ವಿಕ ಸುದ್ದಿಲೋಕ ಚಾಮರಾಜನಗರ
ಮಧುಮೇಹ ನಿಯಂತ್ರಣಕ್ಕೆ ಪ್ರತಿದಿನ ವ್ಯಾಯಾಮ ಮಾಡುವುದೇ ಮದ್ದು ಎಂದು ಚಾಮರಾಜನಗರ ಸರಕಾರಿ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶರತ್ ಕುಮಾರ್ ಜೈಕಾರ್ ತಿಳಿಸಿದರು.
ನಗರದ ಜೆಎಸ್ಎಸ್ ನರ್ಸಿಂಗ್ ಕಾಲೇಜಿನಿಂದ ಜೆಎಸ್ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ 'ವಿಶ್ವಮಧುಮೇಹ ದಿನಾಚರಣೆ' ಉದ್ಘಾಟಿಸಿ ಮಾತನಾಡಿದರು.
ಮಧುಮೇಹ ವಂಶವಾಹಿ ಕಾಯಿಲೆಯಾಗಿದ್ದು, ಸೇವಿಸುವ ಆಹಾರದಲ್ಲಿ ವ್ಯತ್ಯಾಸವುಂಟಾದಾಗ ಇದು ಉಲ್ಬಣಗೊಳ್ಳುತ್ತದೆ. ಇದರ ನಿಯಂತ್ರಣಕ್ಕೆ ಸಕಾಲಕ್ಕೆ ಇನ್ಸುಲಿನ್ ಹಾಕಿಕೊಳ್ಳುವುದು, ಪ್ರತಿದಿನ ಎರಡೂ ವರೆ ತಾಸು ವ್ಯಾಯಾಮ ಮಾಡಬೇಕು. ಮುಂದಿನ ಭಾವಿ ಶುಶ್ರೂಷಕರಾಗಲಿರುವ ನೀವು ಮಧುಮೇಹದ ತಡೆಗಟ್ಟುವ ಕುರಿತು ಸಮಗ್ರ ಮಾಹಿತಿ ಪಡೆಯಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷ ತೆ ವಹಿಸಿದ್ದ ಪ್ರಾಂಶುಪಾಲ ವಿನಯ್ಕುಮಾರ್ ಮಾತನಾಡಿ, ಈಚಿನ ಜೀವನಶೈಲಿಯಲ್ಲಿ ಉಂಟಾಗುವ ಬದಲಾವಣೆಗಳಿಂದ ವಯಸ್ಕರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರಲ್ಲೂ ಮಧುಮೇಹ ಕಾಣಿಸಿಕೊಳ್ಳುತ್ತದೆ. ನೀಲಾಕಾಶದಲ್ಲಿರುವ ವೃತ್ತದಂತೆ ಪ್ರತಿಯೊಬ್ಬರು ಇದರ ನಿರ್ಮೂಲನಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜೆಎಸ್ಎಸ್ ನರ್ಸಿಂಗ್ ಶಾಲೆಯ ಸಿಬ್ಬಂದಿ, ಶುಶ್ರೂಷಕ ವಿದ್ಯಾರ್ಥಿಗಳು ಹಾಜರಿದ್ದರು.