ಆ್ಯಪ್ನಗರ

ಕೊರೊನಾ ಎಫೆಕ್ಟ್: ಫಾಸ್ಟ್‌ಫುಡ್ ವ್ಯಾಪಾರ ತತ್ತರ

​ಲಾಕ್‌ಡೌನ್‌ ಸಡಿಲಿಕೆಗೊಂಡು ಬಹುತೇಕ ಎಲ್ಲವೂ ಮುಕ್ತವಾಗುತ್ತಿದೆ. ಆದರೆ, ಬೀದಿ ಬದಿ ಫಾಸ್ಟ್‌ಫುಡ್‌ ಹಾಗೂ ಚಾಟ್ಸ್‌ ಕೇಂದ್ರಗಳಿಗೆ ಅವಕಾಶ ಸಿಗದೇ ಅವುಗಳ ಮಾಲೀಕರು ಹಾಗೂ ಅಲ್ಲಿನ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Vijaya Karnataka Web 24 May 2020, 6:36 am
ಫಾಲಲೋಚನ ಆರಾಧ್ಯ ಚಾಮರಾಜನಗರ
Vijaya Karnataka Web street food

ಚಾಮರಾಜನಗರ: ಹೋಟೆಲ್‌ ಹಾಗೂ ಕ್ಯಾಂಟೀನ್‌ಗಳು ತೆರೆದಿದ್ದು, ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಬೀದಿ ಬದಿಯ ಚಾಟ್ಸ್‌ ಕೇಂದ್ರಗಳು ಹಾಗೂ ಫಾಸ್ಟ್‌ಫುಡ್‌ ವ್ಯಾಪಾರಿಗಳಿಗೆ ಈ ಅವಕಾಶವೂ ಇಲ್ಲದಂತಾಗಿದೆ. ಹೀಗಾಗಿ ಈ ದುಡಿಮೆಯನ್ನೇ ಅವಲಂಬಿಸಿದ್ದವರು ಎರಡು ತಿಂಗಳಿಂದ ಕೆಲಸ, ಆದಾಯವಿಲ್ಲದೇ ಕುಗ್ಗಿ ಹೋಗಿದ್ದಾರೆ.

ಜಿಲ್ಲಾ ಕೇಂದ್ರ ಚಾಮರಾಜನಗರವೊಂದರಲ್ಲಿ ಈ ರೀತಿಯ ಬೀದಿ ಬದಿಯ ಚಾಟ್ಸ್‌ ಹಾಗೂ ಫಾಸ್ಟ್‌ಫುಡ್‌, ವಡೆ, ಬೋಂಡಾ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಕೇಂದ್ರಗಳಿವೆ. ಇನ್ನು ಇಡೀ ಜಿಲ್ಲೆಯನ್ನು ತೆಗೆದುಕೊಂಡರೇ ಈ ಅಂಕಿ, ಅಂಶ ಹತ್ತಾರು ಪಟ್ಟು ಹೆಚ್ಚಾಗುತ್ತದೆ. ಅಂದರೆ ಸಾವಿರಾರು ಕುಟುಂಬಗಳು ಇದೀಗ ಅಪಾಯಕ್ಕೆ ಸಿಲುಕಿವೆ.

ಷರತ್ತು ವಿಧಿಸಬಹುದಿತ್ತು
ಹೋಟೆಲ್‌, ಕ್ಯಾಂಟೀನ್‌ಗಳನ್ನು ತೆರೆಯಲು ವಿಧಿಸಿರುವ ಷರತ್ತುಗಳನ್ನೇ ಈ ಬೀದಿ ಬದಿಯ ಚಾಟ್ಸ್‌, ಫಾಸ್ಟ್‌ಫುಡ್‌, ವಡೆ, ಬೋಂಡಾ, ಬಜ್ಜಿ ಕೇಂದ್ರಗಳಿಗೂ ವಿಧಿಸಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬಹುದಿತ್ತು. ಆದರೆ, ಈ ಬಗ್ಗೆ ಯಾರೂ ಲಕ್ಷ್ಯ ವಹಿಸದಿರುವುದು ಹಾಗೂ ಆ ವ್ಯಾಪಾರಸ್ಥರ ಪರ ದನಿ ಎತ್ತದಿರುವುದು ದುರದೃಷ್ಟಕರ ಎಂದು ಫಾಸ್ಟ್‌ಫುಡ್‌ ವ್ಯಾಪಾರಿ ಅರವಿಂದ್‌ ತಮ್ಮ ಅಳಲು ತೋಡಿಕೊಂಡರು.''ಇನ್ನು ಕಟ್ಟಡದೊಳಗೆ ಇರುವ ಇದೇ ರೀತಿಯ ವ್ಯಾಪಾರಸ್ಥರಿಗೂ ಅವಕಾಶ ನೀಡಲಾಗಿದೆ. ಆದರೆ, ನಮಗೇಕೆ ಅನ್ಯಾಯ ಎಂದು ನೊಂದು ನುಡಿಯುತ್ತಾರೆ ವ್ಯಾಪಾರಿಗಳು. ಅಲ್ಲದೇ, ಹೋಟೆಲ್‌, ಕ್ಯಾಂಟೀನ್‌ಗಳಂತೆಯೇ ನಮ್ಮದು ಆಹಾರ ಪದಾರ್ಥದ ವ್ಯಾಪಾರ. ಕಟ್ಟಡದ ಒಳಗೆ ಇರುವ ಮಂದಿಗೊಂದು ನೀತಿ, ಬೀದಿ ಬದಿಯ ಅದೇ ವ್ಯಾಪಾರದವರಿಗೊಂದು ನೀತಿ, ಇದು ಸರಿಯಲ್ಲ,''ಎಂಬುದು ಅವರ ಆಕ್ಷೇಪ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ