Please enable javascript.ಅದ್ಧೂರಿ ಗಣೇಶ ವಿಸರ್ಜನೆ ಮೆರವಣಿಗೆ - ಅದ್ಧೂರಿ ಗಣೇಶ ವಿಸರ್ಜನೆ ಮೆರವಣಿಗೆ - Vijay Karnataka

ಅದ್ಧೂರಿ ಗಣೇಶ ವಿಸರ್ಜನೆ ಮೆರವಣಿಗೆ

Vijaya Karnataka Web 6 Nov 2014, 5:00 am
Subscribe

ನಗರದ ರಥದ ಬೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಗ್ರಹ ವಿಸರ್ಜನಾ ಮಹೋತ್ಸವ ಬುಧವಾರ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಶಾಂತಿಯುತವಾಗಿ ನೆರವೇರಿತು.

ಅದ್ಧೂರಿ ಗಣೇಶ ವಿಸರ್ಜನೆ ಮೆರವಣಿಗೆ
ಚಾಮರಾಜನಗರ: ನಗರದ ರಥದ ಬೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಗ್ರಹ ವಿಸರ್ಜನಾ ಮಹೋತ್ಸವ ಬುಧವಾರ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಶಾಂತಿಯುತವಾಗಿ ನೆರವೇರಿತು.

ಬೆಳಗ್ಗೆ 10ಕ್ಕೆ ಗುರುನಂಜಶೆಟ್ಟರಛತ್ರದ ಮುಂಭಾಗದಿಂದ ಹೊರಟ ಮೆರವಣಿಗೆಗೆ ಮಂಡಳಿ ಅಧ್ಯಕ್ಷ ಶಿವಣ್ಣ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ನಂತರ ಅಲಂಕಾರಿಕ ಪಲ್ಲಕ್ಕಿಯಲ್ಲಿ ಇಟ್ಟ ‘ ಬ್ರಹ್ಮಾಂಡವನ್ನು ಕೈಯಲ್ಲಿ ಹಿಡಿದ ಗಣೇಶ’ನ ವಿಗ್ರಹವನ್ನು ಪೊಲೀಸ್ ಸರ್ಪಗಾವಲಿನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಪ್ರತಿ ವರ್ಷದಂತೆ ಮೆರವಣಿಗೆಯು ಕೆ.ಪಿ. ಮೊಹಲ್ಲಾ, ಅಂಬೇಡ್ಕರ್ ಬಡಾವಣೆ, ದೇವಾಂಗ ಬೀದಿ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ರಸ್ತೆ, ಭ್ರಮರಾಂಬ ಬಡಾವಣೆ ಸೇರಿದಂತೆ ಇತರೆ ಬೀದಿಗಳಲ್ಲಿ ಸಾಗಿ ಮುನ್ನಡೆಯಿತು.

ದೀಪಾಲಂಕಾರ ಬೆರಗು: ಮೆರವಣಿಗೆ ಸಾಗುವ ಕೆಲ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿತ್ತು. ಗಣಪತಿ ಮಂಡಳಿಗೆ ಇದು 53 ಮಹೋತ್ಸವ. ಮೆರವಣಿಗೆ ಸಂದರ್ಭದಲ್ಲಿ ನಂದಿ ಧ್ವಜ, ಮಂಗಳವಾದ್ಯ, ಬೀಸು ಕಂಸಾಳೆ, ಡೊಳ್ಳು ಕುಣಿತ, ಕಾಡು ಮಕ್ಕಳ ಕುಣಿತ, ವೀರಗಾಸೆ, ಗಾಡಿ ಗೊಂಬೆ, ಒನಕೆ ಕುಣಿತ, ಪೂಜಾ ಕುಣಿತ ಸೇರಿದಂತೆ 20ಕ್ಕೂ ಹೆಚ್ಚು ಕಲಾ ಮೇಳಗಳು ಪಾಲ್ಗೊಂಡು ಮೆರಗು ನೀಡಿದವು. ಕೆಲ ಕಲಾ ತಂಡಗಳ ಪ್ರದರ್ಶನ ಅತ್ಯಾಕರ್ಷಕವಾಗಿತ್ತು.

ಬದಲಿ ಸಂಚಾರ ವ್ಯವಸ್ಥೆ: ಡಿವಿಯೇಷನ್ ರಸ್ತೆ, ಚಿಕ್ಕ ಅಂಗಡಿ ಬೀದಿ, ಸಂತೇಮರಹಳ್ಳಿ ವತ್ತ ಭಾಗದ ರಸ್ತೆಗಳಲ್ಲಿ ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಬದಲಿ ಮಾರ್ಗದಲ್ಲಿ ವಾಹನಗಳನ್ನು ಬಿಡಲಾಯಿತು.

ಮುನ್ನೆಚ್ಚರಿಕೆ ಕ್ರಮವಾಗಿ ಎಸ್ಪಿ ರಂಗಸ್ವಾಮಿನಾಯಕ್ ನೇತೃತ್ವದಲ್ಲಿ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಸಾಗುವ ಬೀದಿಗಳಲ್ಲಂತೂ ಭಕ್ತರಿಗಿಂತ ಪೊಲೀಸರೇ ಹೆಚ್ಚಾಗಿದ್ದರು. ಸೂಕ್ಷ್ಮ ಪ್ರದೇಶಗಳಲ್ಲಿ ಚಾಮರಾಜ ಕಮಾಂಡೊ ಪಡೆ, ರಾಜ್ಯ ವಿಶೇಷ ಭದ್ರತಾ ಪಡೆಯ ಪೊಲೀಸರನ್ನು ಶಸ್ತ್ರ ಸಮೇತ ನಿಯೋಜಿಸಲಾಗಿತ್ತು. ಸಾವಿರಕ್ಕೂ ಹೆಚ್ಚು ಪೊಲೀಸರು ನಗರದ ಅಲ್ಲಲ್ಲಿ ನಿಯೋಜನೆ ಗೊಂಡಿದ್ದರು.

ಪೊಲೀಸ್ ವಾಹನಗಳು ನಗರದೆಲ್ಲೆಡೆ ಗಸ್ತು ತಿರುಗತ್ತಲೇ ಇದ್ದವು. ಉತ್ಸವದ ವೇಳೆ ಗಣಪತಿ ಮಂಡಳಿಯ ಪದಾಧಿಕಾರಿಗಳು, ಯುವ ಮುಖಂಡರು ಪಾಲ್ಗೊಂಡಿದ್ದರು.

ಅರ್ಧ ಶತಮಾನದ ಇತಿಹಾಸ
ನಗರದ ಗಣಪತಿ ಮಂಡಳಿಗೆ ಅರ್ಧ ಶತಮಾನದ ಇತಿಹಾಸವಿದೆ. 1961ರಲ್ಲಿ ಮಂಡಳಿಯನ್ನು ಸ್ಥಾಪಿಸಿ, ಅಲ್ಲಿಂದ ಪ್ರತಿ ವರ್ಷವೂ ಗಣೇಶನನ್ನು ಪ್ರತಿಷ್ಠಾಪಿಸುತ್ತ ಬರಲಾಗುತ್ತಿದೆ.

ಅದ್ಧೂರಿಯಾಗಿ ವಿಸರ್ಜಿಸಲಾಗುತ್ತಿದೆ. 70ರ ದಶಕದಲ್ಲಿ ಇಲ್ಲಿನ ಗಣೇಶ ವಿಗ್ರಹವನ್ನು ವಿಸರ್ಜನೆ ಮಾಡುವ ಸಂದರ್ಭ ಕೆಲ ಮಾರ್ಗಗಳನ್ನು ಬದಲಾಯಿಸ ಬೇಕೆಂಬುದಾಗಿ ಒಂದು ಸಮುದಾಯ ಪಟ್ಟು ಹಿಡಿದಿತ್ತು. ಆದರೆ, ಗಣಪತಿ ಮಂಡಳಿ ಇದಕ್ಕೆ ಒಪ್ಪಿರಲಿಲ್ಲ. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿ, ಸುಪ್ರೀಂಕೋರ್ಟ್‌ನಲ್ಲಿ ಮಾಮೂಲಿ ಮಾರ್ಗದಲ್ಲಿ ಮೆರವಣಿಗೆ ನಡೆಯಲಿ ಎಂಬ ತೀರ್ಪು ಹೊರ ಬಿದ್ದಿತ್ತು. ನಂತರದಲ್ಲಿ ಒಂದೆರಡು ವರ್ಷ ವಿಸರ್ಜನೆ ವೇಳೆ ಕೋಮುಗಲಭೆ ಸೃಷ್ಟಿಯಾಗಿತ್ತಲ್ಲದೇ ಕರ್ಫ್ಯೂ ವಿಧಿಸಲಾಗಿತ್ತು. ಹೀಗಾಗಿ ಇಲ್ಲಿನ ಗಣೇಶ ವಿಸರ್ಜನೆಯೆಂದರೆ ಭಾರಿ ಪೊಲೀಸ್ ಬಂದೋಬಸ್ತ್ ಇರುತ್ತದೆ. ಈ ಬಾರಿಯೂ ಬಿಗಿ ಪೊಲೀಸ್ ಪಹರೆಯಲ್ಲೇ ಮೆರವಣಿಗೆ ನಡೆಯಿತು. ಅದೃಷ್ಟವಶಾತ್ ಈಚಿನ ವರ್ಷಗಳಲ್ಲಿ ಶಾಂತಿಯುತವಾಗಿದೆ.
ಅದ್ಧೂರಿ, ಗಣೇಶ, ವಿಸರ್ಜನೆ, ಮೆರವಣಿಗೆ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ