ಆ್ಯಪ್ನಗರ

ಚಾ.ನಗರ ಉಸ್ತುವಾರಿ: ಸೋಮಣ್ಣ ಕಣ್ಣು?

ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದ ರಾಜ್ಯ ಸಮ್ಮಿಶ್ರ ಸರಕಾರ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ವಿಫಲವಾಗುತ್ತಿದ್ದಂತೆ, ಹೊಸ ಸರಕಾರ ರಚನೆಯಂತೆಯೇ ಮುಂದಿನ ಜಿಲ್ಲಾ ಉಸ್ತುವಾರಿ ಸಚಿವರಾರ‍ಯರು ಎಂಬ ಕುತೂಹಲವೂ ಮೂಡಿದೆ.

Vijaya Karnataka 25 Jul 2019, 5:00 am
ಫಾಲಲೋಚನ ಆರಾಧ್ಯ ಚಾಮರಾಜನಗರ
Vijaya Karnataka Web chamarajnagar ustuvari somanna kannu
ಚಾ.ನಗರ ಉಸ್ತುವಾರಿ: ಸೋಮಣ್ಣ ಕಣ್ಣು?


ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದ ರಾಜ್ಯ ಸಮ್ಮಿಶ್ರ ಸರಕಾರ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ವಿಫಲವಾಗುತ್ತಿದ್ದಂತೆ, ಹೊಸ ಸರಕಾರ ರಚನೆಯಂತೆಯೇ ಮುಂದಿನ ಜಿಲ್ಲಾ ಉಸ್ತುವಾರಿ ಸಚಿವರಾರ‍ಯರು ಎಂಬ ಕುತೂಹಲವೂ ಮೂಡಿದೆ.

ರಾಜ್ಯ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರಕಾರ ಉರುಳುತ್ತಲೇ ಇತ್ತ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ. ಪುಟ್ಟರಂಗಶೆಟ್ಟಿಯವರು ಸಹ ಶಾಸಕರಾಗಷ್ಟೇ ಉಳಿಯಲಿದ್ದಾರೆ. ಹೀಗಾಗಿ ಮುಂದೆ ಇವರ ಸ್ಥಾನವನ್ನು ತುಂಬುವವರಾರ‍ಯರು ಎಂಬುದು ಸದ್ಯದ ಪ್ರಶ್ನೆ.

ಬಿಜೆಪಿ ಪಕ್ಷವು ಸರಕಾರ ರಚಿಸುವುದು ಬಹುತೇಕ ಖಚಿತವಾದಂತೆಯೇ. ಹೀಗಾಗಿ ಜಿಲ್ಲೆಯಲ್ಲಿ ಬಿಜೆಪಿಯಿಂದ ಗೆದ್ದಿರುವುದು ಗುಂಡ್ಲುಪೇಟೆ ಕ್ಷೇತ್ರದ ಸಿ.ಎಸ್‌. ನಿರಂಜನಕುಮಾರ್‌ ಮಾತ್ರ. ನಿರಂಜನ್‌ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವುದೇ?

ಸದ್ಯದ ಪರಿಸ್ಥಿತಿಯಲ್ಲಿ ಅದು ಸ್ವಲ್ಪ ಕ್ಲಿಷ್ಟಕರ ಎಂದು ಕಾಣಿಸಿದರೂ, ಬಿ.ಎಸ್‌.ಯಡಿಯೂರಪ್ಪ ಅವರ ನೆಚ್ಚಿನವರಾದ ಕಾರಣಕ್ಕೆ ಆ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಹಿರಿಯರೆಲ್ಲರನ್ನೂ ಸಮಾಧಾನ ಪಡಿಸಬೇಕೆಂಬ ಕಾರಣಕ್ಕೆ ನಿರಂಜನ್‌ ಅವರಿಗೆ ಸಚಿವ ಸ್ಥಾನ ಸಿಗದೇ ಹೋದರೆ, ಇನ್ನ್ಯಾರು ಜಿಲ್ಲೆಯ ಉಸ್ತುವಾರಿ ಹೊರಲಿದ್ದಾರೆ ಎಂಬ ಕುತೂಹಲ ಸಹಜವಾಗೇ ಮನೆ ಮಾಡಿದೆ.

ಇನ್ನು ಹಿರಿತನ ಆಧಾರದಲ್ಲಿ ಸಚಿವ ಸ್ಥಾನ ಕೊಡುವುದಾದರೆ ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿಲ್ಲ. ಹೀಗಾಗಿ ಹೊರಗಿನವರಿಗೇ ಜಿಲ್ಲಾ ಉಸ್ತುವಾರಿ ದೊರೆಯಬಹುದು.

ಸೋಮಣ್ಣಗೆ ಚಾನ್ಸ್‌ ?: ಈ ಹಿಂದಿನ ಸರಕಾರಗಳಲ್ಲೂ ಹೀಗೆ ಹೊರ ಜಿಲ್ಲೆಯವರಿಗೆ ಇಲ್ಲಿನ ಉಸ್ತುವಾರಿ ಸಿಕ್ಕ ಸಾಕಷ್ಟು ನಿದರ್ಶನಗಳಿವೆ. ಅದೇ ಲೆಕ್ಕಾಚಾರ ಹಾಕುವುದಾದರೆ ಮತ್ತೇ ವಿ. ಸೋಮಣ್ಣ ಅವರಿಗೆ ಅವಕಾಶ ಸಿಕ್ಕಿದರೂ ಸಿಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಏಕೆಂದರೆ ಈ ಹಿಂದೆಯೂ ವಿ.ಸೋಮಣ್ಣ ಜಿಲ್ಲಾ ಉಸ್ತುವಾರಿಯ ನೊಗ ಹೊತ್ತಿದ್ದರು. ಆ ಅನುಭವದ ಮೇಲೆ ಅವರಿಗೆ ಜಿಲ್ಲೆಯ ಜವಾಬ್ದಾರಿ ನೀಡುವ ಸಾಧ್ಯತೆಯೂ ಇದೆ.

ಇವರಿಬ್ಬರನ್ನು ಹೊರತು ಪಡಿಸಿ ಮೂರನೆಯವರಿಗೂ ಜಿಲ್ಲೆಯ ಹೊಣೆಗಾರಿಕೆಯನ್ನು ಹೊರಿಸಲೂಬಹುದು. ಆದರೆ, ಈ ವಿಚಾರದ ಬಗ್ಗೆ ಸದ್ಯಕ್ಕಂತೂ ಕುತೂಹಲ ಇದ್ದೇ ಇದೆ.

ಎನ್‌.ಮಹೇಶ್‌ ಆಗ್ತಾರಾ ಮಂತ್ರಿ?

ಜಿಲ್ಲೆಯ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಸಮ್ಮಿಶ್ರ ಸರಕಾರದ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಗೈರು ಹಾಜರಾಗಿದ್ದರು.

ಈ ಗೈರು ಹಾಜರಿ ಹಿಂದೆ ಬಿಜೆಪಿ ಕೈವಾಡವಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ, ಇದನ್ನು ಎನ್‌.ಮಹೇಶ್‌ ತಳ್ಳಿ ಹಾಕಿದ್ದಾರೆ. ತಮ್ಮದು ತಟಸ್ಥ ನಿಲುವು. ನಾನು ಯಾರ ಪರವೂ ಇಲ್ಲ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ಮಹೇಶ್‌ ಸ್ಪಷ್ಟಪಡಿಸಿದ್ದಾರೆ.

ಆದರೆ, ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳೇ ಬೇರೆ. ಎನ್‌.ಮಹೇಶ್‌ ಅವರಿಗೆ ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಕ್ಕರೂ ಅಚ್ಚರಿ ಇಲ್ಲ. ಹೀಗಾಗಿ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾದರೂ ಆಗಬಹುದು ಎಂಬ ಗುಸು ಗುಸು ಕೂಡ ಇದೆ.

ಉತ್ತಮ ಸಂಘಟಕರಿಗೆ ಅವಕಾಶ

ಜಿಲ್ಲೆಯಲ್ಲಿ ಬಿಜೆಪಿ ಇದೀಗ ಚೇತರಿಕೆ ಹಾದಿಯಲ್ಲಿದೆ. ಗುಂಡ್ಲುಪೇಟೆ ಹಾಗೂ ಚಾ.ನಗರ ಲೋಕಸಭೆಯಲ್ಲಿ ಆ ಪಕ್ಷದ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಹೀಗಾಗಿ ಮುಂದಿನ ವಿಧಾನಸಭೆ ವೇಳೆಗೆ ಜಿಲ್ಲೆಯ ನಾಲ್ಕು ಕ್ಷೇತ್ರಗಳನ್ನು ಗೆಲ್ಲುವುದು ಬಿಜೆಪಿಯ ಪರಮ ಗುರಿಯಾಗಲಿದೆ. ಹೀಗಾಗಿ ಈಗ ಅಸ್ವಿತ್ವಕ್ಕೆ ಬರುವ ಬಿಜೆಪಿ ಸರಕಾರದಲ್ಲಿ ಗಡಿ ಜಿಲ್ಲೆಯ ಉಸ್ತುವಾರಿಯನ್ನು ಉತ್ತಮ ಸಂಘಟನಾ ಚತುರರಿಗೆ ಕೊಡುವುದರಲ್ಲಿ ಅನುಮಾನವೇ ಇಲ್ಲ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ. ಆದರೆ, ಆ ಸಂಘಟನಾ ಚತುರರು ಯಾರು ? ಆ ಚಾತುರ್ಯ ಯಾರಿಗಿದೆ ? ಎಂಬ ಪ್ರಶ್ನೆ ಕುತೂಹಲ ಕೆರಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ