ಮಣಿಕಂಠ ಬೇಗೂರು
ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ವಲಯದಲ್ಲಿ ಬಣ ರಾಜಕೀಯ ಜೋರಾಗಿದೆ.
ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮದಲ್ಲೂ ಅದು ಗೋಚರಿಸಿದ್ದು, ಮುಖಂಡರಲ್ಲೂ ಕಸಿವಿಸಿ ಉಂಟು ಮಾಡಿರುವುದು ಸುಳ್ಳಲ್ಲ.
ಇವೆಲ್ಲದಕ್ಕೂ ಮುಖ್ಯ ಕಾರಣ ಬೇಗೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನ !
ಬೇಗೂರು ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತರ ಸಂಖ್ಯೆ ಹೆಚ್ಚಾಗಿದ್ದು, ಅದೇ ಪಕ್ಷದ ಚೇತನ್ ಅಧ್ಯಕ್ಷರಾಗಿದ್ದಾರೆ. ಇವರ ಆಯ್ಕೆ ಸಂದರ್ಭದಲ್ಲಿ ಅಧಿಕಾರ ಹಂಚಿಕೆಯ ಒಪ್ಪಂದವನ್ನು ಆಗ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅಧ್ಯಕ್ಷತೆಯಲ್ಲಿ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ. ಇದೀಗ ಒಪ್ಪಂದದ ಅವಧಿ ಮುಗಿದಿದ್ದು, ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೇರಲು ರಾಜುಶೆಟ್ಟಿ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಇದಕ್ಕೆ ಚೇತನ್ ಅವಕಾಶ ಮಾಡಿಕೊಡುತ್ತಿಲ್ಲ. ಯಾವ ಒಪ್ಪಂದವೂ ನಡೆದಿಲ್ಲ, ಹೀಗಾಗಿ ತಾವೇ ಮುಂದುವರಿಯುವುದಾಗಿ ಅವರು ಹೇಳುತ್ತಿದ್ದಾರೆ ಎನ್ನಲಾಗಿದೆ.
ಈ ವಿಚಾರವೇ ಪಕ್ಷದಲ್ಲಿ ಬಣವನ್ನು ಸೃಷ್ಟಿಸಿದ್ದು, ಕಾಂಗ್ರೆಸ್ನ ಎಲ್ಲ ಕಾರ್ಯಕ್ರಮದಲ್ಲೂ ಅದು ಎದ್ದು ಕಾಣುತ್ತಿದೆ. ಹೊಂದಾಣಿಕೆ ಕೊರತೆ ಪರಿಣಾಮ ಆಂತರಿಕ ಸಂಘರ್ಷ ಶುರುವಾಗಿದೆ.
ಸಚಿವರ ತವರು ಕ್ಷೇತ್ರ: ಹೇಳಿ, ಕೇಳಿ ಇದು ಹಾಲಿ ಸಚಿವೆ ಗೀತಾ ಮಹದೇವಪ್ರಸಾದ್ ಅವರ ತವರು ಕ್ಷೇತ್ರ. ಇಂಥ ಪರಿಸ್ಥಿತಿಯಲ್ಲಿ ಸ್ಥಳೀಯ ಮುಖಂಡರ ಒಳ ಬೇಗುದಿಯು ಸಚಿವರನ್ನೂ ಮುಜುಗರಕ್ಕೀಡು ಮಾಡಿದೆ.
ಬೇಗೂರು ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮವು ಸ್ಥಳೀಯ ಮುಖಂಡರಲ್ಲಿನ ಹೊಂದಾಣಿಕೆ ಕೊರತೆ ಪರಿಣಾಮ ನೀರಸವಾಗಿತ್ತು. ಕಾರ್ಯಕ್ರಮಕ್ಕೆ ಬೆಳಗ್ಗೆ 9ಕ್ಕೆ ಚಾಲನೆ ಸಿಗಬೇಕಿತ್ತಾದರೂ 11 ಗಂಟೆಯಾದರೂ ಯಾರೂ ಪತ್ತೆ ಇರಲಿಲ್ಲ.
ಸ್ಥಳೀಯ ಮುಖಂಡರು ಬೆರಳೆಣಿಕೆ ಸಂಖ್ಯೆಯಲ್ಲಿ ಸೇರಿರುವುದನ್ನು ಕಂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ. ಮುನಿರಾಜು, ತಾ.ಪಂ. ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು ಇತರರು ಬೇಸರಿಸಿಕೊಂಡದ್ದು ಕಂಡು ಬಂತು.
ಗ್ರಾಪಂನಲ್ಲಿ ಬಲಾಬಲ
ಬೇಗೂರು ಗ್ರಾ.ಪಂ.ನಲ್ಲಿ 15 ಸದಸ್ಯ ಬಲವಿದೆ. ಈ ಪೈಕಿ ಕಾಂಗ್ರೆಸ್ ಬೆಂಬಲಿತ 9 ಮಂದಿ ಹಾಗೂ ಬಿಜೆಪಿ ಬೆಂಬಲಿತ 6 ಮಂದಿ ಸದಸ್ಯರಿದ್ದಾರೆ.
ಕಾಂಗ್ರೆಸ್ ಬೆಂಬಲಿತರ ಸಂಖ್ಯಾಬಲ ಹೆಚ್ಚಿದ್ದ ಹಿನ್ನೆಲೆಯಲ್ಲಿ ಸಹಜವಾಗೇ ಮೊದಲ ಎರಡೂವರೆ ವರ್ಷಕ್ಕೆ ಬಿ.ಎಸ್. ಚೇತನ್ ಅವರನ್ನು ಹಾಗೂ ಉಳಿದ ಇನ್ನೆರಡುವರೆ ವರ್ಷಕ್ಕೆ ರಾಜುಶೆಟ್ಟಿ ಅವರಿಗೆ ಅಧಿಕಾರ ಹಂಚಿಕೆ ಮಾಡಲು ಆಗಿನ ಉಸ್ತುವಾರಿ ಸಚಿವರಾಗಿದ್ದ ಎಚ್ಚೆಸ್ಸೆಂ ನಿರ್ಧರಿಸಿದ್ದರು ಎನ್ನಲಾಗಿದೆ. ಇದೀಗ ಆ ಅವಧಿ ಮುಗಿದಿದ್ದು, ರಾಜೀನಾಮೆ ಸಲ್ಲಿಸಿ, ತಮಗೆ ಅವಕಾಶ ಮಾಡಿಕೊಡುವಂತೆ ರಾಜುಶೆಟ್ಟಿ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಲ್ಲಿಯೂ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇದಕ್ಕೆ ಚೇತನ್ ಅವರು ಒಪ್ಪುತ್ತಿಲ್ಲ. ಹೀಗಾಗಿ ಬಣ ರಾಜಕೀಯ ಜೋರಾಗಿರುವುದು ಸುಳ್ಳಲ್ಲ.
ಗ್ರಾ.ಪಂ.ನಲ್ಲಿ ಹೆಚ್ಚು ಕಾಂಗ್ರೆಸ್ ಬೆಂಬಲಿತರು ಗೆಲ್ಲಲು ನನ್ನ ಶ್ರಮ ಹೆಚ್ಚಾಗಿದೆ. ಈ ವಿಚಾರ ತಿಳಿದೇ ಎಚ್.ಎಚ್. ಮಹದೇವಪ್ರಸಾದ್ ಅವರು ನನ್ನ ಆಯ್ಕೆ ಮಾಡಿಸಿದರು. ಆ ಸಂದರ್ಭದಲ್ಲಿ ಯಾವುದೇ ಅಧಿಕಾರ ಹಂಚಿಕೆಯ ಮಾತುಕತೆ ನಡೆದಿಲ್ಲ. ಅಂತಹ ಪಿತೂರಿಗಳಿಗೆ ತಾವು ಮಣಿಯುವುದಿಲ್ಲ.
- ಚೇತನ್, ಗ್ರಾ. ಪಂ. ಅಧ್ಯಕ್ಷ ಬೇಗೂರು.
ಗ್ರಾ.ಪಂ.ನಲ್ಲಿ ಆಡಳಿತ ಸರಿಯಾಗಿ ನಡೆಯುತ್ತಿಲ್ಲ. ಬಸವ ವಸತಿ ಯೋಜನೆಯ ಆಶ್ರಯ ಮನೆಗಳ ಹಂಚಿಕೆಯಾಗದೆ ವಾಪಸ್ ಹೋಗಿದೆ. ಕಾರ್ಯಕರ್ತರ ಜತೆ ಅಧ್ಯಕ್ಷರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಇಷ್ಟಕ್ಕೂ ಮಿಗಿಲಾಗಿ ಈ ಹಿಂದೆಯೇ ಅಧಿಕಾರ ಹಂಚಿಕೆಯ ಮಾತುಕತೆ ನಡೆದಿದೆ. ಇದಕ್ಕೆ ಮುಖಂಡರು ಸಾಕ್ಷಿ ಇದ್ದಾರೆ. ಇದಕ್ಕೆ ಒಪ್ಪದಿದ್ದರೆ ಏನು ಮಾಡಬೇಕೆಂಬುದು ನಮಗೆ ಗೊತ್ತಿದೆ.
- ರಾಜುಶೆಟ್ಟಿ, ಗ್ರಾ.ಪಂ ಸದಸ್ಯ.
==