ಆ್ಯಪ್ನಗರ

ಜಿಲ್ಲಾದ್ಯಂತ ರಂಜಾನ್‌ ಹಬ್ಬದ ಸಂಭ್ರಮ

ಜಿಲ್ಲಾದ್ಯಂತ ಮುಸ್ಲಿಂ ಸಮುದಾಯದವರು ಬುಧವಾರ ಈದ್‌ ಉಲ್‌ ಫಿತ್ರ್‌(ರಂಜಾನ್‌) ಅನ್ನು ಶ್ರದ್ಧೆ, ಭಕ್ತಿ, ಸಂಭ್ರಮದಿಂದ ಆಚರಿಸಿದರು.

Vijaya Karnataka 6 Jun 2019, 5:00 am
ಚಾಮರಾಜನಗರ : ಜಿಲ್ಲಾದ್ಯಂತ ಮುಸ್ಲಿಂ ಸಮುದಾಯದವರು ಬುಧವಾರ ಈದ್‌ ಉಲ್‌ ಫಿತ್ರ್‌(ರಂಜಾನ್‌) ಅನ್ನು ಶ್ರದ್ಧೆ, ಭಕ್ತಿ, ಸಂಭ್ರಮದಿಂದ ಆಚರಿಸಿದರು.
Vijaya Karnataka Web celebration of ramzan throughout chamarajnagara district
ಜಿಲ್ಲಾದ್ಯಂತ ರಂಜಾನ್‌ ಹಬ್ಬದ ಸಂಭ್ರಮ


ತ್ಯಾಗ, ಶಾಂತಿಯ ಸಂಕೇತದ ಹಬ್ಬವನ್ನು ತಿಂಗಳ ಉಪವಾಸ ವ್ರತ ಅಂತ್ಯಗೊಳಿಸುವ ಮೂಲಕ ಭಕ್ತಿಯಿಂದ ಆಚರಿಸಿದರು. ಬೆಳಗ್ಗೆ ಆಯಾ ಊರಿನ ಈದ್ಗಾ ಮೈದಾನಗಳಲ್ಲಿ ಸಮಾವೇಶಗೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಹೊಸ ಧಿರಿಸಿನೊಂದಿಗೆ ಹಬ್ಬ ಸ್ವಾಗತಿಸಿದ ಮಂದಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಹರ್ಷ ವ್ಯಕ್ತಪಡಿಸಿದರು.

ನಗರ ಸೇರಿದಂತೆ ಕೆಲವೆಡೆ ಸಾಮೂಹಿಕ ಪ್ರಾರ್ಥನೆ ನಂತರ ಸಮುದಾಯದ ಎಲ್ಲರೂ ಒಟ್ಟುಗೂಡಿ ಮೆರವಣಿಗೆ ನಡೆಸಿದರು.

ಸ್ಥಿತಿ ವಂತರು ತಮ್ಮ ಧರ್ಮದ ಬಡ ಮಂದಿಗೆ ಕೈಲಾದಷ್ಟು ದಾನ ಮಾಡಿದರಲ್ಲದೇ ಹಿರಿಯರಿಂದ ಆಶೀರ್ವಾದ ಪಡೆದರು.

ಜಿಲ್ಲಾ ಕೇಂದ್ರದಲ್ಲಿನ ಸೋಮವಾರಪೇಟೆ ಬಳಿ ಇರುವ ಈದ್ಗಾ ಹಾಗೂ ಪಾಲಿಟೆಕ್ನಿಕ್‌ ಕಾಲೇಜಿನ ಹಿಂಭಾಗದಲ್ಲಿರುವ ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಶ್ರದ್ಧಾ, ಭಕ್ತಿಯಿಂದ ನೆರವೇರಿತು. ಹಿಂದಿನ ಎರಡು ದಿನಗಳ ಹಿಂದೆಯೇ ಈದ್ಗಾವನ್ನು ಶುಚಿಗೊಳಿಸುವ ಕಾರ್ಯ ನಡೆದಿತ್ತು. ಎರಡು ಈದ್ಗಾದಲ್ಲೂ ಬೃಹತ್‌ ಗಾತ್ರದ ಶಾಮಿಯಾನ ಹಾಕಿಸಲಾಗಿತ್ತು. ಈದ್ಗಾಕ್ಕೆ ತೆರಳಲಾಗದವರು ಮಸೀದಿಯಲ್ಲೇ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬ ಆಚರಿಸಿದರು.

ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಹೊಸ ಬಟ್ಟೆ ತೊಟ್ಟು ಕಂಗೊಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೆಂಗಳೆಯರು ಹಬ್ಬದ ದಿನವೂ ತಮಗಿಷ್ಟವಾದ ವಸ್ತುಗಳ ವ್ಯಾಪಾರ, ವಹಿವಾಟಿನಲ್ಲಿ ತೊಡಗಿದ್ದರು.

ಜಿಲ್ಲಾ ಕೇಂದ್ರವಲ್ಲದೇ ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಯಳಂದೂರು ಸೇರಿದಂತೆ ಎಲ್ಲೆಡೆ ರಂಜಾನ್‌ ಆಚರಣೆ ಜೋರಾಗಿತ್ತು.

ಹಬ್ಬದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಪೊಲೀಸ್‌ ಇಲಾಖೆ ಬಿಗಿ ಬಂದೋಬಸ್ತ್‌ ನಿಯೋಜಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ