ಚಾಮರಾಜನಗರ: ಕಾವೇರಿ ತೀರ್ಪು ವಿರುದ್ಧವಾಗಿ ರಾಜ್ಯದ ಸಂಸದರು ದನಿ ಎತ್ತದೇ ನಿಷ್ಕಾಳಜಿ ತೋರಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಸೇನಾ ಪಡೆಯಿಂದ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.
ಭುವನೇಶ್ವರಿ ವೃತ್ತದ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು, ರಾಜ್ಯದ ಸಂಸದರ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸೇನಾ ಪಡೆ ಅಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ , ' ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ರಾಜ್ಯದ ಪಾಲಿಗೆ ದುರದೃಷ್ಟಕರ. ಈ ಬಗ್ಗೆ ರಾಜ್ಯದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಆದರೆ ರಾಜ್ಯದಿಂದ ಸಂಸತ್ಗೆ ಆಯ್ಕೆಯಾಗಿರುವ ಸಂಸದರು ಮಾತ್ರ ಈ ಕುರಿತು ಮೌನ ವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ರಾಜ್ಯದ ಸಂಸದರು, ರಾಜ್ಯದ ಜನತೆಯ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಸಂಸತ್ ಅಧಿವೇಶನದಲ್ಲಿ ಈ ವಿಚಾರವಾಗಿ ಗಂಭೀರವಾಗಿ ಚರ್ಚಿಸಿಲ್ಲ. ಪ್ರತಿಭಟನೆ ಮಾಡಿ ಗಮನ ಸೆಳೆದಿಲ್ಲ. ಹೀಗಾಗಿ ಅವರೆಲ್ಲರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ, ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕುಡಿಯುವ ನೀರಿಗೂ ಸಂಕಷ್ಟ ತಲೆದೋರಿದೆ. ಬೆಳೆಗಳಿಗೆ ನೀರಿಲ್ಲದಂತಾಗಿದೆ. ಹೀಗಿದ್ದರೂ ರಾಜ್ಯ ಸರಕಾರ ಸುಪ್ರೀಂಕೋರ್ಟ್ ಆದೇಶ ಪಾಲನೆ ಭರದಲ್ಲಿ ತಮಿಳುನಾಡಿಗೆ ನೀರು ಬಿಟ್ಟು, ನಮ್ಮ ರಾಜ್ಯದ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ದೂರಿದರು.
ಇನ್ನಾದರೂ ಸುಗ್ರೀವಾಜ್ಞೆ ಜಾರಿಗೊಳಿಸಿ ತಕ್ಷಣ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸಬೇಕು. ಇಲ್ಲವಾದರೆ ಮೆಟ್ಟೂರು ಚಲೋ ಪ್ರತಿಭಟನಾ ರಾರಯಲಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ಶಾ. ಮುರುಳಿ, ಮುಖಂಡರಾದ ಚಾ. ಗು. ನಾಗರಾಜು, ಹರೀಶ್ಕುಮಾರ್, ಗು. ಪುರುಷೋತ್ತಮ್, ಚಾ.ಹ. ಶಿವರಾಜು, ಸಿ.ಸಿ. ಪ್ರಕಾಶ್, ಶಿವಕುಮಾರ್, ಪಣ್ಯದಹುಂಡಿ ರಾಜು, ಹಾ.ವಿ. ನಟರಾಜು, ಸುಬ್ರಹ್ಮಣ್ಯ ಪಾಲ್ಗೊಂಡಿದ್ದರು.