ಆ್ಯಪ್ನಗರ

ಜಾತ್ರೆ ದಿನ ಪೂಜೆಗೆ ಸೀಮಿತ: ಭಕ್ತರಲ್ಲಿ ನಿರಾಸೆ

ಎಲ್ಲವೂ ಸರಿಯಾಗಿದ್ದರೆ ಮಂಗಳವಾರ ಚಾ.ನಗರದಲ್ಲಿ ಚಾಮರಾಜೇಶ್ವರ ರಥೋತ್ಸವ ನಡೆದು, ಸಾವಿರಾರು ಭಕ್ತರು, ನವ ವಧು, ವರರ ಕಲರವ ಇರಬೇಕಿತ್ತು. ಆದರೆ, ಈ ವರ್ಷವೂ ಪೂಜೆಗಷ್ಟೇ ಸೀಮಿತವಾಯಿತು.

Vijaya Karnataka 17 Jul 2019, 5:00 am
ಚಾಮರಾಜನಗರ: ಎಲ್ಲವೂ ಸರಿಯಾಗಿದ್ದರೆ ಮಂಗಳವಾರ ಚಾ.ನಗರದಲ್ಲಿ ಚಾಮರಾಜೇಶ್ವರ ರಥೋತ್ಸವ ನಡೆದು, ಸಾವಿರಾರು ಭಕ್ತರು, ನವ ವಧು, ವರರ ಕಲರವ ಇರಬೇಕಿತ್ತು. ಆದರೆ, ಈ ವರ್ಷವೂ ಪೂಜೆಗಷ್ಟೇ ಸೀಮಿತವಾಯಿತು.
Vijaya Karnataka Web CHN-CHN16UM3


ಚಾಮರಾಜೇಶ್ವರ ದೇವಾಲಯವನ್ನು ತಳಿರು, ತೋರಣಗಳಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಆ ಮೂಲಕ ಆಷಾಡದ ಹುಣ್ಣಿಮೆಯಂದು ನಡೆಯಬೇಕಾಗಿದ್ದ ರಥೋತ್ಸವಕ್ಕೆ ಬದಲಾಗಿ ಮಂಗಳವಾರ ನಡೆದದ್ದು ವಿಶೇಷ ಪೂಜೆ ಮಾತ್ರ.

ರಥೋತ್ಸವ ಇಲ್ಲವಾದರೂ ನೂರಾರು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸಿ, ಚಾಮರಾಜೇಶ್ವರನ ದರುಶನ ಪಡೆದರು.

ಆಷಾಡ ಮಾಸದ ಹುಣ್ಣಿಮೆಯೆಂದರೆ ಅಂದು ನಗರದ ಚಾಮರಾಜೇಶ್ವರ ರಥೋತ್ಸವವೆಂದೇ ಪ್ರಸಿದ್ಧಿ. ಏಕೆಂದರೆ ಆಷಾಢ ಮಾಸದಲ್ಲಿ ರಾಜ್ಯದಲ್ಲಿ ರಥೋತ್ಸವ ನಡೆಯುವುದು ಅತ್ಯಂತ ವಿರಳ. ಆದರೆ, ಚಾ.ನಗರದಲ್ಲಿ ರಥೋತ್ಸವ ಅದ್ದೂರಿಯಿಂದ ನಡೆಯುತ್ತಿತ್ತು. ಆಷಾಡದಲ್ಲಿ ಬೇರೆ ಬೇರೆಯಾಗುವ ನವ ವಧು, ವರರು ಈ ಜಾತ್ರೆಯಲ್ಲಿ ಒಟ್ಟಾಗಿ ರಥೋತ್ಸವಕ್ಕೆ ಹಣ್ಣು, ಧವನ ಎಸೆಯುವುದು ವಿಶೇಷವಾಗಿತ್ತು. ಈ ಕಾರಣಕ್ಕೆ ಈ ರಥೋತ್ಸವದಲ್ಲಿ ನವ ವಧು,ವರರೇ ಹೆಚ್ಚಾಗಿರುತ್ತಿದ್ದರು.

ಆದರೆ, ಈ ವರ್ಷವೂ ಸೇರಿದಂತೆ ಕಳೆದ ಮೂರು ವರ್ಷಗಳಿಂದ ಚಾ.ನಗರದಲ್ಲಿ ರಥೋತ್ಸವ ನಡೆಯುತ್ತಿಲ್ಲ.

ಕಾರಣವೇನು ?: ಮೂರುವರೆ ವರ್ಷಗಳ ಹಿಂದೆ ರಥಕ್ಕೆ ಕಿಡಿಗೇಡಿಯೊಬ್ಬ ಬೆಂಕಿಹಚ್ಚಿದ್ದ ಪರಿಣಾಮ ರಥ ಸುಟ್ಟು ಭಗ್ನಗೊಂಡಿತು. ಹೀಗೆ ಭಗ್ನಗೊಂಡ ತೇರಿನಲ್ಲಿ ರಥೋತ್ಸವ ಮಾಡಬಾರದೆಂಬ ಧಾರ್ಮಿಕ ನಂಬಿಕೆಯಿಂದಾಗಿ ರಥೋತ್ಸವ ನಡೆಯುತ್ತಿಲ್ಲ. ಈ ವಿಚಾರ ನವ ವಧು,ವರರಲ್ಲಿ ನಿರಾಸೆ ಮೂಡಿಸಿತು.

ನಾನಾ ಕಡೆಯಿಂದ ಬಂದಿದ್ದರು: ರಥೋತ್ಸವ ಇಲ್ಲವಾದರೂ ತಾಲೂಕಿನ ನಾಗವಳ್ಳಿ, ನಲ್ಲೂರು, ಯಳಂದೂರು ತಾಲೂಕಿನ ಕಂದಹಳ್ಳಿ, ಸೋಮಹಳ್ಳಿ, ಮೈಸೂರು ಸೇರಿದಂತೆ ಇತರೆಡೆಗಳಿಂದ ಆಗಮಿಸಿದ್ದ ನೂರಾರು ನವಜೋಡಿಗಳು ನಗರಕ್ಕೆ ಬಂದು ಪೂಜೆಯನ್ನಷ್ಟೇ ನೆರವೇರಿಸಿ ತೆರಳಿದರು. ರಥೋತ್ಸವ ನಡೆಯುತ್ತಿಲ್ಲ ಎಂಬ ವಿಚಾರ ನವ ಜೋಡಿಗಳಲ್ಲಿ ಸಾಕಷ್ಟು ಬೇಸರ ತಂದಿತ್ತು.


ಆಷಾಢ ಮಾಸದಲ್ಲೇ ಚಾಮರಾಜೇಶ್ವರಸ್ವಾಮಿ ರಥೋತ್ಸವ ನಡೆದು ಮೂರು ವರ್ಷವಾಯಿತು. ಕಳೆದೆರಡು ವರ್ಷ ಇಲ್ಲ. ಈ ವರ್ಷವಾದರೂ ನಡೆಯುತ್ತದೆ ಎಂದುಕೊಂಡಿದ್ದೆವು. ಮುಂದಿನ ವರ್ಷಕ್ಕಾದರೂ ರಥೋತ್ಸವ ನಡೆಯುವಂತಾಗಲಿ.

- ನಳಿನಿ ಮಲ್ಲೇಶ್‌, ಸೋಮಹಳ್ಳಿ

ನಾನು ಚಾಮರಾಜನಗರದಲ್ಲಿ ಓದುತ್ತಿದ್ದ ವೇಳೆ ಪ್ರತಿವರ್ಷ ಚಾಮರಾಜೇಶ್ವರ ಸ್ವಾಮಿ ಆಷಾಢ ರಥೋತ್ಸವ ಸಂಭ್ರಮ ವೀಕ್ಷಿಸುತ್ತಿದ್ದೆ. ಎಲ್ಲೆಲ್ಲೂ ಜನರಜಂಗುಳಿ, ನವವಧುವರರ ಕಲರವ ರಥೋತ್ಸವದಲ್ಲಿ ಮೇಳೈಸುತ್ತಿತ್ತು. ನಾನು ಸಹ ಒಂದು ತಿಂಗಳ ಹಿಂದೆ ಮದುವೆಯಾಗಿದ್ದು, ಹೊಸ ಜೋಡಿಗಳಾಗಿ ಬಂದಿದ್ದೇವೆ. ಆದರೆ, ಈ ಬಾರಿ ರಥೋತ್ಸವವೇ ಇಲ್ಲ.

- ಯೋಗೇಶ್ವರಿ ಮಹೇಶ್‌, ಮೈಸೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ