ಆ್ಯಪ್ನಗರ

ಡಿಎಲ್‌ ದಲ್ಲಾಳಿ ಹಾವಳಿ ತಪ್ಪಿಸಿ

ನಿಗದಿಗಿಂತ ಹೆಚ್ಚು ಭಾರದ ಕರಿಕಲ್ಲುಸಾಗಣೆಯಿಂದ ಗ್ರಾಮದ ರಸ್ತೆ, ಸೇತುವೆ ಹದಗೆಟ್ಟಿದ್ದು, ಗ್ರಾಮದೊಳಗೆ ಸಂಚರಿಸದಂತೆ ಪರ್ಯಾಯ ಮಾರ್ಗ ಸೂಚಿಸಬೇಕು, ಕಸಾಯಿಖಾನೆಗಳಿಗೆ ದನಕರುಗಳು ಸಾಗಣೆಯಾಗದಂತೆ ತಡೆಯಬೇಕು ಎಂಬುದು ಸೇರಿದಂತೆ ನಾನಾ ಬಗೆಯ ದೂರುಗಳು ಶನಿವಾರ ನಡೆದ ನೇರ ಫೋನ್‌ ಇನ್‌ ಕಾರ‍್ಯಕ್ರಮದಲ್ಲಿದಾಖಲಾದವು.

Vijaya Karnataka 17 Nov 2019, 5:00 am
ಚಾಮರಾಜನಗರ: ನಿಗದಿಗಿಂತ ಹೆಚ್ಚು ಭಾರದ ಕರಿಕಲ್ಲುಸಾಗಣೆಯಿಂದ ಗ್ರಾಮದ ರಸ್ತೆ, ಸೇತುವೆ ಹದಗೆಟ್ಟಿದ್ದು, ಗ್ರಾಮದೊಳಗೆ ಸಂಚರಿಸದಂತೆ ಪರ್ಯಾಯ ಮಾರ್ಗ ಸೂಚಿಸಬೇಕು, ಕಸಾಯಿಖಾನೆಗಳಿಗೆ ದನಕರುಗಳು ಸಾಗಣೆಯಾಗದಂತೆ ತಡೆಯಬೇಕು ಎಂಬುದು ಸೇರಿದಂತೆ ನಾನಾ ಬಗೆಯ ದೂರುಗಳು ಶನಿವಾರ ನಡೆದ ನೇರ ಫೋನ್‌ ಇನ್‌ ಕಾರ‍್ಯಕ್ರಮದಲ್ಲಿದಾಖಲಾದವು.
Vijaya Karnataka Web ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನೇರೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿದರು.


ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಕಾರ‍್ಯಕ್ರಮದ ಒಂದು ಗಂಟೆ ಅವಧಿಯಲ್ಲಿಒಟ್ಟು 33 ದೂರು ದಾಖಲಾದವು.

ದಲ್ಲಾಳಿಗಳಿಗೆ ಕಡಿವಾಣ ಹಾಕಿ: ''ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಹನ ಚಾಲನಾ ಪರವಾನಗಿ, ನೋಂದಣಿ ಸೇರಿದಂತೆ ಎಲ್ಲಸಾರ್ವಜನಿಕ ಸೇವೆಗಳು ಆನ್‌ಲೈನ್‌ ಮೂಲಕ ನಡೆಯಬೇಕಾಗಿದೆ. ಈ ವ್ಯವಸ್ಥೆಯಲ್ಲಿ ದಲ್ಲಾಳಿಗಳಿಗೆ ಅವಕಾಶವಿಲ್ಲ. ಆದರೆ, ನಗರದ ಆರ್‌ಟಿಒ ಕಚೇರಿಯಲ್ಲಿ ದಲ್ಲಾಳಿಗಳಿಲ್ಲದೇ ಯಾವುದೇ ಕೆಲಸವಾಗುತ್ತಿಲ್ಲ. ಜತೆಗೆ ಲಂಚದ ಹಾವಳಿಯೂ ಹೆಚ್ಚಾಗಿದೆ. ಜಿಲ್ಲಾಡಳಿತ ಕೂಡಲೇ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಕ್ರಮವಹಿಸಬೇಕು,'' ಎಂದು ಚಾಮರಾಜನಗರ ನಿವಾಸಿ ದೂರಿದರು.

ಕರಿಕಲ್ಲುಸಾಗಣೆ: ಸಿದ್ದಯ್ಯನಪುರ ಸಿದ್ದರಾಜು ಕರೆಮಾಡಿ, ''ತಾಲೂಕಿನ ಚಂದಕವಾಡಿ, ಸಿದ್ದಯ್ಯನಪುರ, ದಡದಹಳ್ಳಿ ಗ್ರಾಮಗಳ ಮೂಲಕ ರಾತ್ರಿ 7 ಗಂಟೆಯಾದರೆ 6 ರಿಂದ 7 ಕರಿಕಲ್ಲುತುಂಬಿದ ಲಾರಿಗಳು ನಿಗದಿಗಿಂತ ಹೆಚ್ಚು ಭಾರದ ಕಲ್ಲನ್ನು ತುಂಬಿಕೊಂಡು ಸಾಗಣೆ ಮಾಡುತ್ತಿವೆ, ನಾವು ಲಾರಿ ತಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಅತಿಯಾದ ಭಾರದ ಕಲ್ಲುಸಾಗಣೆ ಪರಿಣಾಮ ಡಾಂಬರು ರಸ್ತೆ ಕಿತ್ತುಬಂದಿವೆ, ಹಲವೆಡೆ ಸೇತುವೆಗಳು ಜಖಂ ಆಗಿವೆ, ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಕರಿಕಲ್ಲುಸಾಗಣೆ ಲಾರಿಗಳು ಗ್ರಾಮದೊಳಗೆ ಸಂಚರಿಸಬಾರದಂತೆ ಅವುಗಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಕ್ರಮವಹಿಸುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ಸೂಚನೆ ನೀಡಬೇಕು,'' ಎಂದು ದೂರಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಪ್ರತಿಕ್ರಿಯಿಸಿ,''ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಎಲ್ಲ ಕೆಲಸ ಕಾರ್ಯಗಳು ಆನ್‌ಲೈನ್‌ನಲ್ಲಿಆಗುವುದರಿಂದ ದಲ್ಲಾಳಿ ಅಥವಾ ಲಂಚ ನೀಡುವ ಪ್ರಮೇಯವೇ ಇಲ್ಲ. ಒಂದು ವೇಳೆ ಅಂತಹ ಪ್ರಕರಣಗಳು ಇದ್ದಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ,'' ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚಿಸುವುದಾಗಿ ಹೇಳಿದರು.

''ಕರಿಕಲ್ಲುಸಾಗಣೆಯಿಂದ ಆಗುತ್ತಿರುವ ಸಮಸ್ಯೆ ಕುರಿತಂತೆ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿಯವರ ಗಮನಕ್ಕೆ ತಂದು ಪರಿಹರಿಸುವುದಾಗಿ,'' ಭರವಸೆ ನೀಡಿದರು.

ಕಸಾಯಿಖಾನೆಗೆ ಜಾನುವಾರು: ''ಗುಂಡ್ಲುಪೇಟೆ ತಾಲೂಕಿನ ತ್ರಿಯಂಬಕಪುರ, ಕಗ್ಗಳ ಸೇರಿದಂತೆ ನಾನಾ ಗ್ರಾಮಗಳಲ್ಲಿಜಾನುವಾರುಗಳು ಕೇರಳದ ಕಸಾಯಿಖಾನೆಗೆ ರವಾನೆಯಾಗುತ್ತಿವೆ. ಪ್ರತಿವಾರ ನಡೆಯುವ ತೆರಕಣಾಂಬಿ ಸಂತೆಯಲ್ಲಿಈ ದಂಧೆ ಹೆಚ್ಚಾಗಿ ನಡೆಯುತ್ತಿದೆ. ಕೂಡಲೇ ಜಿಲ್ಲಾಡಳಿತ ಸೂಕ್ತಕ್ರಮಕೈಗೊಂಡು ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು,'' ಎಂದು ತೆರಕಣಾಂಬಿ ಮಹೇಶ್‌ ದೂರಿದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ' ಕೇರಳದ ಕಸಾಯಿಖಾನೆಗೆ ಜಾನುವಾರುಗಳ ಸಾಗಣೆ ಸಂಬಂಧಿಸಿದಂತೆ ತಡೆಯಲು ಪೊಲೀಸ್‌ ಇಲಾಖೆಗೆ ಸೂಚಿಸುವುದಾಗಿ ಭರವಸೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್‌, ಜಿಲ್ಲಾಪಂಚಾಯಿತಿ ಸಿಇಒ ಹರ್ಷಲ್‌ ಬೋಯಾರ್‌ ಸೇರಿದಂತೆ ಜಿಲ್ಲಾ ಅಧಿಕಾರಿಗಳು ಹಾಜರಿದ್ದರು.

ಸ್ಥಳೀಯ ಸಮಸ್ಯೆಗಳೇ ಹೆಚ್ಚು

ಜಿಲ್ಲಾಡಳಿತದ ವತಿಯಿಂದ ನಡೆದ ನೇರಪೋನ್‌ ಇನ್‌ ಕಾರ‍್ಯಕ್ರಮದಲ್ಲಿಕೊಳ್ಳೇಗಾಲ ಮತ್ತು ಚಾಮರಾಜನಗರ ನಗರಸಭೆಗೆ ಸಂಬಂಧಪಟ್ಟಂತೆ ಮೂಲಸೌಕರ್ಯ ಹಾಗೂ ಸ್ವಚ್ಛತೆ ಸಂಬಂಧಿ ದೂರುಗಳೇ ಹೆಚ್ಚಾಗಿ ದಾಖಲಾದವು.

ನವೀನ್‌ಕುಮಾರ್‌ ಎಂಬವರು'10 ನೇ ವಾರ್ಡಿನಲ್ಲಿಚರಂಡಿ ಸ್ವಚ್ಛಮಾಡದ ಪರಿಣಾಮ ಸೊಳ್ಳೆ ಕಾಟ ಮಿತಿ ಮೀರಿದೆ ಎಂದರೆ, ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಮಹದೇಶ್ವರಬಡಾವಣೆ ಮೂಲಸೌಕರ್ಯಗಳಿಂದ ವಂಚಿತವಾಗಿದೆ, ಉತ್ತವಳ್ಳಿಯಿಂದ ಬಂಜಾರಶಾಲೆಗೆ ತೆರಳುವ ರಸ್ತೆ ಅಭಿವೃದ್ಧಿಯಾಗಿಲ್ಲ. ನಗರದ ಭುವನೇಶ್ವರಿವೃತ್ತದಲ್ಲಿಪ್ಯಾಸೆಂಜರ್‌ ಆಟೋಗಳನ್ನು ನಿಲ್ಲಿಸಲಾಗುತ್ತಿದ್ದು, ಇದರಿಂದ ಖಾಸಗಿಬಸ್‌ ಗಳಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಇದಕ್ಕೆ ಪರಿಹಾರ ಸೂಚಿಸಬೇಕು ಎಂಬ ದೂರುಗಳು ಕೇಳಿ ಬಂದವು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಸ್ಥಳೀಯಸಂಸ್ಥೆಗಳ ಸಮಸ್ಯೆಗಳನ್ನು ಆಯಾಯ ನಗರಸಭೆ ಆಯುಕ್ತರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಹಾರ ಮಾಡಬೇಕು ಎಂದು ಆದೇಶ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ