ಆ್ಯಪ್ನಗರ

140 ಎಎನ್‌ಎಂ ಹುದ್ದೆ ಖಾಲಿ !

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸಿಬ್ಬಂದಿ ಕೊರತೆ ಪರಿಣಾಮ ಜನತೆ ಪರದಾಡುವಂತಾಗಿದೆ.

Vijaya Karnataka 13 Oct 2019, 5:00 am
ಹರವೆ ಮಹೇಶ್‌ ಚಾಮರಾಜನಗರ
Vijaya Karnataka Web CHN12HM1_18


ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸಿಬ್ಬಂದಿ ಕೊರತೆ ಪರಿಣಾಮ ಜನತೆ ಪರದಾಡುವಂತಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ಎಎನ್‌ಎಂ (ಕಿರಿಯ ಮಹಿಳಾ ಆರೋಗ್ಯ ಸಹಾಯಕರು) ಹುದ್ದೆಗಳು ಬಹುತೇಕ ಖಾಲಿ ಹುದ್ದೆ ಇರುವುದು ಸಮಸ್ಯೆಗೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಒಟ್ಟು 60 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅದರ ವ್ಯಾಪ್ತಿಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಕಾರ್ಯನಿರ್ವಹಿಸಬೇಕು. ಉಪ ಕೇಂದ್ರಗಳ ಸಿಬ್ಬಂದಿ ತಮ್ಮ ವ್ಯಾಪ್ತಿಯ ಪ್ರದೇಶಗಳಿಗೆ ತೆರಳಿ ಅಲ್ಲಿನ ಜನರ ಆರೋಗ್ಯ ವಿಚಾರಣೆ, ಅನಾರೋಗ್ಯಕ್ಕೆ ಒಳಗಾಗಿದ್ದರೆ ಚಿಕಿತ್ಸೆ ಒದಗಿಸಬೇಕು.

ಇದರೊಂದಿಗೆ ಕಾಲ ಕಾಲಕ್ಕೆ ಚುಚ್ಚುಮದ್ದು ಕಾರ್ಯಕ್ರಮದ ಬಲವರ್ಧನೆ, ಗರ್ಭಿಣಿ ಹಾಗೂ ಬಾಣಂತಿಯರಲ್ಲಿಉಂಟಾಗುವ ರಕ್ತಹೀನತೆ ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುವುದು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಕರ್ತವ್ಯ. ಆದರೆ, ಈ ಸಿಬ್ಬಂದಿಯ ನೇಮಕಾತಿ ಸರಕಾರದ ಮಟ್ಟದಲ್ಲೇ ಆಗಬೇಕಿರುವುದರಿಂದ ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ.

ಮಂಜೂರು ಹುದ್ದೆ ಎಷ್ಟು?: ಜಿಲ್ಲೆಗೆ 262 ಮಂದಿ ಕಿರಿಯ ಆರೋಗ್ಯ ಸಹಾಯಕಿಯರ ಹುದ್ದೆಗಳು ಮಂಜೂರಾಗಿದ್ದು, 116 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು 140 ಸಿಬ್ಬಂದಿ ಕೊರತೆಯಿದೆ.

ಜಿಲ್ಲೆಯಲ್ಲಿಮಂಜೂರಾದ ಹುದ್ದೆಗಳಿಗೆ ತಕ್ಕಂತೆ ಸಿಬ್ಬಂದಿ ನೇಮಕಾತಿಯಾಗದ ಹಿನ್ನೆಲೆಯಲ್ಲಿ ಒಂದು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಇಲ್ಲದ ಕಡೆಗೆ ವಾರದಲ್ಲಿ 2 ಅಥವಾ 3 ದಿನ ನಿಯೋಜನೆ ಮಾಡಲಾಗುತ್ತಿದೆ. ಇದರಿಂದ ರೋಗಿಗಳಿಗೆ ಸಮರ್ಪಕವಾದ ಚಿಕಿತ್ಸೆ ಸಿಗುತ್ತಿಲ್ಲ. ಗ್ರಾಮೀಣ ಜನರು ಹೋಬಳಿ ಕೇಂದ್ರ ಅಥವಾ ನಗರ, ಪಟ್ಟಣ ಪ್ರದೇಶದ ಆಸ್ಪತ್ರೆಗಳಿಗೆ ಎಡತಾಕುವ ಸ್ಥಿತಿಯಿದೆ.

112ಕ್ಕೆ ಸ್ವಂತ ಕಟ್ಟಡ: ಜಿಲ್ಲೆಯಲ್ಲಿಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಕೊರತೆ ಒಂದೆಡೆಯಾದರೆ, ಅವರು ಅಲ್ಲೇ ವಾಸ್ತವ್ಯ ಹೂಡಲು ನಿರ್ಮಾಣವಾಗಿರುವ ಉಪಕೇಂದ್ರಗಳಿಗೂ ಅಗತ್ಯಕ್ಕೆ ತಕ್ಕ ಕಟ್ಟಡಗಳು ಇಲ್ಲ. ಮತ್ತೊಂದೆಡೆ ಇರುವ ಕೇಂದ್ರಗಳ ಕಟ್ಟಡಗಳು ಪಾಳು ಬಿದ್ದಿರುವ ನಿದರ್ಶನವೂ ಇದೆ. ಇಲಾಖೆ ಅಂಕಿ ಅಂಶಪ್ರಕಾರ 112 ಕ್ಕೆ ಸ್ವಂತ ಕಟ್ಟಡವಿದ್ದು, 140 ಉಪ ಕೇಂದ್ರಗಳು ನಿರ್ಮಾಣವಾಗಬೇಕಿದೆ.

ವಾಸ್ತವ್ಯದ್ದು ಸಮಸ್ಯೆ: ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ವಾಸ್ತವ್ಯ ಹೂಡಲು 112 ಸ್ವಂತ ಉಪಕೇಂದ್ರಗಳಿವೆ. ಅವರು ಅಲ್ಲಿದ್ದುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಬೇಕು, ಆದರೆ ಬಹುತೇಕ ಸಹಾಯಕಿಯರು ವಾಸ್ತವ್ಯ ಹೂಡುತ್ತಿಲ್ಲ ಎಂಬ ಆರೋಪವಿದೆ. ಉಪಕೇಂದ್ರದ ಸೌಲಭ್ಯ ಇಲ್ಲದವರು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾನದಿಂದಲೇ ತೆರಳಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇವರು ವಾಸ್ತವ್ಯ ಹೂಡದ ಹಿನ್ನೆಲೆಯಲ್ಲಿ ಸುಸಜ್ಜಿತವಾದ ಉಪಕೇಂದ್ರಗಳ ಆವರಣದಲ್ಲಿ ಗಿಡಗಂಟಿಗಳು ಬೆಳೆದು, ಅನೈರ್ಮಲ್ಯ ತಾಣವಾಗಿ ಮಾರ್ಪಟ್ಟಿವೆ.

ಜಿಲ್ಲೆಯ ಬಾಗಳಿ, ಅರಳೀಕಟ್ಟೆ ಸೇರಿದಂತೆ ಕೆಲ ಗ್ರಾಮಗಳಲ್ಲಿ ಕಟ್ಟಡ ಪೂರ್ಣಗೊಂಡು 3ರಿಂದ 4 ವರ್ಷ ಕಳೆದರೂ ಲೋಕಾರ್ಪಣೆ ಮಾಡಿಲ್ಲ.

ಉದ್ಘಾಟನೆಗೊಂಡ ಉಪ ಕೇಂದ್ರಗಳಲ್ಲಿ ಸಮರ್ಪಕ ಸೇವೆ ಲಭ್ಯವಿಲ್ಲ. ವೈದ್ಯರಿಗಿಂತ ಶುಶ್ರೂಷಕರ ಸೇವೆಯನ್ನು ಹೆಚ್ಚಾಗಿ ಜನರು ಬಯಸುತ್ತಾರೆ. ಆ ಹಿನ್ನೆಲೆಯಲ್ಲಿಸರಕಾರ ಜಿಲ್ಲೆಯಲ್ಲಿಖಾಲಿಯಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಿ, ಗ್ರಾಮೀಣ ಜನರ ಆರೋಗ್ಯ ಸುಧಾರಣೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಜಿಲ್ಲೆಗೆ 262 ಎಎನ್‌ಎಂ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 116 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 140 ಹುದ್ದೆ ಖಾಲಿಯಿದೆ. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ಸರಕಾರವೇ ನೇರ ನೇಮಕಾತಿ ಮಾಡಬೇಕಿದೆ. ಹೊರಗುತ್ತಿಗೆಯಲ್ಲಿ ನಾವು ನೇಮಕ ಮಾಡಿಕೊಳ್ಳುವ ಅಧಿಕಾರವಿಲ್ಲ. ಖಾಲಿ ಹುದ್ದೆ ಭರ್ತಿ ಮಾಡುವಂತೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.

-ಡಾ.ಎಂ.ಸಿ.ರವಿ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಚಾಮರಾಜನಗರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ