ಆ್ಯಪ್ನಗರ

ಪ್ರವಾಹಕ್ಕೆ 471 ಹೆಕ್ಟೇರ್‌ ಬೆಳೆ ನಷ್ಟ

ವಾರದ ಹಿಂದಷ್ಟೇ ಪ್ರವಾಹದಿಂದಾಗಿ ಮುಳುಗಡೆ, ಜಲಾವೃತಗೊಂಡಿದ್ದ ಕೊಳ್ಳೇಗಾಲ ತಾಲೂಕಿನ ಕೆಲ ಹಳ್ಳಿಗಳಲ್ಲಿ ಒಟ್ಟು 471 ಹೆಕ್ಟೇರ್‌ (1,177 ಎಕರೆ) ಬೆಳೆ ನಷ್ಟವಾಗಿದೆ.

Vijaya Karnataka 20 Aug 2019, 5:00 am
ಫಾಲಲೋಚನ ಆರಾಧ್ಯ ಚಾಮರಾಜನಗರ
Vijaya Karnataka Web CHN-CHN19P2


ವಾರದ ಹಿಂದಷ್ಟೇ ಪ್ರವಾಹದಿಂದಾಗಿ ಮುಳುಗಡೆ, ಜಲಾವೃತಗೊಂಡಿದ್ದ ಕೊಳ್ಳೇಗಾಲ ತಾಲೂಕಿನ ಕೆಲ ಹಳ್ಳಿಗಳಲ್ಲಿ ಒಟ್ಟು 471 ಹೆಕ್ಟೇರ್‌ (1,177 ಎಕರೆ) ಬೆಳೆ ನಷ್ಟವಾಗಿದೆ.

ಸದ್ಯ ಕೃಷಿ ಇಲಾಖೆಯು ತ್ವರಿತಗತಿಯಲ್ಲಿ ಬೆಳೆ ನಷ್ಟವನ್ನು ಪರಿಶೀಲಿಸಿ, ಬೆಳೆ ನಷ್ಟವಾಗಿರುವ ಕುರಿತು ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಿದೆ. ಅದರಂತೆ ಒಟ್ಟು 63.58 ಲಕ್ಷ ರೂ. ಮೌಲ್ಯದ ಬೆಳೆ ನಷ್ಟಕ್ಕೀಡಾಗಿದೆ.

ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳು ಭರ್ತಿಯಾಗಿ ಅಪಾಯಕಾರಿ ಮಟ್ಟ ತಲುಪಿದ ಹಿನ್ನೆಲೆಯಲ್ಲಿ ಒಟ್ಟು 2.65 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗಿತ್ತು.

ಇದರಿಂದ ಕೊಳ್ಳೇಗಾಲ ತಾಲೂಕಿನ ಐದಾರು ಗ್ರಾಮಗಳು ಮುಳುಗಡೆಗೊಂಡು, ಗ್ರಾಮಸ್ಥರು ಊರು ತೊರೆದು ನೆಂಟರಿಷ್ಟರ ಮನೆ ಹಾಗೂ ಜಿಲ್ಲಾಡಳಿತದ ತೆರೆದಿದ್ದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು.

ಆದರೆ, ಈ ಪ್ರವಾಹದಿಂದ ಆ ಗ್ರಾಮಸ್ಥರು ಬೆಳೆದಿದ್ದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸದ್ಯಕ್ಕೆ ಕೃಷಿ ಇಲಾಖೆ ವ್ಯಾಪ್ತಿಯ ಬೆಳೆಗಳ ನಷ್ಟದ ಅಂದಾಜು ಲಭ್ಯವಾಗಿದೆ. ಕೊಳ್ಳೇಗಾಲ ತಾಲೂಕಿನ ಒಟ್ಟು 10 ಹಳ್ಳಿಗಳಲ್ಲಿ ಪ್ರವಾಹದಿಂದ (ನೆರೆ) ಬೆಳೆಗಳು ಹಾನಿಗೀಡಾಗಿವೆ.

ಯಾವ್ಯಾವ ಹಳ್ಳಿಗಳು: ತಾಲೂಕಿನ ದಾಸನಪುರ, ಹಳೇ ಅಣಗಳ್ಳಿ, ಹರಳೆ, ಮುಳ್ಳೂರು, ಯಡಕುರಿಯಾ, ಧನಗೆರೆ, ಹೊಸ ಹಂಪಾಪುರ, ಹಳೇ ಹಂಪಾಪುರ, ಸತ್ತೇಗಾಲ ಹಾಗೂ ಸರಗೂರು ಗ್ರಾಮಗಳ ವ್ಯಾಪ್ತಿಯಲ್ಲಿ ನೆರೆಯಿಂದ ಬೆಳೆ ಹಾನಿಯಾಗಿದೆ.

ಈ ಗ್ರಾಮಗಳ ಜಮೀನುಗಳಲ್ಲಿ ಬೆಳೆಯಲಾಗಿದ್ದ ಭತ್ತ, ಮುಸುಕಿನ ಜೋಳ, ಕಬ್ಬು, ರಾಗಿ ಬೆಳೆಗಳು ಹೆಚ್ಚು ಹಾನಿಗೆ ಒಳಗಾಗಿವೆ.

ಈ ಬೆಳೆಗಳಿಗೆ ಎನ್‌ ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಪರಿಹಾರ ನಿಗದಿ ಮಾಡಲಾಗಿದೆ. ಅದರಂತೆ ಒಂದು ಹೆಕ್ಟೇರ್‌ ಪ್ರದೇಶದ ಹಾನಿಗೆ 13,500 ರೂ. ಪರಿಹಾರ ದೊರೆಯಲಿದೆ.

ಒಟ್ಟು 63.58 ಲಕ್ಷ ರೂ. ಮೌಲ್ಯದ ಬೆಳೆ ಈ ಗ್ರಾಮಗಳ ವ್ಯಾಪ್ತಿಯಲ್ಲಿ ನಷ್ಟಕ್ಕೀಡಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಒಂದು ಕಿ.ಮೀ. ಅಗಲ: ಕೊಳ್ಳೇಗಾಲ ತಾಲೂಕಿನಲ್ಲಿ ಕಾವೇರಿ ನದಿ ಪಾತ್ರದಲ್ಲಿ ಸಾಕಷ್ಟು ಹಳ್ಳಿಗಳಿದ್ದೂ ಈ ಬಾರಿ ಒಟ್ಟಿಗೆ 2.65 ಲಕ್ಷ ಕ್ಯೂಸೆಕ್‌ ನೀರು ಹರಿಯಬಿಟ್ಟ ಪರಿಣಾಮ ನದಿಯಿಂದ ಒಂದು ಕಿ.ಮೀ. ಅಗಲದವರೆಗೆ ನೀರು ಉಕ್ಕಿ ಹರಿದಿತ್ತು. ದಾಸನಪುರ, ಹಳೇ ಅಣಗಳ್ಳಿ ವ್ಯಾಪ್ತಿಯಲ್ಲಿ ಪ್ರವಾಹ ಸಾಕಷ್ಟು ಹಾನಿ ಮಾಡಿದೆ.

ಎರಡು ದಿನಗಳ ಕಾಲ ಇದ್ದ ಈ ಪ್ರವಾಹ ನಂತರ ಕಡಿಮೆಯಾಗಿ. ಇದೀಗ ಸಹಜ ಸ್ಥಿತಿಯಲ್ಲಿದೆ. ಆದರೆ, ಎರಡು ದಿನಗಳ ಆ ಪ್ರವಾಹ ನದಿ ಪಾತ್ರದ ಗ್ರಾಮಸ್ಥರನ್ನು ನಾನಾ ರೀತಿಯಲ್ಲಿ ತೊಂದರೆಗೆ ಸಿಲುಕಿಸಿದೆ. ಒಂದೆಡೆ ಗ್ರಾಮದ ಚಿತ್ರಣವೇ ಬದಲಾಗಿದೆ. ಸಾಕಷ್ಟು ಮನೆಗಳು ಕುಸಿದಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಕಷ್ಟಪಟ್ಟು ಬೆಳೆದಿದ್ದ ಬೆಳೆ ಕೊಚ್ಚಿ ಹೋಯಿತು.

ಕೇಂದ್ರದ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಒಂದಷ್ಟು ಪರಿಹಾರ ರೈತರಿಗೆ ಸಿಗಬಹುದು. ಆದರೆ, ಕಷ್ಟಪಟ್ಟು ಬೆಳೆದಿದ್ದ ಆ ಪರಿಶ್ರಮ, ಆ ಬೆಳೆಯ ಮಾರುಕಟ್ಟೆ ಮೌಲ್ಯವನ್ನು ತುಂಬಿಕೊಡಲಾದೀತೆ ಎಂಬುದು ಪ್ರಜ್ಞಾವಂತರ ಅಭಿಮತ.


ಸದ್ಯದಲ್ಲೇ ಇತರೆ ನಷ್ಟದ ವರದಿ

ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕೆಲ ಗ್ರಾಮಗಳಷ್ಟೇ ನೆರೆಯಿಂದ ಸಂಕಷ್ಟಕ್ಕೀಡಾಗಿದ್ದವು. ಅದೇ ನೆರೆಯಿಂದ ಕೃಷಿ ಇಲಾಖೆಗೆ ಸಂಬಂಧಿಸಿದ ಬೆಳೆ ನಷ್ಟದ ವರದಿಯಷ್ಟೇ ಇದೀಗ ಬಿಡುಗಡೆಯಾಗಿದೆ. ಇನ್ನು ತೋಟಗಾರಿಕೆ ಬೆಳೆ ಹಾಗೂ ಮನೆ, ಆಸ್ತಿ ನಷ್ಟ ಕುರಿತು ವರದಿ ಇನ್ನೆರಡು ದಿನದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಆ ಸಮೀಕ್ಷೆ ವರದಿಗಳು ಕೈಸೇರಿದರೆ, ನೆರೆಯಿಂದ ಒಟ್ಟು ಅಂದಾಜು ನಷ್ಟದ ಬಗ್ಗೆ ವಿವರ ತಿಳಿಯಲಿದ್ದು, ಸರಕಾರ ಕೂಡಲೇ ಈ ನಷ್ಟವನ್ನು ಭರಿಸಲು ಪರಿಹಾರ ಹಣವನ್ನು ತ್ವರಿತಗತಿಯಲ್ಲಿ ಬಿಡುಗಡೆ ಮಾಡುವುದು ಮುಖ್ಯವಾಗಿದೆ ಎಂಬ ಒತ್ತಾಯ ಇದ್ದೇ ಇದೆ.


ಕೊಳ್ಳೇಗಾಲ ತಾಲೂಕಿನಲ್ಲಿ ನೆರೆಯಿಂದ ಆ ವ್ಯಾಪ್ತಿಯ 10 ಗ್ರಾಮಗಳಲ್ಲಿ ನಷ್ಟಕ್ಕೀಡಾದ ಕೃಷಿ ಬೆಳೆಗಳ ಬಗ್ಗೆ ಸಮೀಕ್ಷೆ ನಡೆಸಿ, ಆಗಿರುವ ಅಂದಾಜು ಮೌಲ್ಯ, ಎಷ್ಟು ಎಕರೆಯಲ್ಲಿ, ಯಾವ್ಯಾವ ಬೆಳೆ ಹಾನಿಗೀಡಾಗಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿಗೆ ನಮ್ಮ ಇಲಾಖೆಯಿಂದ ವರದಿ ಸಲ್ಲಿಸಲಾಗಿದೆ.

-ಎಚ್‌.ಟಿ.ಚಂದ್ರಕಲಾ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ