪ್ರಗತಿಯಲ್ಲಿರುವುದು, ಅಲ್ಲದೇ ರಥಕ್ಕೆ ಬೆಂಕಿ ಬಿದ್ದು ಮುಕ್ಕಾಗಿರುವುದು ರಥೋತ್ಸವ ಈ ಬಾರಿ ನಡೆಯದಿರಲು ಕಾರಣ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಕಿಡಿಗೇಡಿಯೊಬ್ಬ ದೇವಾಲಯದ ಮುಂದೆ ನಿಲ್ಲಿಸಿದ್ದ ರಥಕ್ಕೆ ಬೆಂಕಿ ಹಚ್ಚಿದ್ದ. ಇದರಿಂದ ರಥದ ಒಂದಷ್ಟು ಭಾಗ ಸುಟ್ಟು ಹೋಗಿದ್ದು, ಹೀಗೆ ಮುಕ್ಕಾದ ರಥದಲ್ಲಿ ಉತ್ಸವ ನಡೆಸಬಾರದು, ಅದು ಅಪಶಕುನ ಎಂಬುದು ಧಾರ್ಮಿಕ ನಂಬಿಕೆ. ಆದ್ದರಿಂದ ಈ ಬಾರಿ ರಥೋತ್ಸವ ನಡೆಸುವುದು ಬೇಡ ಎಂಬುದಾಗಿ ಧಾರ್ಮಿಕ ದತ್ತಿ ಇಲಾಖೆ ತಾಲೂಕು ಮುಜರಾಯಿ ಇಲಾಖೆಗೆ ತಿಳಿಸಿತ್ತು.

ಅಲ್ಲದೇ, ಜಿಲ್ಲಾಧಿಕಾರಿ ಬಿ. ರಾಮು ಅವರು ಮಂಗಳವಾರ ನಗರದ ಸಂಘಟನೆಗಳ ಮುಖಂಡರ ಸಭೆ ಕರೆದು, ಈ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಕೆಲವರು ದೊಡ್ಡ ರಥ ಬಿಟ್ಟು ಚಿಕ್ಕ ರಥಗಳನ್ನು ನಡೆಸಬಹುದಲ್ಲ ಎಂಬ ಸಲಹೆ ನೀಡಿದರು.

ಇದಕ್ಕೆ ಪ್ರಮುಖರು ವಿರೋಧ ವ್ಯಕ್ತಪಡಿಸಿದರಲ್ಲದೇ, ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವ ಈ ಸಂದರ್ಭದಲ್ಲಿ ವಿಗ್ರಹವನ್ನು ಹೊರ ತರುವುದು ಸಲ್ಲ. ಅದು ಶ್ರೇಯಸ್ಸಲ್ಲ ಎಂದರು.
ಸಭೆಯಲ್ಲಿದ್ದ ಎಲ್ಲರ ಅಭಿಪ್ರಾಯ ಪರಿಗಣಿಸಿ, ಜು. 9ರಂದು ನಡೆಯಬೇಕಾಗಿದ್ದ ಈ ಬಾರಿಯ ಆಷಾಢ ಮಾಸದ ರಥೋತ್ಸವವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.
ಶಾಸಕ ಸಿ. ಪುಟ್ಟರಂಗಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಗಾಯತ್ರಿ, ತಹಸೀಲ್ದಾರ್ ಪುರಂದರ, ಮುಖಂಡರಾದ ಶಾ. ಮುರುಳಿ, ಶ್ರೀನಿವಾಸಗೌಡ, ಪುರುಷೋತ್ತಮ, ಶಾಂತಲಾ, ಮಂಜೇಶ್, ನಾಗರಾಜ ದೀಕ್ಷಿತ್, ರಾಮಕೃಷ್ಣ ಹಾಜರಿದ್ದರು.


179 ವರ್ಷದಲ್ಲಿ ಇದೇ ಪ್ರಥಮ
ಪ್ರತಿ ವರ್ಷ ಆಷಾಢ ಮಾಸದ ಪೂರ್ಣಿಮೆಯಲ್ಲಿ ಚಾಮರಾಜೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತ ಬಂದಿದೆ. ಆದರೆ, ಈ ಬಾರಿಯ ಆಷಾಢದಲ್ಲಿ ರಥೋತ್ಸವದ ಸಡಗರ ಇರುವುದಿಲ್ಲ ಎಂಬುದು ಭಕ್ತರಿಗೆ ಬೇಸರದ ಸಂಗತಿ.
ಚಾಮರಾಜೇಶ್ವರ ದೇವಾಲಯವನ್ನು ಚಾಮರಾಜ ಒಡೆಯರ್ ಅವರ ನೆನಪಿನಲ್ಲಿ ಅವರ ಪುತ್ರ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 1826ರಲ್ಲಿ ನಿರ್ಮಾಣ ಮಾಡಿದರು. ನಂತರ 1838ರಲ್ಲಿ (ಶಾಲಿವಾಹನ ಶಕ 1759) ಮೈಸೂರು ಅರಸರ ಸೇವಕರಾಗಿದ್ದ ಜಿಲ್ಲಾ ಭಕ್ಷಿ ಬಸವರಾಜೇ ಅರಸು ಎಂಬುವರು ರಥವನ್ನು ಮಾಡಿಸಿಕೊಟ್ಟಿದ್ದರಂತೆ. ಆ ಪ್ರಕಾರ ಚಾಮರಾಜೇಶ್ವರ ರಥ ನಿರ್ಮಾಣವಾಗಿ 179 ವರ್ಷಗಳಾಗಿದೆ. ಅಂದಿನಿಂದ ಪ್ರತಿ ವರ್ಷ ನಡೆದುಕೊಂಡು ಬರುತ್ತಿದ್ದ ರಥೋತ್ಸವ ಈ ಬಾರಿ ನಡೆಯುತ್ತಿಲ್ಲ ಎಂಬುದು ಭಕ್ತರಲ್ಲಿ ಬೇಸರ ಮೂಡಿಸಿದೆ.

15 ದಿನದ ಹಿಂದೆಯೇ ವಿಕದಲ್ಲಿ ವರದಿ
‘ಚಾಮರಾಜೇಶ್ವರ ರಥೋತ್ಸವ ಈ ಬಾರಿ ಅನುಮಾನ’ ಎಂಬ ಶೀರ್ಷಿಕೆಯಡಿ ವಿಜಯ ಕರ್ನಾಟಕ ಮೇ 11ರ ಸಂಚಿಕೆಯಲ್ಲೇ ವಿಸ್ತೃತ ವರದಿ ಪ್ರಕಟಿಸಿತ್ತು. ಅದೀಗ ನಿಜವಾಗಿದೆ. ರಥ ಮುಕ್ಕಾಗಿರುವುದು ಹಾಗೂ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ರಥೋತ್ಸವ ನಡೆಸುವುದು ಸೂಕ್ತವಲ್ಲ ಎಂಬ ವಿಚಾರವನ್ನು ಧಾರ್ಮಿಕ ದತ್ತಿ ಇಲಾಖೆ ಈ ಹಿಂದೆಯೇ ವೌಖಿಕವಾಗಿ ತಿಳಿಸಿತ್ತು. ಇದೀಗ ಅಧಿಕೃತ ಆದೇಶದ ಹಿನ್ನೆಲೆಯಲ್ಲಿ ಸಭೆ ನಡೆಸಿ, ಪ್ರಮುಖರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ