ಆ್ಯಪ್ನಗರ

ನೀರಾವರಿ ಇಲಾಖೆ ಅಧಿಕಾರಿಗೆ ರೈತರ ಘೇರಾವ್

ಕಬಿನಿ ಕಾಲುವೆಯಲ್ಲಿ ನೀರು ಹರಿಯುತ್ತಿದ್ದರೂ ಕೆರೆಗಳಿಗೆ ನೀರು ತುಂಬಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವನೆ ತೋರುತ್ತಿದ್ದಾರೆ ಎಂದು ಆರೋಪಿಸಿ ಕಾವೇರಿ ನೀರಾವರಿ ಇಲಾಖೆಯ ಕಾರ್ಯಪಾಲಕ ಆಭಿಯಂತರ ರಘು ಅವರಿಗೆ ರೈತ ಸಂಘದ ಸದಸ್ಯರು ಘೇರಾವ್ ಹಾಕಿದರು.

Vijaya Karnataka 21 Aug 2019, 9:14 pm
ಯಳಂದೂರು: ಕಬಿನಿ ಕಾಲುವೆಯಲ್ಲಿ ನೀರು ಹರಿಯುತ್ತಿದ್ದರೂ ಕೆರೆಗಳಿಗೆ ನೀರು ತುಂಬಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವನೆ ತೋರುತ್ತಿದ್ದಾರೆ ಎಂದು ಆರೋಪಿಸಿ ಕಾವೇರಿ ನೀರಾವರಿ ಇಲಾಖೆಯ ಕಾರ್ಯಪಾಲಕ ಆಭಿಯಂತರ ರಘು ಅವರಿಗೆ ರೈತ ಸಂಘದ ಸದಸ್ಯರು ಘೇರಾವ್ ಹಾಕಿದರು.
Vijaya Karnataka Web CHN-CHN21YLD1


ತಾಲೂಕಿನ ದುಗ್ಗಹಟ್ಟಿ ಗ್ರಾಮದಲ್ಲಿ ಕಬಿನಿ ಕಾಲುವೆಯಲ್ಲಿ ಆ.5ರಿಂದ ನೀರು ಹರಿಸಲಾಗುತ್ತಿದೆ. ಆದರೆ, ತಾಲೂಕಿನ ಇನ್ನೂ ಕೆಲವು ಕೆರೆಗಳಿಗೆ ನೀರು ತುಂಬುತ್ತಿಲ್ಲ. ಕಾಲುವೆ ದುರಸ್ತಿ ಮಾಡಿದ್ದರೂ ಕಾಮಗಾರಿ ಕಳಪೆಯಾಗಿದೆ. ಜಂಗಲ್ ಕಟಿಂಗ್ ಪೂರ್ಣವಾಗಿ ಮಾಡದ ಕಾರಣ ನೀರು ಸರಿಯಾಗಿ ಹರಿಯುತ್ತಿಲ್ಲ. ಕೆರೆಗಳಿಗೆ ನೀರು ತುಂಬಿಸುವ ತೂಬುಗಳು ಸರಿಯಾಗಿಲ್ಲ. ಈ ಕಾಲುವೆಯಲ್ಲಿ ಹೂಳು ತುಂಬಿದೆ. ನೀರು ಹೆಚ್ಚುವರಿಯಾಗಿ ಬಿಟ್ಟಿದ್ದರೂ ಕಾರ್ಯಪಾಲಕ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ. ಹಲವು ಬಾರಿ ಇಲಾಖೆಗೆ ಮನವಿ ಮಾಡಿದ್ದರೂ ಕ್ರಮ ವಹಿಸಿಲ್ಲ,’’ ಎಂದು ತರಾಟೆಗೆ ತೆಗೆದುಕೊಂಡರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ‘‘ಕಬಿನಿ ಕಾಲುವೆಯಲ್ಲಿ ನೀರಿನ ಹರಿವು ಈಗ ಹೆಚ್ಚಿದ 10 ದಿನ ಕಳೆದರೂ ಕೆರೆಗಳಿಗೆ ನೀರು ತುಂಬಿಸಲು ಇಲಾಖೆ ಕ್ರಮ ವಹಿಸಿಲ್ಲ. ಯಳಂದೂರು, ದುಗ್ಗಹಟ್ಟಿ, ಹೊನ್ನೂರು, ಕಂದಹಳ್ಳಿ ಯರಿಯೂರು ಕೆರೆಗಳಿಗೆ ಇನ್ನೂ ನೀರು ತುಂಬಿಲ್ಲ. ಇಲ್ಲಿನ ಕಾಲುವೆಗಳ ದುರಸ್ತಿ ಸರಿಯಾಗಿ ಆಗಿಲ್ಲ. ಈಗ ಕಬಿನಿ ಜಲಾಶಯದಲ್ಲಿ ನೀರು ಸಾಕಷ್ಟು ಇದೆ. ಈ ನೀರನ್ನು ತಮಿಳುನಾಡಿಗೆ ಹರಿಸುವ ಬದಲು ನಮ್ಮ ಕೆರೆಗಳನ್ನು ತುಂಬಿಸಲು ಕ್ರಮ ವಹಿಸಬೇಕು. ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಹಾಜರಿರಬೇಕು. ಕಾಲುವೆಯ ರಸ್ತೆಗಳನ್ನು ದುರಸ್ತಿ ಮಾಡಬೇಕು,’’ ಎಂದು ಮನವಿ ಮಾಡಿದರು.

ನೀರಾವರಿ ಇಲಾಖೆಯ ಇಇ ರಘು ಮಾತನಾಡಿ,‘‘ಈಗ ಕಾಲುವೆಯಲ್ಲಿ 1800 ಕ್ಯೂಸೆಕ್ ನೀರು ಹರಿಯುತ್ತಿದೆ. ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆಯುತ್ತಿದೆ. ಯಳಂದೂರು ಕೆರೆ ಶೇ. 15 ರಷ್ಟು ತುಂಬಿದೆ. ಮುಂದಿನ 20 ದಿನಗಳಲ್ಲಿ ಇದರ ವ್ಯಾಪ್ತಿಯ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಲು ಕ್ರಮ ವಹಿಸಲಾಗುವುದು. ರೈತರ ಸಂಪೂರ್ಣ ಬೆಳೆಗಳಿಗೆ ನೀರು ಹರಿಸುವ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅಲ್ಲಿ ತೀರ್ಮಾನ ಕೈಗೊಳ್ಳಲಾಗುವುದು,’’ ಎಂದು ಮಾಹಿತಿ ನೀಡಿದರು.

ತಹಸೀಲ್ದಾರ್ ವರ್ಷ ಮಾತನಾಡಿ, ‘‘ ರೈತರ ಸಮಸ್ಯೆಗಳಿಗೆ ಇಲಾಖೆ ಆದಷ್ಟು ಬೇಗ ಸ್ಪಂದಿಸಬೇಕು. ಈ ಭಾಗದ ಕೆರೆಗಳು ದೊಡ್ಡದಾಗಿದ್ದು, ಇದನ್ನು ತುಂಬಿಸಲು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ಸಲ್ಲಿಸಿ ಕ್ರಮ ವಹಿಸಲಾಗುವುದು,’’ ಎಂದು ಎಚ್ಚರಿಸಿದರು. ಈ ಬಗ್ಗೆ ಲಿಖಿತ ದೂರು ನೀಡುವಂತೆ ರೈತ ಸಂಘದ ಸದಸ್ಯರಿಗೆ ಮನವಿ ಮಾಡಿದರು.

ಎಇಇ ಪ್ರಸನ್ನಕುಮಾರ್, ಜೆಇ ರಾಮಕೃಷ್ಣ, ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ಧಲಿಂಗಸ್ವಾಮಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ