ಆ್ಯಪ್ನಗರ

ತಿಂಗಳಾಂತ್ಯಕ್ಕೆ ಜಿಪಂ ಅಧ್ಯಕ್ಷರು ಬದಲು ?

ಕಾಂಗ್ರೆಸ್‌ ಪಕ್ಷದಲ್ಲಿನ ಆಂತರಿಕ ಪೂರ್ವ ಒಪ್ಪಂದದಂತೆ ಇದೇ ಅಕ್ಟೋಬರ್‌ ತಿಂಗಳಾಂತ್ಯಕ್ಕೆ ಚಾ.ನಗರ ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ.

Vijaya Karnataka 16 Oct 2019, 5:00 am
ಫಾಲಲೋಚನ ಆರಾಧ್ಯ ಚಾಮರಾಜನಗರ
Vijaya Karnataka Web chamarajanagar jp president election
ತಿಂಗಳಾಂತ್ಯಕ್ಕೆ ಜಿಪಂ ಅಧ್ಯಕ್ಷರು ಬದಲು ?


ಕಾಂಗ್ರೆಸ್‌ ಪಕ್ಷದಲ್ಲಿನ ಆಂತರಿಕ ಪೂರ್ವ ಒಪ್ಪಂದದಂತೆ ಇದೇ ಅಕ್ಟೋಬರ್‌ ತಿಂಗಳಾಂತ್ಯಕ್ಕೆ ಚಾ.ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ.

ಜಿಲ್ಲಾಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಅ. 14ರಂದೇ ರಾಜೀನಾಮೆ ಸಲ್ಲಿಸುವಂತೆ ಪಕ್ಷದ ವರಿಷ್ಠರು ಶಿವಮ್ಮ ಅವರಿಗೆ ಪಕ್ಷದ ಸಭೆಯಲ್ಲಿಸೂಚನೆ ನೀಡಿದ್ದರು. ಆದರೆ, ಜಿ.ಪಂ.ನಲ್ಲಿನ ಕೆಲ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆಗೆ ತೊಡಕಾಗಬಹುದು ಎಂಬ ಕಾರಣಕ್ಕೆ ಈ ತಿಂಗಳ ಕೊನೆವರೆಗೆ ಅಧಿಕಾರದಲ್ಲಿಮುಂದುವರಿದು, ನಂತರ ರಾಜೀನಾಮೆ ನೀಡಲು ಸಹಮತ ವ್ಯಕ್ತವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಅವಧಿಯ ಜಿಲ್ಲಾಪಂಚಾಯಿತಿ ಚುನಾವಣೆ 2016ರಲ್ಲಿನಡೆದು, ಬಹುಮತ ಪಡೆದ ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿದಿತ್ತು. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಎಂ. ರಾಮಚಂದ್ರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.

ಆದರೆ, ಪರಿಶಿಷ್ಟ ಪಂಗಡದವರೇ ಆದ ಇನ್ನಿಬ್ಬರು ಸದಸ್ಯರಿಗೂ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿಕಾಂಗ್ರೆಸ್‌ ಪಕ್ಷದ ವರಿಷ್ಠರು ಅಧಿಕಾರ ಹಂಚಿಕೆಗೆ ನಿರ್ಧರಿಸಿದ್ದರು. ನಂತರ ಪಕ್ಷದ ಸಭೆಯಲ್ಲೇ ಆಂತರಿಕ ಒಪ್ಪಂದ ಮಾಡಿಕೊಳ್ಳಲಾಗಿತ್ತು. ರಾಮಚಂದ್ರ ರಾಜೀನಾಮೆ ನಂತರ ಉಳಿದ 36 ತಿಂಗಳ ಅಧಿಕಾರವನ್ನು ಅಧ್ಯಕ್ಷ ಸ್ಥಾನಕ್ಕೆ ವರ್ಗವಾರು ಮೀಸಲು ಅನ್ವಯ ಅರ್ಹರಾಗಿದ್ದ ಪಾಳ್ಯ ಕ್ಷೇತ್ರದ ಶಿವಮ್ಮ ಹಾಗೂ ತೆರಕಣಾಂಬಿ ಕ್ಷೇತ್ರದ ಅಶ್ವಿನಿ ಅವರಿಗೆ ತಲಾ 18 ತಿಂಗಳ ಅಧಿಕಾರ ನೀಡಲು ನಿರ್ಧರಿಸಲಾಯಿತು.

ಅದರಂತೆ ಮೊದಲ 18 ತಿಂಗಳ ಅಧಿಕಾರಾವಧಿ ಶಿವಮ್ಮ ಅವರಿಗೇ ಇದೇ ಅ. 14ಕ್ಕೆ ಪೂರ್ಣಗೊಂಡಿದೆ. ಇನ್ನುಳಿದ 18 ತಿಂಗಳ ಕಾಲ ಜಿ.ಪಂ. ಅಧ್ಯಕ್ಷರಾಗಿ ತೆರಕಣಾಂಬಿ ಕ್ಷೇತ್ರದ ಅಶ್ವಿನಿ ಅವರು ಅನುಭವಿಸಲು ಅಣಿಗೊಂಡಿದ್ದು, ಈ ತಿಂಗಳ ಕೊನೆವರೆಗೂ ಕಾಯಬೇಕಾಗಿದೆ.

ಜಿ.ಪಂ. ಬಲಾಬಲ: ಅಂದ ಹಾಗೆ, ಜಿಲ್ಲಾಪಂಚಾಯಿತಿಯ ಒಟ್ಟು 23 ಸದಸ್ಯ ಬಲದಲ್ಲಿಕಾಂಗ್ರೆಸ್‌ 14 ಹಾಗೂ ಬಿಜೆಪಿ 9 ಸ್ಥಾನ ಹೊಂದಿದ್ದವು. ಆದರೆ, ಎಂ. ರಾಮಚಂದ್ರ ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಅವರ ಸ್ಥಾನ ತೆರವುಗೊಂಡಿದ್ದು, ಕಾಂಗ್ರೆಸ್‌ ಬಲ 13ಕ್ಕೆ ಕುಸಿದಿದೆ. ಆದರೂ ಬಹುಮತಕ್ಕೆ ಕೊರತೆ ಇಲ್ಲ.

ಸಭೆಯಲ್ಲೇ ವಾಕ್ಸಮರ

ಜಿಲ್ಲಾಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಪೂರ್ವ ಒಪ್ಪಂದದಂತೆ ರಾಜೀನಾಮೆ ನೀಡುವಂತೆ ಸೂಚನೆ ನೀಡಲು ಈಚೆಗೆ ನಗರದಲ್ಲಿಕಾಂಗ್ರೆಸ್‌ ಪಕ್ಷದ ವರಿಷ್ಠರು ಹಾಗೂ ಪಕ್ಷದ ಜಿ.ಪಂ. ಸದಸ್ಯರ ಸಭೆಯನ್ನು ನಡೆಸಲಾಗಿತ್ತು. ಆದರೆ, ಈ ಸಭೆಯಲ್ಲಿಹಾಲಿ ಅಧ್ಯಕ್ಷೆ ಶಿವಮ್ಮ ಸೇರಿದಂತೆ ಮಹಿಳಾ ಸದಸ್ಯರ ನಡುವೆ ವಾಕ್ಸಮರವೇ ನಡೆದಿತ್ತು ಎನ್ನಲಾಗಿದೆ. ಇದಕ್ಕೂ ಮುನ್ನ ನಡೆದಿದ್ದ, ಜಿ.ಪಂ. ಸಾಮಾನ್ಯ ಸಭೆಯಲ್ಲಿಸ್ವಪಕ್ಷೀಯ ಕಾಂಗ್ರೆಸ್‌ ಅಧ್ಯಕ್ಷರು ಹಾಗೂ ಸದಸ್ಯರ ನಡುವೆಯೇ ವಾಗ್ಯುದ್ಧ ನಡೆದಿತ್ತು ಎಂಬುದು ಗಮನಾರ್ಹ.

ಚಾ.ನಗರ ತಾ.ಪಂ. ಅಧ್ಯಕ್ಷರು ಬದಲು ?

ಜಿಲ್ಲಾಪಂಚಾಯಿತಿಯಂತೆಯೇ ಚಾ.ನಗರ ತಾಲೂಕು ಪಂಚಾಯಿತಿ ಅಧ್ಯಕ್ಷರ ಅಧಿಕಾರಾವಧಿಯೂ ಇನ್ನೆರಡು ದಿನಗಳಲ್ಲಿಪೂರ್ಣಗೊಳ್ಳಲಿದ್ದು, ಅಲ್ಲಿಗೂ ಹೊಸ ಅಧ್ಯಕ್ಷರು ಬರಲಿದ್ದಾರೆ. ತಾಲೂಕು ಪಂಚಾಯಿತಿಯದ್ದೂ ಕೂಡ ಕಾಂಗ್ರೆಸ್‌ ಪಕ್ಷದ ಒಳ ಒಪ್ಪಂದದಾಟವೇ ಎಂಬುದು ಗಮನಾರ್ಹ. ಅಧಿಕಾರ ಹಂಚಿಕೆ ಸಲುವಾಗಿ ಪಕ್ಷದ ವರಿಷ್ಠರು ಹಾಲಿ ಅಧ್ಯಕ್ಷೆ ದೊಡ್ಡಮ್ಮ ಅವರಿಗೆ ಇನ್ನೆರಡು ದಿನಗಳಲ್ಲಿರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದು, ದೊಡ್ಡಮ್ಮ ಸಹ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಮುಂದಿನ ಅಧ್ಯಕ್ಷರಾಗಿ ಪರಿಶಿಷ್ಟ ಪಂಗಡದ ಸಾಗಡೆ ಕ್ಷೇತ್ರದ ಸದಸ್ಯರು ಆಯ್ಕೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತ ಪಡಿಸಿವೆ. ವಿಪರ್ಯಾಸವೆಂದರೆ ಚಾ.ನಗರ ತಾ.ಪಂ.ನಲ್ಲಿಕಾಂಗ್ರೆಸ್‌ಗೆ ಬಹುಮತವಿಲ್ಲ. ಬಿಜೆಪಿ ಬಹುಮತ ಪಡೆದಿದ್ದರೂ ಅಧ್ಯಕ್ಷ ಸ್ಥಾನಕ್ಕೆ ಮೀಸಲಾಗಿರುವ ಪ್ರವರ್ಗ ಪರಿಶಿಷ್ಟ ಪಂಗಡ ಸದಸ್ಯರು ಬಿಜೆಪಿಯಲ್ಲಿಲ್ಲ. ಹೀಗಾಗಿ ಕಾಂಗ್ರೆಸ್‌ ಇಲ್ಲಿಆಡಳಿತದಲ್ಲಿದೆ.

ಅಧಿಕಾರ ಹಂಚಿಕೆಯಾಗಬೇಕು ಎಂಬ ದೃಷ್ಟಿಯಿಂದ ಪಕ್ಷದ ವರಿಷ್ಠರ ಅಧ್ಯಕ್ಷತೆಯಲ್ಲಿಕೆಲ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಪ್ರಕ್ರಿಯೆಗಳು ನಡೆಯಲಿದ್ದು, ಹೊಸ ಅಧ್ಯಕ್ಷರ ಆಯ್ಕೆಯೂ ಆಗಲಿದೆ.

- ಪಿ. ಮರಿಸ್ವಾಮಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ