ಚಾಮರಾಜನಗರ: ಬೆಳೆಯುವ ಮಕ್ಕಳಲ್ಲಿ ಸಾಂಸ್ಕೃತಿಕ ಸ್ಪರ್ಧೆ ಬಗ್ಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಜಿಲ್ಲಾ ಕಾರಾಗಹ ಅಧೀಕ್ಷಕ ಎಂ.ಸುಂದರ್ ಅಭಿಪ್ರಾಯಪಟ್ಟರು.
ನಗರದ ರೋಟರಿಭವನದಲ್ಲಿ ನೆಹರು ಯುವ ಕೇಂದ್ರ, ರಂಗವಾಹಿನಿ, ರೋಟರಿ ಸಂಸ್ಥೆ ಯಿಂದ ಶನಿವಾರ ನಡೆದ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಮತ್ತು ಕಲಾಮೇಳ ಉದ್ಘಾಟಿಸಿ ಮಾತನಾಡಿದರು.
ಈಚಿನ ದಿನಗಳಲ್ಲಿ ಚಲನಚಿತ್ರಗೀತೆಗೆ ಮಾರುಹೋಗುವ ಹಾಗೇ ಜನಪದ ಸಾಹಿತ್ಯದತ್ತ ಆಸಕ್ತಿ ತೋರುವವರ ಸಂಖ್ಯೆ ಕಡಿಮೆಯಿದೆ. ಜಾನಪದ ಸಾಹಿತ್ಯ ಹಾಸುಹೊಕ್ಕಾಗಿರುವ ಜಿಲ್ಲೆಯಲ್ಲಿ ಯುವ ಜನರು ಸಾಹಿತ್ಯ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳದಿರುವುದು ದುರಂತ ಎಂದರು.
ಆ ನಿಟ್ಟಿನಲ್ಲಿ ಪ್ರಾಚೀನ ಕಲೆ ಸಂಸ್ಕೃತಿ ಉಳಿಯಬೇಕಾದರೆ, ಪ್ರತಿಯೊಬ್ಬರು ಸಾಮೂಹಿಕ ಹೊಣೆಗಾರಿಕೆ ಅಗತ್ಯ ಎಂದರು.
ಸ್ನೇಹಾ ಸ್ವಯಂ ಸೇವಾ ಸಂಸ್ಥೆ ಜಿಲ್ಲಾ ಸಂಯೋಜಕಿ ಲೀನಾಕುಮಾರಿ ಮಾತನಾಡಿ, ಯಾವುದೇ ವಿಚಾರದ ಬಗ್ಗೆ ಜನರಲ್ಲಿ ಜಾಗತಿ ಮೂಡಿಸಬೇಕಾದರೆ, ಸಿದ್ದಪ್ಪಾಜಿ, ಮಲೆ ಮಹಾದೇಶ್ವರರನ್ನು ಕುರಿತು ಹಾಡುಗಳಲ್ಲಿರುವ ಗಮನಾರ್ಹ ಅಂಶಗಳನ್ನು ಬೀದಿ ನಾಟಕದ ರೂಪದಲ್ಲಿ ಪ್ರದರ್ಶಿಸಬೇಕು, ವಿಷಾದದ ಸಂಗತಿ ಎಂದರೆ ಜಾನಪದ ಸಾಹಿತ್ಯ, ಸಂಸ್ಕೃತಿಯ ಕುರಿತು ಅರಿವು ಪಡೆದುಕೊಳ್ಳುವ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದಿರುವುದು ಕಲೆ, ಸಾಹಿತ್ಯಕ್ಕೆ ಬಿದ್ದ ಬಾರಿ ಹೊಡೆತ ಎಂದರು.
ಕಾರ್ಯಕ್ರಮದ ನಂತರ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರಿನಿಂದ ಬಂದಿದ್ದ ಸ್ಪರ್ಧಿಗಳ ಜನಪದ, ಭಾವಗೀತೆ, ರಂಗೋಲಿ ಹಾಗೂ ಚರ್ಮವಾದ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭೆ ಮೆರೆದರು.
ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ, ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ರೋಟರಿ ಅಧ್ಯಕ್ಷ ಯೋಗರಾಜ್, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಬಸವರಾಜು ಹಾಜರಿದ್ದರು.
ಜನಪದ ಸಾಹಿತ್ಯದ ಆಸಕ್ತಿ ಮೂಡಿಸುವುದರಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳ ಪಾತ್ರ ಅತ್ಯಂತ ಮಹತ್ವದ್ದು. ಯುವಜನರು ಜನಪದ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು. ಆಗ ಇಂಥ ಕಾರ್ಯಕ್ರಮಗಳಿಗೆ ಅರ್ಥಬರಲಿದೆ.
-ರಶ್ಮಿ , ದ್ವಿತೀಯ ಬಿಎ, ಜೆಎಸ್ಎಸ್ ಮಹಿಳಾ ಕಾಲೇಜು, ಚಾ.ನಗರ
ಚಲನಚಿತ್ರದ ಹಾಡುಗಳಿಗೆ ಆದ್ಯತೆ ಕೊಡುವಷ್ಟು ವಿದ್ಯಾರ್ಥಿಗಳು ಜನಪದ ಸಾಹಿತ್ಯ ಸ್ಪರ್ಧೆಗಳಲ್ಲಿ ಭಾಗವಹಿಸದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜನಪದ ಗೀತೆಗಳು ಎಂದರೆ ನನಗೆ ಆಸಕ್ತಿ ಇರುವುದರಿಂದ ಪಾಲ್ಗೊಂಡಿದ್ದೇನೆ.
-ಕಾವ್ಯಾ, ದ್ವಿತೀಯ ಬಿಎ, ಜೆಎಸ್ಎಸ್ ಮಹಿಳಾ ಕಾಲೇಜು, ಚಾ.ನಗರ