ಆ್ಯಪ್ನಗರ

ಧ್ರುವನಾರಾಯಣ ನಾಮಪತ್ರ ಸಲ್ಲಿಕೆ

ಹ್ಯಾಟ್ರಿಕ್‌ ಬಾರಿಸುವ ಗುರಿಯೊಂದಿಗೆ ಆರ್‌. ಧ್ರುವನಾರಾಯಣ ಅವರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.

Vijaya Karnataka 26 Mar 2019, 5:00 am
ಚಾಮರಾಜನಗರ: ಹ್ಯಾಟ್ರಿಕ್‌ ಬಾರಿಸುವ ಗುರಿಯೊಂದಿಗೆ ಆರ್‌. ಧ್ರುವನಾರಾಯಣ ಅವರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.
Vijaya Karnataka Web CHN-CHN25UM1


ಬೆಳಗ್ಗೆ ಚಾಮರಾಜೇಶ್ವರ ದೇವಾಲಯದ ಮುಂಭಾಗದಿಂದ ತಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಹಸ್ರಾರು ಅಭಿಮಾನಿಗಳೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಜಿಲ್ಲಾಡಳಿತದ ಭವನದವರೆಗೆ ತೆರಳಿದರು.

ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೆರವಣಿಗೆಯನ್ನು ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಬಳಿಯೇ ತಡೆಯಲಾಯಿತು. ನಂತರ ಸಚಿವ ಸಿ. ಪುಟ್ಟರಂಗಶೆಟ್ಟಿ, ಶಾಸಕರಾದ ಆರ್‌. ನರೇಂದ್ರ, ಡಾ. ಯತೀಂದ್ರ, ಅನಿಲ್‌ ಚಿಕ್ಕಮಾದು ಅವರೊಂದಿಗೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.

ವಿಶೇಷ ಪೂಜೆ: ಇದಕ್ಕೂ ಮುನ್ನಾ ಬೆಳಗ್ಗೆಯೇ ಬಿಳಿಗಿರಿರಂಗನಬೆಟ್ಟಕ್ಕೆ ತೆರಳಿ ತಮ್ಮ ಮನೆ ದೇವರು ಬಿಳಿಗಿರಿರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಾರನಾಥ ಬೌದ್ಧ ವಿಹಾರಕ್ಕೆ ತೆರಳಿ ಬೌದ್ಧ ವಂದನೆ ಸಲ್ಲಿಸಿದರು. ಬಳಿಕ ಚಾಮರಾಜೇಶ್ವರ ದೇವಾಲಯ ಹಾಗೂ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ನಂತರ ರಾಮಸಮುದ್ರದಲ್ಲಿರುವ ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗೆ ನಮನ ಸಲ್ಲಿಸಿದರು.

ಇದಕ್ಕೂ ಮೊದಲು ಬಿರು ಬಿಸಿಲಿನ ನಡುವೆಯೇ ಚಾಮರಾಜೇಶ್ವರ ದೇವಾಲಯದಿಂದ ತೆರೆದ ವಾಹನದಲ್ಲಿ ಮೆರವಣಿಗೆ ಹೊರಡಲಾಯಿತು. ಉದ್ದಕ್ಕೂ ಕಾಂಗ್ರೆಸ್‌ ಕಾರ್ಯಕರ್ತರು ಧ್ರುವನಾರಾಯಣ ಪರ ಘೋಷಣೆ ಕೂಗಿದರು. ಸ್ವಲ್ಪ ಸಮಯದ ನಂತರ ಈ ಮೆರವಣಿಗೆ ಗುಂಪಿನಲ್ಲಿ ಜಾ.ದಳ ಕಾರ್ಯಕರ್ತರು ಸಹ ಕಾಣಿಸಿಕೊಂಡರು. ಆಗ ಕಾಂಗ್ರೆಸ್‌ ಹಾಗೂ ಜಾ.ದಳ ಧ್ವಜಗಳು ಒಟ್ಟಿಗೆ ಕಾಣಿಸಿಕೊಂಡವು. ಆ ಮೂಲಕ ಮೈತ್ರಿ ಮಂತ್ರವನ್ನು ಜಪಿಸಿದರು.

ಮೆರವಣಿಗೆಯಲ್ಲೂ ಧ್ರುವ ಅವರೊಂದಿಗೆ ಸಚಿವ ಪುಟ್ಟರಂಗಶೆಟ್ಟಿ, ಶಾಸಕರಾದ ಆರ್‌.ನರೇಂದ್ರ, ಡಾ.ಯತೀಂದ್ರ, ಅನಿಲ್‌ ಚಿಕ್ಕಮಾದು, ಮಾಜಿ ಶಾಸಕರಾದ ಎ.ಆರ್‌.ಕೃಷ್ಣಮೂರ್ತಿ, ಎಸ್‌. ಬಾಲರಾಜು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ. ಮರಿಸ್ವಾಮಿ, ಮಹಿಳಾ ಕಾಂಗ್ರೆಸ್‌ ನ ಲತಾ,ಜಿ.ಪಂ. ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಕೆರೆಹಳ್ಳಿ ನವೀನ್‌, ಮುಖಂಡರಾದ ಸೈಯದ್‌ ರಫಿ, ಅಸ್ಗರ್‌ ಮುನ್ನ, ಅರಕಲವಾಡಿ ಗುರುಸ್ವಾಮಿ, ಬಿ.ಕೆ.ರವಿಕುಮಾರ್‌, ಡಿ.ಎನ್‌. ನಟರಾಜು, ತೋಟೇಶ್‌ ಹಾಗೂ ಜಾ.ದಳ ಜಿಲ್ಲಾಧ್ಯಕ್ಷ ಕಾಮರಾಜ್‌, ಮುಖಂಡರಾದ ಮಹೇಶಗೌಡ, ಪಾಲ್ಗೊಂಡಿದ್ದರು.

ನನಗೆ ಅಭಿವೃದ್ಧಿಯೇ ಶ್ರೀರಕ್ಷೆ

ಕಳೆದ 10 ವರ್ಷಗಳಿಂದ ತಾವು ಕ್ಷೇತ್ರಕ್ಕೆ ತಂದಿರುವ ಯೋಜನೆಗಳನ್ನು ಮತದಾರರು ಗುರುತಿಸಿದ್ದು, ಈ ಚುನಾವಣೆಯಲ್ಲೂ ತನ್ನನ್ನು ಆಶೀರ್ವದಿಸಲಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಧ್ರುವನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು. ಸಂಸದನಾಗಿ ಜನರ ನಡುವೆ ಇದ್ದೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಕೈಗೊಂಡಿದ್ದೇನೆ. ಹೀಗಾಗಿ ಕಳೆದ ಬಾರಿಯಂತೆ ಹೆಚ್ಚು ಅಂತರದಿಂದ ಜಯಗಳಿಸಲಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಈ ಬಾರಿ ಕಾಂಗ್ರೆಸ್‌ ರಾಜ್ಯದಲ್ಲಿ ಜಾ.ದಳದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಕ್ಷೇತ್ರದಲ್ಲೂ ಜಾ.ದಳ ಮುಖಂಡರು, ಕಾರ್ಯಕರ್ತರನ್ನು ತಮ್ಮನ್ನು ಬೆಂಬಲಿಸಲಿದ್ದಾರೆ ಎಂದರು.

ಕೆಲಕಾಲ ಸಂಚಾರ ಅಸ್ತ ವ್ಯಸ್ತ

ಧ್ರುವನಾರಾಯಣ ಅವರು ನಾಮಪತ್ರ ಸಲ್ಲಿಸುವ ಕಾರ್ಯಕ್ರಮ ಇದ್ದ ಕಾರಣ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಸೇರಿದ್ದು, ಬಿ. ರಾಚಯ್ಯ ಜೋಡಿರಸ್ತೆಯಲ್ಲಿನ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು. ಒಂದು ಬದಿಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ, ವಾಹನ ಇದ್ದ ಕಾರಣ ಮತ್ತೊಂದು ಬದಿ ರಸ್ತೆಯಲ್ಲೇ ಎರಡು ಕಡೆ ವಾಹನಗಳೂ ಓಡಾಡುವಂತಾಯಿತು. ಇನ್ನು ಈ ವೇಳೆ ಜಿಲ್ಲಾಡಳಿತ ಭವನಕ್ಕೂ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಯಿತ್ತಾದ್ದರಿಂದ ತಮ್ಮ ಕೆಲಸ, ಕಾರ್ಯಗಳಿಗೆ ಆಗಮಿಸಿದ್ದ ಸಾಕಷ್ಟು ಮಂದಿ ಒಂದು ತಾಸಿಗೂ ಹೆಚ್ಚು ಕಾಲ ಕಾಯಬೇಕಾಯಿತು. ಜಿಲ್ಲಾಡಳಿತ ಭವನದ ಮುಂದೆ ಹಾಗೂ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ