ಚಾಮರಾಜನಗರ: ತಾಲೂಕಿನ ಹರವೆ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡ ಚಿರತೆ ಸೆರೆಗೆ ಭಾನುವಾರ ಅರಣ್ಯ ಇಲಾಖೆ ಬೋನ್ ಇಟ್ಟಿದೆ.
ಗ್ರಾಮದಿಂದ ಮೇಗಲಹುಂಡಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಗ್ರಾಮದ ನಿವಾಸಿ ಪುಟ್ಟ ಸುಬ್ಬಣ್ಣ ಅವರ ಜಮೀನಿಗೆ ಹೊಂದಿಕೊಂಡ ಮುಳ್ಳುಕಂಟಿಗಳ ಪೊದೆಯಲ್ಲಿ ಚಿರತೆ ಅಡಗಿದೆ ಎನ್ನಲಾಗಿದೆ. ಇದೇ ರಸ್ತೆಯಲ್ಲಿ ರೈತರ ಜಮೀನುಗಳಿದ್ದು, ಜಾನುವಾರುಗಳು ಹೆದರಿ ಓಡಿಹೋಗುತ್ತಿದ್ದರಿಂದ ಈ ಪ್ರದೇಶದಲ್ಲಿ ಕಾಡುಪ್ರಾಣಿ ವಾಸವಾಗಿರಬಹುದೇನೋ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು.
ಶನಿವಾರ ಮಧ್ಯಾಹ್ನ ಗ್ರಾಮದ ಮಹದೇವಪ್ಪ ಹಾಗೂ ಗಿರೀಶ್ ಎಂಬುವವರು ಅದೇ ಜಾಗದಲ್ಲಿ ಚಿರತೆ ಮರದಿಂದ ಜಿಗಿಯುತ್ತಿರುವುದನ್ನು ಕಂಡು ಗಾಬರಿಯಾಗಿ ಗ್ರಾಮದ ಮುಖಂಡರ ಮೂಲಕ ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.
ವಿಚಾರ ತಿಳಿದ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಚಿರತೆ ಅಡಗಿರುವ ಸ್ಥಳ ಪರಿಶೀಲಿಸಿ, ಸೆರೆಹಿಡಿಯಲು ಬೋನ್ ಇಡುವುದಾಗಿ ತಿಳಿಸಿದ್ದರು. ಅದರಂತೆ ಭಾನುವಾರ ಮಧ್ಯಾಹ್ನ 12 ಗಂಟೆಯಲ್ಲಿ ಬೋನ್ ಇಟ್ಟು ತೆರಳಿದ್ದಾರೆ.
ಚಿರತೆ ಕಾಣಿಸಿಕೊಂಡಿರುವುದು ಆತಂಕ ತಂದಿದೆ. ಅರಣ್ಯ ಇಲಾಖೆ ಮುಂಜಾಗ್ರತೆ ವಹಿಸಿ, ಚಿರತೆ ಹಾವಳಿಯಿಂದ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.